ಹಳೇ ದ್ವೇಷ ಹಿನ್ನೆಲೆ: ಸ್ನೇಹಿತರಿಂದಲೇ ರೌಡಿಶೀಟರ್‌ ಕೊಲೆ

Update: 2019-01-17 15:29 GMT

ಬೆಂಗಳೂರು, ಜ.17: ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್‌ನನ್ನು ಆತನ ಸ್ನೇಹಿತನೇ ಮಾರಕಾಸ್ತ್ರಗಳಿಂದ ಇರಿದು ಕೊಲೆಗೈದಿರುವ ಘಟನೆ ನಡೆದಿದೆ.

ಕಾಟನ್‌ಪೇಟೆ ನಿವಾಸಿ ಸತೀಶ್(28) ಕೊಲೆಯಾದ ರೌಡಿಶೀಟರ್ ಆಗಿದ್ದು, ಸತೀಶ್ ಮತ್ತು ಆತನ ಸ್ನೇಹಿತ ಪ್ರಶಾಂತ್ ಎಂಬುವವನ ಮಧ್ಯೆ ಹಲವು ವರ್ಷಗಳ ಹಿಂದೆ ಜಗಳ ನಡೆದಿತ್ತು. ಇದೇ ವಿಚಾರಕ್ಕೆ ದ್ವೇಷವನ್ನಿಟ್ಟುಕೊಂಡಿದ್ದ ಪ್ರಶಾಂತ್ ಬುಧವಾರ ಬೆಳಗ್ಗೆ ಕಾಟನ್‌ಪೇಟೆಯ ಅಂಜನಪ್ಪಗಾರ್ಡನ್ ಬಳಿಯ ಲೇನ್‌ನಲ್ಲಿ ಡ್ರಾಗರ್‌ನಿಂದ ಕೊಲೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕಾಟನ್‌ಪೇಟೆ ಪೊಲೀಸರು ಆರೋಪಿ ಪ್ರಶಾಂತ್ ಪತ್ತೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News