ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

Update: 2019-02-11 15:09 GMT

ಬೆಂಗಳೂರು, ಫೆ.11: ಮದ್ಯದ ಅಮಲಿನಲ್ಲಿ ಹಣಕಾಸಿನ ವಿಚಾರಕ್ಕಾಗಿ ಸ್ನೇಹಿತರ ನಡುವೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆಂಗೇರಿ ಉಪನಗರದ ವರುಣ್ (26) ಎಂಬಾತ ಕೊಲೆಯಾಗಿದ್ದು, ಹೊಸ ಗುಡ್ಡದಹಳ್ಳಿಯ ರವಿ(27) ಎಂಬಾತ ಈ ಕೃತ್ಯವೆಸಗಿರುವುದಾಗಿ ತಿಳಿದುಬಂದಿದೆ.

ಮೃತ ವರುಣ್ ಟ್ರ್ಯಾಕ್ಟರ್ ಚಾಲಕನಾಗಿದ್ದು, ಆರೋಪಿ ರವಿಯ ಸ್ನೇಹಿತನಾಗಿದ್ದ. ಇತ್ತೀಚಿಗೆ ಕೆಂಗೇರಿ ಉಪನಗರಕ್ಕೆ ಮನೆ ಬದಲಾಯಿಸಿ ಕೆಲ ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದನು. ವರುಣ್ ಬಳಿಯಿದ್ದ ವಾಹನವೊಂದನ್ನು ಆರೋಪಿ ರವಿ ಪಡೆದು ಬೇರೊಬ್ಬರಿಗೆ ಅಡವಿಟ್ಟು ಸಾಲ ಪಡೆದಿದ್ದನು. ಈ ಕಾರಣಕ್ಕಾಗಿ ವರುಣ್ ಮತ್ತು ಆರೋಪಿ ರವಿ ನಡುವೆ ವೈಮನಸ್ಸು ಉಂಟಾಗಿತ್ತು ಎಂದು ತಿಳಿದುಬಂದಿದೆ.

ಹೊಸ ಗುಡ್ಡದಹಳ್ಳಿ ಬಳಿಯ ಮದ್ಯದಂಗಡಿಗೆ ರವಿವಾರ ರಾತ್ರಿ 10:30ರ ಸುಮಾರಿಗೆ ತೆರಳಿದ್ದ ರವಿ ಮತ್ತು ವರುಣ್ ಮದ್ಯ ಸೇವಿಸಲು ಹೋಗಿದ್ದಾಗ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದು, ರವಿಯು ವರುಣ್‌ನ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕೆಳಗೆ ಬಿದ್ದು ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ವರುಣ್ ಅನ್ನು ಸ್ಥಳೀಯರು ಬ್ಯಾಟರಾಯನಪುರ ಬಳಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೆಲ ಸಮಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News