ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡಲು ಪರಿಣಾಮಕಾರಿ ಕ್ರಮ: ರಾಜ್ಯಪಾಲ

Update: 2019-02-06 14:41 GMT

ಬೆಂಗಳೂರು, ಫೆ.6: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ವಿಧಾನಸಭೆ ಸಭಾಂಗಣದಲ್ಲಿ ಉಭಯ ಸದನಗಳ ಸದಸ್ಯರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ತುರ್ತು ಮತ್ತು ಅಪಾಯದ ಕರೆಗಳಿಗಾಗಿ ಒಂದೇ ತುರ್ತು ಸಂಖ್ಯೆಯನ್ನು ಹೊಂದಿರುವ ಏಕೀಕೃತ ‘ತುರ್ತು ಪ್ರತಿಸ್ಪಂದನಾ ನೆರವು ವ್ಯವಸ್ಥೆ’ ಜಾರಿಗೊಳಿಸುತ್ತಿದೆ ಎಂದರು.

ಸಂಚಾರ ನಿಯಮಗಳ ಉಲ್ಲಂಘನೆಯ ಸಂದರ್ಭದಲ್ಲಿ ಕಾರ್ಯ ಪ್ರಕ್ರಿಯೆ ಮತ್ತು ವಿಲೇವಾರಿ ಸಮಯವನ್ನು ಕಡಿಮೆ ಮಾಡಲು ಹಾಗೂ ನಮ್ಮ ರಸ್ತೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಸ್ವಯಂ ಚಲನ್ ಸೃಜನಾ ವ್ಯವಸ್ಥೆ ಮತ್ತು ಡಿಜಿಟಲ್ ಕ್ಷೇತ್ರ ಸಂಚಾರ ಉಲ್ಲಂಘನಾ ವರದಿಗಳ ಟ್ಯಾಬ್‌ಗಳನ್ನು ಸರಕಾರ ಪರಿಚಯಿಸುತ್ತಿದೆ ಎಂದು ಅವರು ತಿಳಿಸಿದರು.

ನಿರಂತರವಾಗಿ ಹೆಚ್ಚುತ್ತಿರುವ ಸೈಬರ್ ಅಪರಾಧದ ಘಟನೆಗಳನ್ನು ನಿಭಾಯಿಸಲು ಪೊಲೀಸರಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವ್ಯವಸ್ಥೆಗಳನ್ನು ಒದಗಿಸುವುದಕ್ಕಾಗಿ, ಜಿಲ್ಲೆಗಳಲ್ಲಿ ಹಾಗೂ ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ಸೈಬರ್ ವಿಧಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯಪಾಲ ಹೇಳಿದರು.

ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಗಾಗಿ ಎಲ್ಲ ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಹಿಂಸೆಗೊಳಗಾದ ಮಹಿಳೆಯರ ಕರೆಗೆ ವಾರದ ಪ್ರತಿದಿನ 24 ಗಂಟೆಗಳ ಕಾಲವೂ ಸ್ಪಂದಿಸಲು ‘ಮಹಿಳಾ ಸಹಾಯವಾಣಿ-181’ ಅನ್ನು ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.

ಮಹಿಳೆ ಮತ್ತು ಮಕ್ಕಳ ವಿರುದ್ಧ ನಡೆದ ದೌರ್ಜನ್ಯದ ವಿಷಯದಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲು ಎಲ್ಲ ಜಿಲ್ಲೆಗಳಲ್ಲಿ ಒಂದು ಹೆಚ್ಚುವರಿ ಸೆಷನ್ ನ್ಯಾಯಾಲಯ ಮತ್ತು ಬೆಂಗಳೂರು ನಗರದಲ್ಲಿ ಒಂದು ಹೆಚ್ಚುವರಿ ಸಿವಿಲ್ ನ್ಯಾಯಾಲಯವನ್ನು ವಿಶೇಷ ನ್ಯಾಯಾಲಯಗಳನ್ನಾಗಿ ಗೊತ್ತುಪಡಿಸಲಾಗಿದೆ ಎಂದು ಅವರು ಹೇಳಿದರು.

ವಿತ್ತೀಯ ಹೊಣೆಗಾರಿಕೆಯ ಅಗತ್ಯತೆ ಪಾಲನೆ: ಸರಕಾರವು ಕಳೆದ ಹಲವು ವರ್ಷಗಳಿಂದ ಸತತವಾಗಿ ಹೆಚ್ಚುವರಿ ರಾಜಸ್ವ ನಿರ್ವಹಣೆ ಮಾಡುವುದರ ಮೂಲಕ, ವಿತ್ತೀಯ ಕೊರತೆಯನ್ನು ರಾಜ್ಯದ ಒಟ್ಟು ದೇಶೀಯ ಉತ್ಪನ್ನದ(ಜಿಎಸ್‌ಡಿಪಿ) ಶೇ.3ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಲಾಗಿದೆ ಎಂದು ರಾಜ್ಯಪಾಲ ತಿಳಿಸಿದರು.

ಆ ಮೂಲಕ ಮತ್ತು ಒಟ್ಟು ಹೊಣೆಗಾರಿಕೆಗಳು ರಾಜ್ಯದ ಒಟ್ಟು ದೇಶೀಯ ಉತ್ಪನ್ನವು(ಜಿಎಸ್‌ಡಿಪಿ) ಶೇ.25ರೊಳಗೆ ಇದೆ ಎಂಬುದನ್ನು ಸುನಿಶ್ಚಿತಗೊಳಿಸುವುದರ ಮೂಲಕ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಎಲ್ಲ ಅಗತ್ಯತೆಗಳನ್ನು ಪಾಲಿಸುತ್ತಾ ಬರುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವರ್ಷವು ಆಯವ್ಯಯ ಗುರಿಗಳ ಅನುಸಾರ, ರಾಜ್ಯವು, ಪ್ರಧಾನ ತೆರಿಗೆಗಳಲ್ಲಿ ಹೆಚ್ಚು ಕಡಿಮೆ ತನ್ನದೇ ಸ್ವಂತ ರಾಜಸ್ವ ಸ್ವೀಕೃತಿಗಳೊಂದಿಗೆ ಸಾಧಿಸಿರುವ ಪ್ರಗತಿಯನ್ನು ಮುಂದುವರಿಸುವತ್ತ ಗಮನಹರಿಸಲಾಗಿದೆ. ರಾಜ್ಯವು ತನ್ನ ಪ್ರಗತಿಪರ ಕಾರ್ಯನೀತಿಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕಾಗಿ ಹೆಸರುವಾಸಿಯಾಗಿದೆ ಎಂದು ಅವರು ಹೇಳಿದರು.

ನಾವು ಪ್ರಾರಂಭಿಸಿರುವ ನಾವೀನ್ಯತಾ ಕಾರ್ಯಕ್ರಮಗಳನ್ನೇ ಹಲವು ರಾಜ್ಯಗಳು ಅನುಸರಿಸುತ್ತಿವೆ. ರಾಜ್ಯವನ್ನು ಬೃಹತ್ ಪ್ರಗತಿಯತ್ತ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ರಾಜ್ಯಪಾಲ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News