ಶಾಸಕ ಸೋಮಶೇಖರ್‌ಗೆ ಶೋಕಾಸ್ ನೋಟಿಸ್: ದಿನೇಶ್ ಗುಂಡೂರಾವ್

Update: 2019-01-28 14:24 GMT

ಬೆಂಗಳೂರು, ಜ.28: ರಾಜ್ಯದ ಮೈತ್ರಿ ಸರಕಾರದ ಕಾರ್ಯವೈಖರಿ ವಿರುದ್ಧ ಹೇಳಿಕೆ ನೀಡಿರುವ ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಅಧ್ಯಕ್ಷ ಎಸ್.ಟಿ.ಸೋಮಶೇಖರ್‌ಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎ ಅಧ್ಯಕ್ಷರಾಗಿ ಬೆಂಗಳೂರು ಅಭಿವೃದ್ಧಿ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜೊತೆ ಚರ್ಚೆ ನಡೆಸಬಹುದಿತ್ತು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ ಎಂದರು. ಯಾರೂ ಕೂಡ ಲಕ್ಷ್ಮಣ ರೇಖೆ ದಾಟಬಾರದು. ಸರಕಾರದ ವಿರುದ್ಧ ಯಾರೂ ಬಹಿರಂಗ ಹೇಳಿಕೆಗಳನ್ನು ಕೊಡಬಾರದು. ಏನೇ ಸಮಸ್ಯೆಗಳಿದ್ದರೂ ಉಪ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಬೇಕು. ಸೋಮಶೇಖರ್ ಪಕ್ಷದ ಶಿಸ್ತನ್ನು ಮೀರಿ ಹೇಳಿಕೆ ನೀಡಿದ್ದು, ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೂ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಲಾಗಿದೆ. ಸೋಮಶೇಖರ್ ತಮ್ಮ ಹೇಳಿಕೆಗೆ ಸ್ಪಷ್ಟವಾದ ಉತ್ತರ ಕೊಡಬೇಕು. ಇಲ್ಲದಿದ್ದರೆ, ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

'ಸೋಮಶೇಖರ್ ಮುಖ್ಯಮಂತ್ರಿ ವಿರುದ್ಧ ಯಾವ ಅರ್ಥದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಇಂತಹ ವಿಷಯಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರವಿದ್ದಾಗ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ವೈಟ್ ಟ್ಯಾಪಿಂಗ್, ರಸ್ತೆ ಅಗಲೀಕರಣ, 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವು ಕೆಲಸಗಳು ನಡೆದಿತ್ತು. ಆ ಕೆಲಸ ಈಗಲೂ ನಡೀತಿದೆ ಎಂದು ಅವರು ತಿಳಿಸಿದರು.

ಯಾವ ಶಾಸಕರಿಗೂ ಅನುದಾನ ಹಂಚಿಕೆಯಲ್ಲಿ ಕೊರತೆಯಾಗಿಲ್ಲ. ಸಮ್ಮಿಶ್ರ ಸರಕಾರದ ಸಂಪುಟ ಸಭೆಯಲ್ಲಿ 8 ಸಾವಿರ ಕೋಟಿ ರೂ.ಅನುದಾನಕ್ಕೆ ಅನುಮೋದನೆ ಆಗಿದೆ. ಈ ಸರಕಾರದಲ್ಲಿ ಹಿಂದಿನ ಸರಕಾರದ ಎಲ್ಲ ಕೆಲಸಗಳನ್ನು ಮುಂದುವರೆಸಲಾಗುತ್ತಿದೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡಿ, ನಮ್ಮದು ಐದು ವರ್ಷದ ಒಪ್ಪಂದವಾಗಿದೆ. ಕುಮಾರಸ್ವಾಮಿಗೆ ಸ್ವಲ್ಪ ತಾಳ್ಮೆ ಇರಬೇಕು. ಸಿದ್ದರಾಮಯ್ಯ ಮೇಲೆ ಶಾಸಕರಿಗೆ ಹೆಚ್ಚು ಪ್ರೀತಿ. ಆದುದರಿಂದ, ಹಳೆಯ ಹೀರೋ ಬಗ್ಗೆ ಕುಮಾರಸ್ವಾಮಿ ನೆನಪು ಮಾಡಿಕೊಳ್ಳಬಾರದು ಎಂದರು.

ನಾನು ಎಚ್.ಡಿ.ದೇವೇಗೌಡರ ಜೊತೆ ಕೆಲಸ ಮಾಡಿದ್ದೇನೆ. ಅವರಂತೆ, ಕುಮಾರಸ್ವಾಮಿಗೂ ಸಮಾಧಾನ ಇರಬೇಕು. ಯಾರು ಏನೇ ಮಾತನಾಡಿದರೂ ತಲೆ ಕೆಡಿಸಿಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು.

ಸೋಮಶೇಖರ್ ಹೇಳಿದ್ದೇನು?: ಸಿದ್ದರಾಮಯ್ಯ ಇನ್ನೂ 5 ವರ್ಷ ಅಧಿಕಾರದಲ್ಲಿರಬೇಕಿತ್ತು. ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದರೆ ಬೆಂಗಳೂರು ಇನ್ನೂ ಹೆಚ್ಚು ಅಭಿವೃದ್ಧಿ ಆಗುತ್ತಿತ್ತು. ನಮಗೆ ಸಿದ್ದರಾಮಯ್ಯನವರೇ ನಾಯಕರು. ಕೆಲವರು ಮಗನಿಗೆ, ಸೊಸೆಗೆ ಮಾತ್ರ ರಾಜಕೀಯದಲ್ಲಿ ಅವಕಾಶ ಕೊಡುತ್ತಾರೆ. ಸಿದ್ದರಾಮಯ್ಯ ಎಲ್ಲ ಜಾತಿಗಳಿಗೂ ರಾಜಕೀಯವಾಗಿ ಅವಕಾಶ ನೀಡಿದ್ದಾರೆ ಎಂದು ಅವರು ಹೇಳಿದ್ದರು.

ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು 7 ತಿಂಗಳು ಆಗಿದೆ. ಆದರೆ, ಈವರೆಗೆ ಬೆಂಗಳೂರಿನ ರಸ್ತೆಗಳ ಅಭಿವೃದ್ಧಿ ಆಗಿಲ್ಲ. ಸಿದ್ದರಾಮಯ್ಯ ನನ್ನನ್ನು ಬಿಡಿಎ ಅಧ್ಯಕ್ಷ ಮಾಡಿದ್ದಾರೆ. ಈ ಸರಕಾರದಲ್ಲಿ ಒಂದು ಮಾತು ಹೇಳಿದರೂ ಹೆಚ್ಚು ಕಡಿಮೆ ಆಗುತ್ತದೆ. ಮುಖ್ಯಮಂತ್ರಿಯಾಗಿ ಐದು ವರ್ಷ ಅಧಿಕಾರ ನಡೆಸಿದ ಸಿದ್ದರಾಮಯ್ಯ, ಸಾಲ ಮಾಡಿ ಚುನಾವಣೆ ಎದುರಿಸಿದ್ದಾರೆ. ಒಳಸಂಚು ಮಾಡಿ ಇವರ ವಿರುದ್ಧ ಅಭ್ಯರ್ಥಿ ಹಾಕಿ ಸೋಲಿಸಲಾಯಿತು. ಇವರು ಮಾಡಿರುವ ಸಾಲವನ್ನು ತೀರಿಸಲು ಆಗುತ್ತಿಲ್ಲ ಎಂಬ ಮಾತು ಕೇಳಿದರೆ ಮನಸ್ಸಿಗೆ ನೋವಾಗುತ್ತದೆ ಎಂದು ಸೋಮಶೇಖರ್ ಹೇಳಿದ್ದರು.

ಕ್ಷಮೆಯಾಚನೆ

ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಮುಖ್ಯಮಂತ್ರಿಗೆ ಅಪಮಾನವಾಗುವ ರೀತಿಯಲ್ಲಿ ನಾನು ಹೇಳಿಕೆ ನೀಡಿಲ್ಲ. ವಾಸ್ತವಾಂಶದ ಬಗ್ಗೆಯಷ್ಟೇ ತಿಳಿಸಿದ್ದೇನೆ. ಕಳೆದ 7 ತಿಂಗಳಿನಿಂದ ಯಾವುದೇ ರೀತಿಯ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ.

ಎಸ್.ಟಿ.ಸೋಮಶೇಖರ್, ಶಾಸಕ

ಅಶಿಸ್ತು ಸಹಿಸಲ್ಲ

ಪಕ್ಷದ ಶಿಸ್ತು ಉಲ್ಲಂಸುವ ರೀತಿಯಲ್ಲಿ ಮಾತನಾಡಿರುವ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್‌ಗೆ ಕೆಪಿಸಿಸಿ ವತಿಯಿಂದ ಶೋಕಾಸ್ ನೋಟಿಸ್ ಜಾರಿಗೊಳಿಸುವಂತೆ ದಿನೇಶ್ ಗುಂಡೂರಾವ್‌ಗೆ ಸೂಚನೆ ನೀಡಿದ್ದೇನೆ. ಉತ್ತರ ಅಸಮರ್ಪಕವಾಗಿದ್ದರೆ, ಸೋಮಶೇಖರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಪಕ್ಷ ಅಶಿಸ್ತನ್ನು ಸಹಿಸಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಟ್ವಿಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News