ಪ್ರಧಾನಿ ಮೋದಿಗೆ ಧನ್ಯವಾದ ಪತ್ರ ಕಳುಹಿಸಿದ ಸೌದಿ ಯುವರಾಜ
Update: 2019-02-21 19:16 GMT
ದುಬೈ, ಫೆ. 21: ಭಾರತ ಪ್ರವಾಸದ ಬಳಿಕ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಪತ್ರವೊಂದನ್ನು ಕಳುಹಿಸಿದ್ದಾರೆ.
ಸೌದಿ ನಿಯೋಗದೊಂದಿಗೆ ತಾನು ಭಾರತಕ್ಕೆ ಭೇಟಿ ನೀಡಿದ ವೇಳೆ ಮೋದಿ ನೀಡಿರುವ ಆತಿಥ್ಯಕ್ಕಾಗಿ ಸೌದಿ ಯುವರಾಜ ತನ್ನ ಪತ್ರದಲ್ಲಿ ‘ಕೃತಜ್ಞತೆ ಮತ್ತು ಮೆಚ್ಚುಗೆ’ ವ್ಯಕ್ತಪಡಿಸಿದ್ದಾರೆ.
‘‘ನಮ್ಮ ದೇಶಗಳ ನಡುವಿನ ಬಾಂಧವ್ಯದ ಆಳವು ನಮ್ಮ ಮಾತುಕತೆಗಳ ವೇಳೆ ದೃಢಪಟ್ಟಿತು. ನಮ್ಮ ದೇಶಗಳು ಮತ್ತು ಸರಕಾರಗಳ ಹಿತಾಸಕ್ತಿಗೆ ಪೂರಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಸಹಕಾರವನ್ನು ಏರ್ಪಡಿಸುವ ಅಗತ್ಯವೂ ಇದೇ ಸಂದರ್ಭದಲ್ಲಿ ಹೊರಹೊಮ್ಮಿದೆ’’ ಎಂದು ಪತ್ರದಲ್ಲಿ ಹೇಳಲಾಗಿದೆ.
ಭಾರತ ಭೇಟಿಯ ಬಳಿಕ, ತನ್ನ ಏಶ್ಯ ಪ್ರವಾಸದ ಮೂರನೇ ಹಂತವಾಗಿ ಸೌದಿ ಯುವರಾಜ ಗುರುವಾರ ಚೀನಾಕ್ಕೆ ಪ್ರಯಾಣಿಸಿದ್ದಾರೆ. ಪಾಕಿಸ್ತಾನ ಭೇಟಿಯೊಂದಿಗೆ ಅವರು ತನ್ನ ಪ್ರವಾಸವನ್ನು ಆರಂಭಿಸಿದ್ದರು.