ನ್ಯಾಯಾದೇಶವೊಂದರಲ್ಲಿನ ಘೋರ ಪ್ರಮಾದಗಳು

Update: 2019-03-21 18:33 GMT

ನಮ್ಮ ಶಿಥಿಲ ನ್ಯಾಯಾಂಗ ವ್ಯವಸ್ಥೆಯನ್ನು ನೋಡಿದಾಗ ಈ ಮರಣದಂಡನೆಯೆಂಬುದು ಸದಾ ತನ್ನ ಬಲಿಪಶುಗಳನ್ನು ದಮನಿತ ಮತ್ತು ವಂಚಿತ ಸಮುದಾಯಗಳಿಂದಲೇ ಆಯ್ಕೆ ಮಾಡಿಕೊಳ್ಳುವ ಸಾಂಸ್ಥಿಕ ಹತ್ಯೆಯಲ್ಲದೆ ಬೇರೇನೂ ಅಲ್ಲವೆಂದೇ ಹೇಳಬೇಕು.


ಕೆಳಗಿನ ಕೋರ್ಟೊಂದು ವಿಧಿಸಿದ ಮರಣದಂಡನೆಯನ್ನು ಸುಪ್ರೀಂಕೋರ್ಟು ರದ್ದುಗೊಳಿಸುವುದು ಅಸಾಮಾನ್ಯವಾದ ಸಂಗತಿಯೇನಲ್ಲ. ಅಷ್ಟು ಮಾತ್ರವಲ್ಲ. ಕೆಳಗಿನ ಕೋರ್ಟಿನಿಂದ ಮರಣದಂಡನೆ ಗುರಿಯಾದ ಅಷ್ಟೂ ಅರೋಪಿಗಳನ್ನು ಸುಪ್ರೀಂ ಕೋರ್ಟು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿರುವುದೂ ಅಪರೂಪವೇನಲ್ಲ. ಆದರೆ ಅಂಕುಶ್ ಮಾರುತಿ ಶಿಂಧೆ ಮತ್ತು ಮಹಾರಾಷ್ಟ್ರ ಸರಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಆರೋಪಿಗಳಿಗೆ ತಾನೇ ವಿಧಿಸಿದ ಮರಣದಂಡನೆಯನ್ನು ಮೊತ್ತ ಮೊದಲ ಬಾರಿಗೆ ತಾನೇ ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ನಡೆದಿರುವ ಘೋರ ಪ್ರಮಾದಗಳ ಪಟ್ಟಿ ತುಂಬಾ ಉದ್ದವಾಗಿದೆ. ಒಂದು ಕರಾಳ ರಾತ್ರಿ ಒಂದು ಬಡಕುಟುಂಬದ ಮೇಲೆ ಮುಗಿಬೀಳುವ ಅಪರಿಚಿತ ಹಂತಕರ ಗುಂಪೊಂದು ಅವರನ್ನು ಲೂಟಿ ಮಾಡಿ, ಹೊಡೆದು ಕೊಂದುಹಾಕುತ್ತದೆ.

ಆದರೆ ಈ ಅಪರಾಧಕ್ಕೆ ಕಾರಣರಾಗಿರಬಹುದಾದ ಅನುಮಾನಾಸ್ಪದರನ್ನು ಪತ್ತೆಹಚ್ಚುವ ಬದಲು ಪೊಲೀಸರು ಕ್ರಿಮಿನಲ್ ಬುಡಕಟ್ಟಿಗೆ ಸೇರಿದವರೆಂಬ ಏಕೈಕ ಕಾರಣಕ್ಕೆ ಆ ಸಮುದಾಯಕ್ಕೆ ಸೇರಿದ ಆರು ಮಂದಿ ಅಮಾಯಕರನ್ನು ಬಂಧಿಸುತ್ತಾರೆ. ಅವರಿಗೂ ಮತ್ತು ಈ ಅಪರಾಧ ನಡೆದ ಟನೆ ಅಥವಾ ಜಾಗಕ್ಕೆ ಸಂಬಂಧ ಕಲ್ಪಿಸುವ ಯಾವುದೇ ಪುರಾವೆಯೂ ಪೊಲೀಸರ ಬಳಿ ಇರಲಿಲ್ಲ. ಅಲ್ಲದೆ ಸಂದರ್ಭದ ಅಗತ್ಯಕ್ಕೆ ತಕ್ಕಂತೆ ಪ್ರತ್ಯಕ್ಷ ಸಾಕ್ಷಿಗಳೂ ಸಹ ತಮ್ಮ ಹೇಳಿಕೆಯನ್ನು ಪದೇಪದೇ ಬದಲಾಯಿಸುತ್ತಾ ಹೋದರು. ಆದರೂ, ಈ ಸಣ್ಣ ಮತ್ತು ನಂಬಲನರ್ಹ ಸಾಕ್ಷಿಯ ಎಳೆಯನ್ನೇ ಆಧರಿಸಿ ಕೆಳಗಿನ ಕೋರ್ಟು, ಹೈಕೋರ್ಟು ಮತ್ತು ಸುಪ್ರೀಂ ಕೋರ್ಟ್ ಸಹ ಈ ಅಮಾಯಕರಿಗೆ ಮರಣದಂಡನೆಯನ್ನು ಖಾಯಂ ಮಾಡುತ್ತಾ ಹೋದವು. ಕಳೆದ ಒಂದು ದಶಕದಿಂದ ಗಲ್ಲುಶಿಕ್ಷೆಗೆ ಗುರಿಯಾಗಿರುವ ಈ ಅಮಾಯಕರು ಜೈಲಿನಲ್ಲಿ ಒಂಟಿಯಾಗಿ ಚಿತ್ರಹಿಂಸೆಯಿಂದ ಕೂಡಿದ ಮತ್ತು ದಯನೀಯವಾದ ಸ್ಥಿತಿಯಲ್ಲಿ ತಮ್ಮ ಕೊನೆದಿನವನ್ನು ಕಾಯುತ್ತಿದ್ದರು. ಈ ಅಪರಾಧವು ಸಂಭವಿಸಿದಾಗ ಒಬ್ಬ ವ್ಯಕ್ತಿ ಅಪ್ರಾಪ್ತ ವಯಸ್ಕನಾಗಿದ್ದ.

ಆದರೆ ಯಾವ ಕೋರ್ಟುಗಳು ಸಹ ಅದನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಬಾಂಬೆ ಹೈಕೋರ್ಟು ಈ ಆರು ಜನರಲ್ಲಿ ಮೂವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗಿಳಿಸಿತು. ಆದರೆ ಸುಪ್ರೀಂ ಕೋರ್ಟು ಆ ಮೂವರ ಯಾವ ಅಹವಾಲನ್ನು ಕೇಳದೆಯೇ ಆ ಮೂವರಿಗೂ ಮತ್ತೆ ಮರಣದಂಡನೆಯನ್ನು ವಿಧಿಸಿತು. ನಂತರದಲ್ಲಿ ಸುಪ್ರೀಂಕೋರ್ಟು ಅವರ ಮರುವಿಚಾರಣೆಯ ಅಹವಾಲನ್ನು ಬಹಿರಂಗ ನ್ಯಾಯಾಲಯದಲ್ಲಿ ಕೇಳಿಸಿಕೊಳ್ಳದೆಯೇ ಅಹವಾಲನ್ನು ತಿರಸ್ಕರಿಸಿಬಿಟ್ಟಿತು. ಸುಪ್ರೀಂ ಕೋರ್ಟಿನ ಬೇರೊಂದು ಪೀಠದ ಮುಂದೆ ಈ ಸಂಬಂಧ ಕ್ಯುರೇಟೀವ್ ಅಹವಾಲನ್ನು ಮಂಡಿಸಿದಾಗ ಮಾತ್ರ ಈ ಪ್ರಮಾದವು ಗಮನಕ್ಕೆ ಬಂದು ಮತ್ತೊಮ್ಮೆ ನ್ಯಾಯದ ಚಕ್ರವು ತಿರುಗಲು ಪ್ರಾರಂಭಿಸಿತು. ಹೀಗಾಗಿ ಮರಣದಂಡನೆಯ ಬಗೆಗಿನ ಮರುಪರಿಶೀಲನಾ ಅರ್ಜಿಗಳ ಮರುವಿಚಾರಣೆಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರಲು ಅದನ್ನು ಬಹಿರಂಗ ಕೋರ್ಟಿನಲ್ಲೇ ವಿಚಾರಣೆ ನಡೆಸುವ ಬಗ್ಗೆ ಸುಪ್ರೀಂಕೋರ್ಟು ಅನುಸರಿಸುತ್ತಿರುವ ನಿಯಮವು ಎಷ್ಟು ಸರಿಯಾದದ್ದು ಎಂಬುದನ್ನು ಈ ಪ್ರಕರಣವು ಮತ್ತೊಮ್ಮೆ ಸಾಬೀತು ಪಡಿಸುತ್ತದೆ. ಅಂತಿಮವಾಗಿ ಸುಪ್ರೀಂಕೋರ್ಟು ಆರೂ ಜನ ಆರೋಪಿಗಳನ್ನು ಖುಲಾಸೆ ಮಾಡಿದೆಯಲ್ಲದೆ ಅವರಿಗೆ ಪರಿಹಾರವನ್ನು ಒದಗಿಸಬೇಕೆಂದೂ ಮಹಾರಾಷ್ಟ್ರ ಸರಕಾರಕ್ಕೆ ಆದೇಶಿಸಿದೆ ಹಾಗೂ ಈ ಘೋರಲೋಪವನ್ನು ಎಸಗಿದಕ್ಕಾಗಿ ಪೊಲೀಸರನ್ನು ಹೊಣೆಗಾರರನ್ನಾಗಿಸುವ ಪ್ರಯತ್ನವನ್ನೂ ಮಾಡಿದೆ. ಆದರೆ ಈ ಪ್ರಕರಣದಲ್ಲಿ ತನ್ನಿಂದಾದ ಲೋಪಗಳ ಬಗ್ಗೆ ಮಾತ್ರ ಸುಪ್ರೀಂ ಕೋರ್ಟು ಯಾವುದೇ ಸ್ವನಿರೀಕ್ಷಣೆ ಮಾಡಿಕೊಳ್ಳಲು ಮುಂದಾಗಿಲ್ಲ.

ಎಲ್ಲಾ ರೀತಿಯ ಪರ-ವಿರೋಧಿ ಸಾಕ್ಷ್ಯ ಮತ್ತು ಪುರಾವೆಗಳನ್ನು ಕೂಂಕಷವಾಗಿ ಪರಿಶೀಲಿಸಿದ ನಂತರ ಮತ್ತು ಶಿಕ್ಷೆಯ ಸಾಧಕ ಬಾಧಕಗಳನ್ನು ಒಟ್ಟಾರೆಯಾಗಿ ತೂಕಹಾಕಿದ ಮೇಲೆಯೇ ಅಪರೂಪದಲ್ಲಿ ಅಪರೂಪದ ಪ್ರಕರಣದಲ್ಲಿ ಮಾತ್ರ ಮರಣದಂಡನೆಯನ್ನು ವಿಧಿಸಲಾಗುತ್ತದೆಂದು ಸಮರ್ಥಿಸಿಕೊಳ್ಳುವ ಕೋರ್ಟುಗಳು ವಾಸ್ತವದಲ್ಲಿ ಈ ಎಲ್ಲಾ ಪ್ರಕ್ರಿಯೆಗಳನ್ನು ಸಣ್ಣಪುಟ್ಟ ನೆಪಗಳಿಗೂ ಕೈಬಿಟ್ಟಿರುವ ಉದಾಹರಣೆಗಳೇ ಹೆಚ್ಚು. ಉದಾಹರಣೆಗೆ ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳಿಗೆ ಮರಣದಂಡನೆ ವಿಧಿಸಿದ ನ್ಯಾಯಮೂರ್ತಿಗಳು ಮಾತಿನಲ್ಲಿ ಅಪಾರವಾಗಿ ನಿಷ್ಪಕ್ಷಪಾತ ತೋರಿದರೂ, ಅನುಸರಿಸಲೇ ಬೇಕಾದ ಕಾನೂನು ಪ್ರಕ್ರಿಯೆಗಳ ವಿಷಯದಲ್ಲಿ ಮಾತ್ರ ಯಾವ ಬದ್ಧತೆಯನ್ನೂ ತೋರಲೇ ಇಲ್ಲ. ಯಾವ ಸುಪ್ರೀಂಕೋರ್ಟು ಪೀಠವು ಈ ಅಂಕುಶ್ ಶಿಂಧೆ ಪ್ರಕರಣದಲ್ಲಿ ಮರಣದಂಡನೆಯನ್ನು ರದ್ದುಗೊಳಿಸಿತೋ ಅದೇ ಪೀಠವು ಅದೇ ದಿನ ಮತ್ತೊಂದು ಪ್ರಕರಣದ (ಖುಷ್‌ವಿಂದರ್ ಸಿಂಗ್ ಮತ್ತು ಪಂಜಾಬ್ ಸರಕಾರ) ಆರೋಪಿಗಳಿಗೆ ಮರಣದಂಡನೆ ವಿಧಿಸಲು ಬೇಕಾದ ಯಾವುದೇ ಕಾರಣ ಅಥವಾ ತರ್ಕವಿರದಿದ್ದರೂ ಆರೋಪಿಗಳ ಮರಣದಂಡನೆಯನ್ನು ಖಾಯಂ ಮಾಡಿತು. ಆದರೂ ಸುಪ್ರೀಂ ಕೋರ್ಟು ಬಹಳಷ್ಟು ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲು ಅಂತಹ ಉತ್ಸಾಹವೇನೂ ತೋರಿಲ್ಲ ಎಂದೇ ಹೇಳಬೇಕು. 2018ರಲ್ಲಿ ತನ್ನ ಮುಂದೆ ಬಂದ 18 ಪ್ರಕರಣಗಳಲ್ಲಿ 11ರಲ್ಲಿ ಶಿಕ್ಷಾ ಪ್ರಮಾಣವನ್ನು ತಗ್ಗಿಸಿದೆ. ಆದರೆ ಕೆಳಗಿನ ಕೋರ್ಟುಗಳು ಮಾತ್ರ ಮರಣದಂಡನೆ ವಿಧಿಸುವಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹವನ್ನು ತೋರಿಸುತ್ತಿವೆ. ಗಲ್ಲುಶಿಕ್ಷೆಯ ಬಗ್ಗೆ ದಿಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯವು ಸಂಗ್ರಹಿಸಿರುವ ವಾರ್ಷಿಕ ಅಂಕಿಅಂಶಗಳನ್ನು ಗಮನಿಸಿದರೆ 2000ದ ನಂತರದಲ್ಲೇ ಅತಿಹೆಚ್ಚು ಗಲ್ಲುಶಿಕ್ಷೆಯನ್ನು ಕೆಳಗಿನ ಕೋರ್ಟುಗಳು 2018ರಲ್ಲಿ ನೀಡಿವೆ.

ಅಂಕುಶ್ ಶಿಂಧೆ ಪ್ರಕರಣದಲ್ಲಿ ನಡೆದಿರುವ ತನಿಖೆ, ವಿಚಾರಣೆ, ವಾದ-ಪ್ರತಿವಾದ ಮತ್ತು ನ್ಯಾಯಾದೇಶಗಳನ್ನು ಹೋಲಿಕೆಯಾಗಿಟ್ಟುಕೊಂಡಲ್ಲಿ ಮರಣದಂಡನೆ ವಿಧಿಸಿದ ಬಹಳಷ್ಟು ಪ್ರಕರಣಗಳಲ್ಲಿ ತನಿಖೆಗಳು ಅತ್ಯಂತ ಲೋಪದೋಷಗಳಿಂದ ಕೂಡಿದ್ದವೆಂದೇ ಭಾವಿಸಬಹುದಾಗಿದೆ. ಆದರೂ ಕೋರ್ಟುಗಳು ಹೆಚ್ಚೆಚ್ಚು ಮರಣದಂಡನೆ ಶಿಕ್ಷೆಗಳನ್ನು ಕೊಡಬೇಕೆಂಬ ಸಾರ್ವಜನಿಕ ಒತ್ತಾಯಗಳ ಮೇಲೆ ಇಂತಹ ಪ್ರಮಾದಾತ್ಮಕ ಬೆಳವಣಿಗೆಗಳು ಯಾವುದೇ ಪ್ರಭಾವವನ್ನೂ ಬೀರುವುದಿಲ್ಲ. ಎಲ್ಲಾ ರಾಜಕಾರಣಿಗಳು ಕೂಡಾ ಇಂತಹ ಬೇಡಿಕೆಗಳಿಗೆ ಸಂತೋಷದಿಂದ ಸಮ್ಮತಿಸುತ್ತಾರೆ. ಆದರೆ ಶಿಥಿಲಾವಸ್ಥೆಯಲ್ಲಿರುವ ನ್ಯಾಯದಾನ ಮತ್ತು ಕಾನೂನು ವ್ಯವಸ್ಥೆಯಲ್ಲಿ ಮರಣದಂಡನೆಗಳು ಯಾವುದೇ ವೃತ್ತಿಪರ ಅಥವಾ ಕ್ರೂರ ಅಪರಾಧಿಗೆ ಶಿಕ್ಷೆ ವಿಧಿಸುವುದಕ್ಕಿಂತ ಅಮಾಯಕರನ್ನು ಬಲಿಪಶುಗಳನ್ನಾಗಿಸುವುದೇ ಹೆಚ್ಚೆಂಬ ವಾಸ್ತವವು ಒಂದೋ ಅವರಿಗೆ ಗೊತ್ತಿರುವುದಿಲ್ಲ ಅಥವಾ ಗೊತ್ತಿದ್ದರೂ ಅದು ಅವರಲ್ಲಿ ಯಾವುದೇ ಕಳವಳವನ್ನು ಹುಟ್ಟಿಸುವುದಿಲ್ಲ. ಕೆಳಗಿನ ಕೋರ್ಟುಗಳಂತೂ ಪ್ರಕರಣದ ತನಿಖೆಯಲ್ಲಿ ಆಗಿರಬಹುದಾದ ಘೋರ ಪ್ರಮಾದಗಳು ಗೊತ್ತಿದ್ದರೂ ಅಥವಾ ಆರೋಪಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲ ಸೌಲಭ್ಯಗಳಿಲ್ಲವೆಂದು ತಿಳಿದಿದ್ದರೂ ಸಾರ್ವಜನಿಕರ ಒತ್ತಾಯಕ್ಕೆ ತಕ್ಕಂತೆ ಹೆಚ್ಚೆಚ್ಚು ಮರಣದಂಡನೆಗಳನ್ನು ವಿಧಿಸುವುದರಲ್ಲೇ ಉತ್ಸುಕತೆ ತೋರುತ್ತಾ ಬಂದಿವೆ.

ಹಾಗಿರುವಾಗ ಅದರ ಬಗ್ಗೆ ಮೇಲ್ಮನವಿ ಸಾಧ್ಯತೆ ಇರುವ ಮೇಲಿನ ಕೋರ್ಟುಗಳೇ ಕೆಳಗಿನ ಕೋರ್ಟುಗಳ ತೀರ್ಮಾನಗಳನ್ನು ಬದಲಿಸಲು ಸಾಧ್ಯ. ಆದರೆ ಶಿಂಧೆ ಪ್ರಕರಣದಲ್ಲಿ ನಾವು ಗಮನಿಸಿದಂತೆ ಅವೂ ಕೂಡಾ ಪ್ರಮಾದವನ್ನೆಸಗಬಲ್ಲವು. ಒಂದು ವೇಳೆ ಅಂತಿಮವಾಗಿ ಅಮಾಯಕರು ದೋಷಮುಕ್ತರಾದರೂ ಅಥವಾ ಅವರ ಮರಣದಂಡನೆ ಶಿಕ್ಷೆ ರದ್ದಾದರೂ ದೋಷಪೂರಿತ ತನಿಖೆ, ವಿಚಾರಣೆ ಮತ್ತು ನ್ಯಾಯಾದೇಶಗಳಿಂದ ಇಡೀ ಪ್ರಕ್ರಿಯೆಯುದ್ದಕ್ಕೂ ಅವರು ಎದುರಿಸುವ ಯಮಯಾತನೆಗಳಿಗೆ ಯಾರೂ ಪರಿಹಾರ ಒದಗಿಸುವುದಿಲ್ಲ. ನಮ್ಮ ಶಿಥಿಲ ನ್ಯಾಯಾಂಗ ವ್ಯವಸ್ಥೆಯನ್ನು ನೋಡಿದಾಗ ಈ ಮರಣದಂಡನೆಯೆಂಬುದು ಸದಾ ತನ್ನ ಬಲಿಪಶುಗಳನ್ನು ದಮನಿತ ಮತ್ತು ವಂಚಿತ ಸಮುದಾಯಗಳಿಂದಲೇ ಆಯ್ಕೆ ಮಾಡಿಕೊಳ್ಳುವ ಸಾಂಸ್ಥಿಕ ಹತ್ಯೆಯಲ್ಲದೆ ಬೇರೇನೂ ಅಲ್ಲವೆಂದೇ ಹೇಳಬೇಕು. ಒಂದೆಡೆ ರಾಜಕೀಯ ನಾಯಕತ್ವವು ನೈತಿಕವಾಗಿ ಸರಿಯಾದ ಯಾವುದನ್ನು ಮಾಡುವುದಕ್ಕೂ ಸಿದ್ಧರಿಲ್ಲದಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟಾದರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮರಣದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಮುಂದಾಗಲೆಂದು ಆಶಿಸಬೇಕಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News