ಸಚಿವ ಝಮೀರ್ ಜತೆ ಸದನಕ್ಕೆ ಬಂದ ಶಾಸಕ ಆನಂದ್‌ ಸಿಂಗ್

Update: 2019-02-06 13:09 GMT

ಬೆಂಗಳೂರು, ಫೆ. 6: ಬಳ್ಳಾರಿ ಜಿಲ್ಲೆ ವಿಜಯನಗರ(ಹೊಸಪೇಟೆ) ಕ್ಷೇತ್ರದ ಶಾಸಕ ಆನಂದ್ ಸಿಂಗ್, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಝಮೀರ್ ಅಹ್ಮದ್ ಖಾನ್ ಜೊತೆಯಲ್ಲಿ ಸದನಕ್ಕೆ ಬಂದು, ಪುನಃ ಅವರೊಂದಿಗೆ ಹೊರ ನಡೆದ ಘಟನೆ ನಡೆಯಿತು.

ಬುಧವಾರ ಅಧಿವೇಶನಕ್ಕೆ ರಾಜ್ಯಪಾಲರ ಆಗಮಿಸುವ ಕೆಲ ನಿಮಿಷಗಳ ಮೊದಲು ಸದನಕ್ಕೆ ಆಗಮಿಸಿದ ಆನಂದ್ ಸಿಂಗ್ ಮತ್ತು ಸಚಿವ ಝಮೀರ್ ಅಹ್ಮದ್ ಖಾನ್ ರಾಜ್ಯಪಾಲರ ಭಾಷಣ ಮುಗಿಯುವ ವರೆಗೂ ಒಟ್ಟಿಗೆ ಕೂತು ಗಮನ ಸೆಳೆದರು. ಆ ಬಳಿಕ ಬಿಜೆಪಿ ಮುಖಂಡ ಶ್ರೀರಾಮುಲು ಸೇರಿದಂತೆ ಹಲವು ಸದಸ್ಯರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು.

ಸಂತಾಪ ಸೂಚನೆ ನಿರ್ಣಯ ಮಂಡನೆ ಬಳಿಕ ಆನಂದ್ ಸಿಂಗ್, ಝಮೀರ್ ಅಹ್ಮದ್ ಖಾನ್ ಅವರೊಂದಿಗೆ ಸದನದಿಂದ ಹೊರ ನಡೆದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆನಂದ್ ಸಿಂಗ್, ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಆಸ್ಪತ್ರೆಗೆ ದಾಖಲು: ಅಧಿವೇಶನದಲ್ಲಿ ಪಾಲ್ಗೊಂಡು ಹೊರ ಹೋಗುವ ವೇಳೆ ಎದೆ ನೋವು ಮತ್ತು ವಾಂತಿಯಾದ ಹಿನ್ನೆಲೆಯಲ್ಲಿ ಶಾಸಕ ಆನಂದ್ ಸಿಂಗ್ ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News