ಜ.23 ರಿಂದ ಕೇಂದ್ರ ಸರಕಾರದ ರಕ್ಷಣಾ ನೀತಿ ವಿರೋಧಿಸಿ ರಾಷ್ಟ್ರದಾದ್ಯಂತ ಮುಷ್ಕರ

Update: 2019-01-22 15:44 GMT

ಬೆಂಗಳೂರು, ಜ.22: ರಕ್ಷಣಾ ಉದ್ಯಮವನ್ನು ನಿಷ್ಕ್ರಿಯಗೊಳಿಸುತ್ತಿರುವ ಕೇಂದ್ರ ಸರಕಾರದ ನೀತಿಯನ್ನು ವಿರೋಧಿಸಿ ಜ.23 ರಿಂದ 3 ದಿನಗಳ ಕಾಲ ದೇಶದಾದ್ಯಂತ ಮುಷ್ಕರವನ್ನು ಹಮ್ಮಿಕೊಂಡಿದ್ದೇವೆ ಎಂದು ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯೀಸ್ ಫೆಡರೇಷನ್ ಉಪಾಧ್ಯಕ್ಷ ಎಂ.ಕೆ.ರವೀಂದ್ರ ಪಿಳ್ಳೆ ತಿಳಿಸಿದ್ದಾರೆ.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ಷಣಾ ಉದ್ಯಮದ ಖಾಸಗೀಕರಣ ತಡೆಯಲು ಹಾಗೂ ನಿವೃತ್ತಿ ವೇತನದ ಹಕ್ಕನ್ನು ಮರಳಿ ಪಡೆಯಲು ಮೂರು ದಿನಗಳ ಮುಷ್ಕರವನ್ನು ಬೆಂಗಳೂರಿನ ಆರ್‌ಟಿ ನಗರ, ಸಿವಿ ರಾಮನ್ ನಗರ ಮತ್ತು ಟಿವಿ ಟವರ್‌ನಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಸರಕಾರವು ಖಾಸಗಿ ಕಾರ್ಪೊರೇಟ್ ಸಂಸ್ಥೆಗಳನ್ನು ಬಲಪಡಿಸುವ ಉದ್ದೇಶದಿಂದ ಪ್ರಮುಖ ರಕ್ಷಣಾ ತಯಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಾದ ಸಂಶೋಧನೆ ಹಾಗೂ ಸೇವಾ ಕಾರ್ಯಗಳನ್ನು ಅಂಬಾನಿ ಮತ್ತು ಅದಾನಿಗಳ ಗುಂಪಿಗೆ ವಹಿಸಲು ತೀರ್ಮಾನಿಸಿರುವುದು ಸರಿಯಾದುದಲ್ಲ. ಇದರಿಂದಾಗಿ, ನಾಲ್ಕು ಲಕ್ಷ ರಕ್ಷಣಾ ನಾಗರಿಕ ಉದ್ಯೋಗಿಗಳು ಕೇಂದ್ರ ಸರಕಾರದ ನೌಕರರ ವಿರೋಧಿ ನೀತಿಯಿಂದ ರೋಸಿ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸರಕಾರದ ರಕ್ಷಣಾ ನೀತಿಗಳು ದೇಶದ ಉದ್ಧಾರಕ್ಕಾಗಿ ಇವೆಯೋ ಅಥವಾ ಖಾಸಗಿ ಕಾರ್ಪೊರೇಟ್‌ಗಳ ಉದ್ಧಾರಕ್ಕಾಗಿ ಇವೆಯೋ ಎಂಬುದೇ ತಿಳಿಯುತ್ತಿಲ್ಲ. ಕಾರ್ಪೋರೇಟ್ ವ್ಯವಸ್ಥೆಯಡಿ ದೇಶದ ಸೈನಿಕರಿಗೆ ಸ್ವೇಚ್ಛಾ ಸ್ವಾತಂತ್ರವನ್ನು ನೀಡಬೇಕು. ಅವರಿಗೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಪಡೆಯಲು ನಿರ್ಬಂಧಿಸದೇ, ಅವರಿಗೆ ಅನುಮತಿ ನೀಡಬೇಕು. ಈ ಎಲ್ಲ ವಿಚಾರಗಳನ್ನು ಸರಕಾರ ಸಂಸತ್ತಿನೊಳಗೆ ಹಾಗೂ ಹೊರಗೆ ಚರ್ಚಿಸಬೇಕು ಎಂದು ಆಗ್ರಹಿಸಿದರು.

ದೇಶದ ಶಾಂತಿ ಸ್ಥಾಪನೆಗಾಗಿ, ರಕ್ಷಣಾ ಉದ್ಯಮಗಳಲ್ಲಿ ಸ್ವಾವಲಂಬನೆ ಸಾಧಿಸಲು ರಕ್ಷಣಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸಂಸ್ಥೆಯಲ್ಲಿನ ಕೌಶಲ್ಯಭರಿತ ನೌಕರರು ಹಗಲಿರುಳು ಶ್ರಮಿಸುತ್ತಿದ್ದು, ಗೌರವವನ್ನು ಸಾಧಿಸಲು ಒದ್ದಾಡುತ್ತಿದ್ದಾರೆ. ಆದರೆ, ಸರಕಾರ ಅವರನ್ನು ಉತ್ತೇಜಿಸಿ, ಶಕ್ತಿಯುತಗೊಳಿಸುವುದರ ಬದಲಾಗಿ, ರಕ್ಷಣಾ ಘಟಕಗಳನ್ನು ಬೇಕಂತಲೇ ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಆರೋಪ ಮಾಡಿದರು.

ಸರಕಾರವು ಸೈನಿಕರಿಗೆ, ಸೈನಿಕರ ಅಧೀನದಲ್ಲಿರುವ ಉದ್ಯಮಗಳಿಗೆ ಮತ್ತು ಘಟಕಗಳಿಗೆ ಪೋಷ್ಟಿಕಾಂಶ ಭರಿತ ಹಾಲನ್ನು ಸರಬರಾಜು ಮಾಡುತ್ತಿದ್ದ ಸೇನಾ ಕೃಷಿ ವಲಯಗಳನ್ನು, ತನ್ನ ಕಾರ್ಯನೀತಿ ಅನ್ವಯ ಮುಚ್ಚಲು ನಿರ್ಧರಿಸಿದೆ. ಅಲ್ಲದೆ, ಡಿಆರ್‌ಡಿಓದಲ್ಲಿ ಮಾನವ ಸಂಪನ್ಮೂಲವನ್ನು ಗಣನೀಯವಾಗಿ ತಗ್ಗಿಸಲಾಗಿದೆ ಎಂದು ಎಂ.ಕೆ.ರವೀಂದ್ರ ಪಿಳ್ಳೆ ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರಿ ನೌಕರರ ನಿವೃತ್ತಿ ವೇತನದ ಹಕ್ಕನ್ನು ನ್ಯಾಯಾಲಯವು ಜಾರಿಗೊಳಿಸಿದರೂ, ಕೇಂದ್ರ ಸರಕಾರ ಇದನ್ನು ಕಸಿದುಕೊಂಡಿದೆ.

-ಎಂ.ಕೆ.ರವೀಂದ್ರ ಪಿಳ್ಳೆ, ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯೀಸ್ ಫೆಡರೇಷನ್‌ನ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News