ಸಿದ್ಧಗಂಗಾ ಶ್ರೀಗಳ ಸೇವೆ ಗೌರವಿಸದ ಕೇಂದ್ರ ಸರಕಾರ: ಎಂ.ಬಿ.ಪಾಟೀಲ್

Update: 2019-01-26 13:31 GMT

ಬೆಂಗಳೂರು, ಜ.26: ತುಮಕೂರಿನ ಸಿದ್ಧಗಂಗಾ ಮಠದ ಪಿಠಾಧಿಪತಿಗಳಾಗಿದ್ದ ಶತಾಯುಷಿ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮಿಯ ಜೀವಮಾನ ಸೇವಾ ಕಾರ್ಯಕ್ಕೆ ಕೇಂದ್ರ ಸರಕಾರವೇ ಸ್ವಯಂ ಪ್ರೇರಿತವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕಾಗಿತ್ತು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸಿದ್ಧಗಂಗಾ ಶ್ರೀ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದಲ್ಲದೇ, ಬಡ ಮಕ್ಕಳಿಗಾಗಿ ಉಚಿತ ಪ್ರಸಾದನಿಲಯ ಆರಂಭಿಸಿದರು. ಹಳ್ಳಿ-ಹಳ್ಳಿಗೆ ಸಂಚರಿಸಿ ಭಿಕ್ಷೆಯೆತ್ತಿ ಸುಮಾರು 90ವರ್ಷಗಳ ಕಾಲ ನಿರಂತರವಾಗಿ ಲಕ್ಷಾಂತರ ಶಾಲಾ ಮಕ್ಕಳಿಗೆ ಅಕ್ಷರ, ಅನ್ನ, ಆಶ್ರಯ ನೀಡಿದ್ದು, ಈ ಮೂಲಕ ಇವರು ಸೇವೆ ಎಂಬ ಅಕ್ಷರಗಳಿಗೆ ಹೊಸ ಅರ್ಥ ತಂದಿದ್ದಾರೆ ಎಂದು ತಿಳಿಸಿದ್ದಾರೆ. ಕೇಂದ್ರ ಸರಕಾರದಿಂದ ಪದ್ಮಭೂಷಣ, ಕರ್ನಾಟಕ ಸರಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನಾಗಿರುವ ಇವರಿಗೆ, ತಮ್ಮ ಜೀವಮಾನ ಸೇವಾ ಕಾರ್ಯಕ್ಕೆ ಕೇಂದ್ರ ಸರಕಾರವೇ ಸ್ವಯಂ ಪ್ರೇರಿತವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕಾಗಿತ್ತು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

ನಮ್ಮ ರಾಜ್ಯದಿಂದ ಈ ಕುರಿತ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಹಾಗೂ ರಾಷ್ಟ್ರದ ಹಲವಾರು ಗಣ್ಯರು, ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಪ್ರಮುಖರು ಸಿದ್ಧಗಂಗಾ ಶ್ರೀಗಳಿಗೆ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಕಾಲ-ಕಾಲಕ್ಕೆ ವಿವಿಧ ವೇದಿಕೆಗಳಲ್ಲಿ ವಿನಂತಿಸಿಕೊಂಡಾಗಲೂ ಇದೀಗ ಪ್ರಕಟಿಸಿದ ಭಾರತ ರತ್ನ ಪ್ರಶಸ್ತಿಯಲ್ಲಿ ಶ್ರೀಗಳ ಹೆಸರಿಲ್ಲದಿರುವುದು ಇಡೀ ನಾಡಿಗೆ ದಿಗಿಲು ಬಡಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ಸೇವಾ ಕಾರ್ಯಗಳ ಮೂಲಕವೆ ಕೋಟ್ಯಂತರ ಜನರ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಪಡೆದುಕೊಂಡಿರುವ ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರವಾಗಿಯಾದರೂ ಭಾರತ ರತ್ನ ಪ್ರಶಸ್ತಿ ನೀಡಿಯೇ ನೀಡುತ್ತಾರೆ ಎಂದು ನಾವೆಲ್ಲ ಭಾವಿಸಿದ್ದೆವು ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ. ಈ ಕುರಿತು ಜಾತ್ಯತೀತವಾಗಿ, ಪಕ್ಷಾತೀತವಾಗಿ ಸರ್ವರೂ ವಿನಂತಿ ಮಾಡಿಕೊಂಡಿದ್ದರು. ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಕೇಂದ್ರ ಸರಕಾರ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡದೇ ಇರುವ ಮೂಲಕ ಕರ್ನಾಟಕದ ಕುರಿತು ತನ್ನ ಅಸಡ್ಡೆಯನ್ನು ಮುಂದುವರಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ಪೂರ್ವದಿಂದಲೂ ಸರಕಾರ ಮಾಡಲಾರದ ಕೆಲಸವನ್ನು ತಮ್ಮ ಸೇವಾ ಸಂಸ್ಥೆಗಳ ಮೂಲಕ ಈ ಭಾಗದಲ್ಲಿ ಅಕ್ಷರದ ಜಾಗೃತಿಯನ್ನು ಮೂಡಿಸಿದ, ಲಕ್ಷಾಂತರ ಬಡ ಶಾಲಾ ಮಕ್ಕಳಿಗೆ ಆಶ್ರಯ ನೀಡಿದ ತನ್ಮೂಲಕ ಈ ಭಾಗವನ್ನು ಬೆಳಗಿದ 111ವರ್ಷಗಳ ಪರಮಪೂಜ್ಯರ ಸೇವೆಯನ್ನು ಅಪಮಾನಿಸುವ ಕಾರ್ಯಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಈ ಮೂಲಕ ಸರಕಾರ, ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಯನ್ನು ಅಪಮೌಲ್ಯಕ್ಕೆ ಈಡು ಮಾಡಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News