15 ವರ್ಷ ಹಳೆಯ ವಾಹನಗಳಿಗೆ ನಗರ ಪ್ರವೇಶ ನಿಷೇಧ: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

Update: 2019-02-11 12:52 GMT

ಬೆಂಗಳೂರು, ಫೆ.11: ಬೆಂಗಳೂರು ನಗರದಲ್ಲಿ ಮಿತಿ ಮೀರಿದ ವಾಹನ ದಟ್ಟಣೆಗೆ ಕಡಿವಾಣ ಹಾಕುವ ಸಲುವಾಗಿ ನಗರ ವ್ಯಾಪ್ತಿಯಲ್ಲಿ ಹದಿನೈದು ವರ್ಷ ಹಳೆಯ ವಾಹನಗಳಿಗೆ ನಿಷೇಧ ಹೇರಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಸೋಮವಾರ ಪುರಭವನದ ಸಭಾಂಗಣದಲ್ಲಿ ಸಾರಿಗೆ ಇಲಾಖೆ, ಸಂಚಾರ ಪೊಲೀಸ್ ಸಹಯೋಗದೊಂದಿಗೆ ಆಯೋಜಿಸಿದ್ದ, 30ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2019 ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಂಕಿ ಅಂಶಗಳ ಪ್ರಕಾರ ಹಿಂದಿನ ವರ್ಷಗಳಲ್ಲಿ ವಾಯುಮಾಲಿನ್ಯ ಕಾರಣದಿಂದಲೇ ಬೆಂಗಳೂರಿನಲ್ಲಿಯೇ ನಾಲ್ಕು ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಜನತೆಗೆ ನಗರದಲ್ಲಿ ಸುತ್ತಾಡಲು ಖಾಸಗಿ ವಾಹನಗಳ ಬದಲಾಗಿ ಸಾರಿಗೆ ಬಸ್‌ಗಳಿಗೆ ಆದ್ಯತೆ ಕೊಡಬೇಕೆಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಿಂದ ಅಪಘಾತ, ಉಸಿರಾಟಕ್ಕೆ ಸಂಬಂಧಿಸಿದ ರೋಗಗಳು ಹಾಗೂ ಪರಿಸರ ಮಾಲಿನ್ಯದಿಂದ ನಗರದ ಜನತೆ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಹಳೆಯ ವಾಹನಗಳಿಗೆ ನಿಷೇಧ ಏರುವ ಮೂಲಕ ನಗರದ ಪರಿಸರದ ಸಂರಕ್ಷಣೆ, ಜನರ ಸಮಸ್ಯೆಗಳ ನಿವಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರು ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ತಗ್ಗಿಸಲು ವಾರ್ಡ್ ಮಟ್ಟದಲ್ಲಿ ಜಾಗೃತಿ, ಅರಿವು ಕಾರ್ಯಕ್ರಮ ನಡೆಸಲಾಗುವುದು. ಒಬ್ಬರು ಒಂದು ಕಾರನ್ನು ಬಳಸುವ ಬದಲು ನಾಲ್ಕೈದು ಮಂದಿ ಒಂದು ಕಾರನ್ನು ಬಳಸುವುದು ಹಾಗೂ ಪ್ರಯಾಣಕ್ಕೆ ಸಾರಿಗೆ ಬಸ್‌ಗಳಿಗೆ ಮೊದಲ ಆದ್ಯತೆ ನೀಡುವಂತೆ ನಗರದ ನಾಗರಿಕರಿಗೆ ಈಗಾಗಲೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಒಟ್ಟು 7 ಕೋಟಿ ಜನಸಂಖ್ಯೆ ಇದೆ. ಇದರ ಅರ್ಥ ಭಾಗದಷ್ಟು ವಾಹನಗಳು ನೋಂದಣಿ ಆಗಿವೆ. ರಾಜಧಾನಿ ಬೆಂಗಳೂರಿನಲ್ಲಿಯೇ, ಒಂದು ಕೋಟಿ ಜನಸಂಖ್ಯೆ ಇದ್ದು, ಇಲ್ಲಿಯೂ 1 ಕೋಟಿ ವಾಹನಗಳು ಸಂಚಾರ ಮಾಡುತ್ತಿವೆ. ಇದರ ನಡುವೆ ಹೊರ ರಾಜ್ಯಗಳಿಂದಲೂ ಲಕ್ಷಾಂತರ ವಾಹನ ಬರುತ್ತಿವೆ ಎಂದು ಅವರು ಹೇಳಿದರು

ಶಾಸಕ ಉದಯ್ ಬಿ.ಗರುಡಾಚಾರ್ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಲು ಹದಿನೈದು ವರ್ಷ ಹಳೆಯ ವಾಹನ ನಿಷೇಧ ಮಾಡಬೇಕು. ನಗರದ ಪ್ರಮುಖ ಭಾಗಗಳಲ್ಲಿ ನಿರ್ಮಾಣ ಮಾಡಿರುವ(ಸ್ಯಾಟಲೈಟ್) ಬಸ್ ನಿಲ್ದಾಣಗಳನ್ನು ಸಾರ್ವಜನಿಕರು ಬಳಕೆ ಮಾಡಬೇಕು. ಇದರಿಂದ ನಗರದ ಒಳಗಡೆ ಸಂಚಾರ ತಡೆಯಬಹುದಾಗಿದೆ ಎಂದು ಸಲಹೆ ಮಾಡಿದರು.

ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ವಿ.ಪಿ.ಇಕ್ಕೇರಿ ಮಾತನಾಡಿ, ವಾಹನಗಳ ಚಾಲಕರು ಮತ್ತು ದ್ವಿಚಕ್ರವಾಹನಗಳ ಸವಾರರು ಸುರಕ್ಷತಾ ನಿಯಮಗಳನ್ನು ಅನುಸರಿಸದಿರುವುದರಿಂದ ಅಪಘಾತಗಳು ಹೆಚ್ಚಾಗಿ ದೇಶದಲ್ಲಿ ಪ್ರತಿವರ್ಷ 1.50ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ರಾಜ್ಯ ಸರಕಾರ ವಾಹನ ಸವಾರರು ಅನುಸರಿಸಬೇಕಾದ ರಸ್ತೆ ಸುರಕ್ಷ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಬಿಎಂಟಿಸಿ ಅಧ್ಯಕ್ಷ ಎನ್.ಎ.ಹಾರಿಸ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಸಿನಿಮಾ ನಟ ಪ್ರೇಮ್, ನಟಿ ರಾಗಿಣಿ ದ್ವಿವೇದಿ, ಬೆಂಗಳೂರು ಸಂಚಾರ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News