ಪ್ರಥಮ ಪಂದ್ಯದಲ್ಲಿ ಸಂಗ್ರಹವಾದ ಹಣ ಪುಲ್ವಾಮ ಸಂತ್ರಸ್ತರಿಗೆ: ಸಿಎಸ್ಕೆ
ಚೆನ್ನೈ, ಮಾ.21: ಚೆನ್ನೈನಲ್ಲಿ ನಡೆಯಲಿರುವ ಹನ್ನೆರಡನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಪ್ರಥಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ (ಸಿಎಸ್ಕೆ)ಮುಖಾಮುಖಿಯಾಗಲಿವೆ.
ಈ ಪಂದ್ಯದ ಟಿಕೆಟ್ನಿಂದ ಸಂಗ್ರಹವಾಗುವ ಹಣವನ್ನು ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ನೀಡುವುದಾಗಿ ಸಿಎಸ್ಕೆ ಹೇಳಿದೆ. ತಂಡದ ನಾಯಕ ಎಂ.ಎಸ್.ಧೋನಿ ಈ ಚೆಕ್ಗಳನ್ನು ಯೋಧರ ಕುಟುಂಬಗಳಿಗೆ ಹಸ್ತಾಂತರಿಸಲಿದ್ದಾರೆ ಎಂದು ಸಿಎಸ್ಕೆ ನಿರ್ದೇಶಕ ರಾಕೇಶ್ ಸಿಂಗ್ ತಂಡದ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಫೆ.14ರಂದು ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ತಾನ ಮೂಲದ ಜೈಶ್ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.
ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸೂಚಕವಾಗಿ ಭಾರತ ಕ್ರಿಕೆಟ್ ತಂಡದ ಆಟಗಾರರು ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ವಿಶೇಷ ಆರ್ಮಿ ಕ್ಯಾಪ್ಗಳನ್ನು ಧರಿಸಿ ಕಣಕ್ಕಿಳಿದಿದ್ದರು. ಅಲ್ಲದೆ ತಮ್ಮ ಪಂದ್ಯದ ಶುಲ್ಕವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ದಾನವಾಗಿ ನೀಡಿದ್ದರು.