ನಾವು ಆಪರೇಷನ್ ಕಮಲ ಮಾಡಲ್ಲ: ಆರ್.ಅಶೋಕ್

Update: 2019-02-04 15:56 GMT

ಬೆಂಗಳೂರು, ಫೆ.4: ನಾವು ಆಪರೇಷನ್ ಕಮಲ ಮಾಡಲ್ಲ, ನಮಗೆ ಅದರ ಮೇಲೆ ನಂಬಿಕೆಯೂ ಇಲ್ಲ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ಇಂದಿಲ್ಲಿ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಹೋರಾಟ ಮಾಡುವ ಕುರಿತು ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಚರ್ಚೆ ಮಾಡಿದ್ದೇವೆ. ಇಂದಿನ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಾಯಕರೇ ಆಪರೇಷನ್ ಕಮಲ ಎನ್ನುತ್ತಾರೆ. ನಮ್ಮಲ್ಲಿ ಅಂತಹ ಯತ್ನ ನಡೆದಿಲ್ಲ. ಕಾಂಗ್ರೆಸ್ ಗೊಡ್ಡು ಬೆದರಿಕೆಗೆ ಬಿಜೆಪಿ ಹೆದರಲ್ಲ ಎಂದ ಅವರು, ನಮ್ಮ ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ. ಕಾಂಗ್ರೆಸ್, ಜೆಡಿಎಸ್‌ನಲ್ಲಿಯೇ ಗೊಂದಲ ಇರೋದು ಎಂದು ನುಡಿದರು.

ಸಿದ್ದರಾಮಯ್ಯ ಅವರಿಗೆ ಮತ್ತೆ ಮುಖ್ಯಮಂತ್ರಿ ಆಗುವ ಆಸೆ ಇದೆ. ಅದಕ್ಕಾಗಿ ತಾವು ಹುಟ್ಟುಹಾಕುವ ಗೊಂದಲವನ್ನು ಬಿಜೆಪಿ ಮೇಲೆ ಹಾಕುತ್ತಾರೆ. ಸಿದ್ದರಾಮಯ್ಯ ಹೊರಗೆ ಹೋದಾಗಲೆಲ್ಲ ಭಿನ್ನಮತ ಚಟುವಟಿಕೆ ನಡೆಯುತ್ತದೆ ಎಂದು ಅಶೋಕ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News