ಸೌಹಾರ್ದಯುತ ಬದುಕಿಗೆ ಮಾನವೀಯತೆ ಮುಖ್ಯ: ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ

Update: 2019-02-06 14:34 GMT

ಬೆಂಗಳೂರು, ಫೆ.6: ನಮ್ಮ ಮುಂದಿನ ಪೀಳಿಗೆ ಶಾಂತಿ ಸೌಹಾರ್ದತೆಯಿಂದ ಬದುಕು ನಡೆಸಬೇಕಾದರೆ, ಇಂದಿನ ಮಕ್ಕಳಿಗೆ ಮಾನವೀಯತೆಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಬದುಕು ನಡೆಸುವುದನ್ನು ಕಲಿಸಬೇಕಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಆಶಿಸಿದರು.

ಬುಧವಾರ ಯಲಹಂಕದ ಬಾಗಲೂರಿನ ಸೆಂಟ್ ಫ್ರಾನ್ಸಿಸ್ ಶಾಲೆಯ 3ನೆ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ವಸುದೈವಕುಟುಂಬ ಕಾರ್ಯಕ್ರಮ ಉದ್ಘಾಟಿಸಿದ ಅವರು, ನಮ್ಮ ಹಿರಿಯರು ಕಟ್ಟಿದ ಮೌಲ್ಯ ಕುಸಿಯುತ್ತಿದೆ. ಇಂದಿನ ಮಕ್ಕಳಿಗೆ ಮಾನವೀಯ ಮೌಲ್ಯಾಧಾರಿತ ಜೀವನ ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಮಕ್ಕಳು ಹಾಗೂ ಯುವ ಸಮುದಾಯ ಯಾವುದೇ ಆಕರ್ಷಣೆಗೊಳಗಾಗಿ ತಮ್ಮ ಜೀವನದ ಮೌಲ್ಯಗಳನ್ನು ಬಿಟ್ಟುಕೊಡಬಾರದು. ನಿಮಗೆ ಸಮಾಜವನ್ನು ಬದಲಿಸುವ ಶಕ್ತಿ ಇದೆ. ಪ್ರತಿಯೊಬ್ಬರು ಕಳಂಕ ರಹಿತ ಉತ್ತಮ ಸಮಾಜ ಕಟ್ಟಲು ಪಣತೊಡಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.

ನಾನು ಲೋಕಾಯುಕ್ತಕ್ಕೆ ಬರುವ ಮೊದಲು ಕೂಪ ಮಂಡೂಕನಾಗಿದ್ದೆ. ನನ್ನಂತೆ ಎಲ್ಲರೂ ಸುಖವಾಗಿದ್ದಾರೆಂದು ಭಾವಿಸಿದ್ದೆ. ಲೋಕಾಯುಕ್ತನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಗೊತ್ತಾಯಿತು ಜನರ ಕಷ್ಟ ಬೆಟ್ಟದಷ್ಟಿದೆ ಎಂದು. ಇದಕ್ಕೆಲ್ಲ ನಮ್ಮ ಸಮಾಜದ ಭ್ರಷ್ಟ ವ್ಯವಸ್ಥೆ ಕಾರಣ. ನಾವಿಂದು ಜೈಲಿಗೆ ಹೋಗಿ ಜಾಮೀನು ತೆಗೆದು ಬರುವ ವ್ಯಕ್ತಿಗಳಿಗೆ ಹಾರಹಾಕುವ ಸಮಾಜದಲ್ಲಿದ್ದೇವೆ. ನಾವಿರುವ ಸಮಾಜವನ್ನು ಬದಲಿಸಬೇಕಿದೆ ಎಂದು ಅವರು ಹೇಳಿದರು.

ಆರ್ಚ್ ಬಿಷಷ್ ಡಾ.ಪೀಟರ್ ಮಚಾಡೋ ಮಾತನಾಡಿ, ಮಕ್ಕಳು ವಿಶೇಷ. ಪ್ರತಿಯೊಬ್ಬ ಮಗುವಿನಲ್ಲೂ ಒಂದೊಂದು ವಿಶೇಷ ಇದ್ದು, ಮಕ್ಕಳಿಂದಲೂ ಕಲಿಯಬೇಕಿರುವುದು ಸಾಕಷ್ಟಿದೆ. ಮಕ್ಕಳಿಂದ ನಾವು ಕಲಿಯುತ್ತಾ, ಮಕ್ಕಳಿಗೆ ಭಕ್ತಿ, ಶ್ರದ್ಧೆ, ಶಿಸ್ತು ಕಲಿಸುವ ಮೂಲಕ ಉತ್ತಮ ಪ್ರಜೆಯಾಗಿ ರೂಪಿಸಬೇಕಿದೆ ಎಂದು ಪೋಷಕರಿಗೆ ಕರೆ ನೀಡಿದರು.

ಧರ್ಮಕ್ಕಿಂತ ದೇವರ ವಿಶ್ವಾಸ ದೊಡ್ಡದು. ಮತಾಂತರ ಮಾಡುವುದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಪ್ರತಿಯೊಂದು ಧರ್ಮದ ತತ್ವ ಕಲಿಸುವುದು ಅಗತ್ಯ. ಪ್ರತಿಯೊಂದು ಮಗು ಸಹ ದೇಶವನ್ನು ಪ್ರೀತಿಸುತ್ತೇನೆ ಎಂದು ಎದೆಮುಟ್ಟಿ ಹೇಳಬೇಕು. ಸಂವಿಧಾನ ಗೌರವಿಸಬೇಕು. ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ದೇಶಕ್ಕೆ ಕೀರ್ತಿ ತರುವ ಸಾಧನೆ ಮಾಡಬೇಕು. ಆಗಮಾತ್ರ ನಾವು ನೀಡಿದ ಶಿಕ್ಷಣ ಸಾಕಾರಗೊಳ್ಳುತ್ತದೆ ಎಂದು ಅವರು ತಿಳಿಸಿದರು.

ವಸುದೈವ ಕುಟುಂಬ ಕಾರ್ಯಕ್ರಮದಲ್ಲಿ ಜೀವನದ ಮೌಲ್ಯಗಳನ್ನು ಸಾರುವಂತಹ ನಾಟಕ, ನೃತ್ಯ, ಕರಾಟೆ, ಯೋಗ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಬಾಗಲೂರು ಗ್ರಾ.ಪಂ.ಅಧ್ಯಕ್ಷ ಜೆ.ಮುನೇಗೌಡ, ಸೆಂಟ್ ಫ್ರಾನ್ಸಿಸ್ ಶಾಲೆಯ ಅಧ್ಯಕ್ಷ ಅಗಸ್ಟಿನ್ ಕೊಲಾಪುರಂ, ಪ್ರಾಂಶುಪಾಲ ಜಿನೋ ಜೋಸೆಫ್, ಖಜಾಂಚಿ ಜಾಬ್ ಎಡಕುತ್ತೂರು ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News