ಪ್ರೀತಿಸುವಂತೆ ಯುವಕ ಪೀಡನೆ: ಮನನೊಂದು ಯುವತಿ ಆತ್ಯಹತ್ಯೆ

Update: 2019-01-31 15:34 GMT

ಬೆಂಗಳೂರು, ಜ.31: ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದರಿಂದ ಮನನೊಂದು ಯುವತಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲ ತಡವಾಗಿ ಬೆಳಕಿಗೆ ಬಂದಿದೆ.

ಗಾಂಧಿನಗರದ ನಿವಾಸಿ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿ ಯುವಕ ಸತ್ಯ ಘಟನೆಯ ನಂತರ ತಲೆಮರೆಸಿಕೊಂಡಿದ್ದಾರೆ. ಈ ಕುರಿತು ಐಪಿಸಿ ಸೆಕ್ಷನ್ 306 ಅಡಿ ಪ್ರಕರಣ ದಾಖಲಿಸಿಕೊಂಡು ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಸತ್ಯ ಮತ್ತು ಮೃತ ಯುವತಿ ಮಮತಾ ಒಂದೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಾಲಾ ದಿನಗಳಿಂದ ಯುವತಿಗೆ ನನ್ನನ್ನು ಪ್ರೀತಿಸು ಎಂದು ಒತ್ತಾಯ ಮಾಡುತ್ತಿದ್ದ. ಹೀಗಾಗಿ, ಆಕೆಯ ಪೋಷಕರು ಆದಿಚುಂಚನಗಿರಿ ಬಿಜಿಎಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಯುವತಿಯನ್ನು ಆರದೇಶನಹಳ್ಳಿಯ ಎಂಇಎಸ್ ಕಾಲೇಜ್ ಆಫ್ ಫಾರ್ಮಸಿ ಕೋರ್ಸ್‌ಗೆ ಸೇರಿಸಿದ್ದರು. ಕಾಲೇಜಿನ ಬಳಿ ಹೋಗುತ್ತಿದ್ದ ಆರೋಪಿ ಯುವಕ ಸತ್ಯ ಯುವತಿಗೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಈ ಸಂಬಂಧ ಆಕೆಯ ಪೋಷಕರು ಆರೋಪಿ ವಿರುದ್ಧ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಕರೆಸಿ ಒಂದೆರಡು ಬಾರಿ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.

ಯಲಹಂಕದ ಗಾಂಧಿನಗರದ ನಿವಾಸದಲ್ಲಿ ಯುವತಿಯನ್ನು ಒಂಟಿಯಾಗಿ ಬಿಟ್ಟು ಯುವತಿಯ ಪೋಷಕರು ಕಾರ್ಯನಿಮಿತ್ತ ಕೋಲಾರಕ್ಕೆ ತೆರಳಿದ್ದರು. ಬಳಿಕ ಜ.26 ರಂದು ಪೋಷಕರು ಮನೆಗೆ ಹಿಂದಿರುಗುವ ಸಮಯದಲ್ಲಿ ಯುವತಿಗೆ ಕರೆ ಮಾಡಿದ್ದಾರೆ. ಅವರಿಗೆ ಸಂಪರ್ಕಕ್ಕೆ ಸಿಗದಿದ್ದರಿಂದ ಅನುಮಾನಗೊಂಡು ಸಂಬಂಧಿಕರನ್ನು ಮನೆಯ ಹತ್ತಿರ ಕಳಿಸಿದ್ದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಘಟನೆ ನಂತರ ಆರೋಪಿ ತಲೆ ಮರೆಸಿಕೊಂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News