ಸಂಜೋತಾ ಪ್ರಕರಣ: ತನಿಖಾ ಸಂಸ್ಥೆಗಳ ಬಗ್ಗೆ ಸಂದೇಹ

Update: 2019-03-27 04:40 GMT

ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಸ್ಫೋಟವಾಗಿ ಅರುವತ್ತೆಂಟು ಜನ ಅಸುನೀಗಿದ ಘಟನೆ ಸಂಭವಿಸಿ ಹನ್ನೆರಡು ವರ್ಷಗಳಾದವು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆದು ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದ ವಿಶೇಷ ನ್ಯಾಯಾಲಯ ದೋಷಮುಕ್ತರನ್ನಾಗಿ ಮಾಡಿದೆ. ಅಸೀಮಾನಂದ ಜೊತೆಯಲ್ಲಿ ಇತರ ಮೂವರೂ ಆರೋಪಮುಕ್ತರಾಗಿದ್ದಾರೆ. ಅರುವತ್ತೆಂಟು ಜನ ಅಮಾಯಕ ಪ್ರಯಾಣಿಕರನ್ನು ಬಲಿತೆಗೆದುಕೊಂಡ ಈ ಪ್ರಕರಣದಲ್ಲಿ ಸುದೀರ್ಘ ವಿಚಾರಣೆಯ ನಂತರವೂ ಆರೋಪಕ್ಕೆ ಒಳಗಾದವರನ್ನು ದೋಷಮುಕ್ತರನ್ನಾಗಿ ಮಾಡಲಾಗಿದೆ ಅಂದರೆ ಅದರ ಅರ್ಥವೇನು? ಹಾಗಿದ್ದರೆ ಅರುವತ್ತೆಂಟು ಜನರ ಸಾವಿಗೆ ಯಾರು ಕಾರಣ? ಈ ಪ್ರಶ್ನೆಗೆ ಉತ್ತರ ಕೊಡಬೇಕಾದವರು ಯಾರು?

 ಸ್ವಾಮಿ ಅಸೀಮಾನಂದ ಮತ್ತು ಮೂವರು ಆರೋಪಿಗಳು ಸಂಘ ಪರಿವಾರದ ಹಿನ್ನೆಲೆ ಹೊಂದಿದವರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಸ್ಫೋಟದ ಬಗ್ಗೆ ಅಸೀಮಾನಂದ ಹಿಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಆದರೂ ಅವರು ನಿರಪರಾಧಿಯಾಗಿ ಹೊರಗೆ ಬಂದಿದ್ದಾರೆ. ಅವರ ಮೇಲಿನ ಆರೋಪಗಳನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿರುವುದು ಗಮನಾರ್ಹ ಅಂಶವಾಗಿದೆ. ಈ ಪ್ರಕರಣದಲ್ಲಿ ಒಟ್ಟು ಎಂಟು ಜನರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಇವರ ಪೈಕಿ ಒಬ್ಬ ಆರೋಪಿಯ ಹತ್ಯೆಯಾಗಿದೆ. ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಇನ್ನುಳಿದ ನಾಲ್ಕು ಜನರನ್ನು ದೋಷಮುಕ್ತರನ್ನಾಗಿ ಮಾಡಲಾಗಿದೆ. ಹಾಗಿದ್ದರೆ ಅರುವತ್ತೆಂಟು ಜನರ ದುರಂತ ಸಾವಿಗೆ ಯಾರು ಕಾರಣ ಎಂಬ ಪ್ರಶ್ನೆಗೆ ತನಿಖಾ ಸಂಸ್ಥೆಯ ಬಳಿಯೂ ಉತ್ತರವಿಲ್ಲ.

ಈ ಸ್ಫೋಟದಲ್ಲಿ ಸಾವಿಗೀಡಾದ ಅರುವತ್ತೆಂಟು ಜನರಲ್ಲಿ ಹೆಚ್ಚಿನವರು ಪಾಕಿಸ್ತಾನದ ಪ್ರಜೆಗಳು. ಯಾರೇ ಆಗಿರಲಿ ಬಾಂಬ್ ಸ್ಫೋಟ ಮಾಡಿ ಸಾಯಿಸುವುದು ಹೇಯ ಕೃತ್ಯ. ಶಾಂತಿ ಮತ್ತು ಸೌಹಾರ್ದದ ದ್ಯೋತಕವಾಗಿ ಪಾಕಿಸ್ತಾನಕ್ಕೆ ರೈಲು ಸಂಚಾರವನ್ನು ಅತ್ಯುಗ್ರ ಕೋಮುವಾದಿ ಶಕ್ತಿಗಳು ವಿರೋಧಿಸುತ್ತ ಬಂದಿದ್ದವು. ಭಾರತ-ಪಾಕಿಸ್ತಾನ ಎರಡೂ ದೇಶಗಳು ಸೌಹಾರ್ದ ಸಂಬಂಧ ಹೊಂದಿರುವುದು, ಎರಡೂ ಕಡೆಯ ಮತಾಂಧ ಶಕ್ತಿಗಳಿಗೆ ಬೇಕಾಗಿಲ್ಲ. ಆ ಶಕ್ತಿಗಳೇ ಇಂಥ ದುಷ್ಕೃತ್ಯಕ್ಕೆ ಕಾರಣವಾಗಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಆರೆಸ್ಸೆಸ್ ಕಾರ್ಯಕರ್ತ ಸ್ವಾಮಿ ಅಸೀಮಾನಂದ ಸಾಮಾನ್ಯ ವ್ಯಕ್ತಿಯಲ್ಲ. ಅವರು ಹೈದರಾಬಾದ್‌ನ ಮಕ್ಕಾ ಮಸೀದಿ ಮತ್ತು ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ಕೂಡ ಆರೋಪಿಯಾಗಿದ್ದರು. ಆ ಎರಡು ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ. 2002ರಲ್ಲಿ ನಡೆದ ಅಕ್ಷರ ಧಾಮ ದೇವಾಲಯದ ಮೇಲಿನ ದಾಳಿಗೆ ಸೇಡು ತೀರಿಸಿಕೊಳ್ಳಲು ಹುಟ್ಟಿಕೊಂಡ ಹಿಂದುತ್ವವಾದಿ ಉಗ್ರ ಸಂಘಟನೆಯ ಸೂತ್ರಧಾರ ಅಸೀಮಾನಂದ ಎಂದು ಪ್ರಾಸಿಕ್ಯೂಶನ್ ಈ ಹಿಂದೆ ಹೇಳಿತ್ತು. ಅಲ್ಲದೆ ಸ್ವತಃ ಅಸೀಮಾನಂದ ಕೂಡ ಮ್ಯಾಜಿಸ್ಟ್ರೇಟ್‌ರ ಮುಂದೆ ಕೇಸರಿ ಭಯೋತ್ಪಾದನೆ ಬಗ್ಗೆ ಸುದೀರ್ಘ ಹೇಳಿಕೆಯನ್ನು ನೀಡಿದ್ದರು. ಆನಂತರ ಅವರು ಹೇಳಿಕೆ ವಾಪಸು ಪಡೆದಿದ್ದರು. ಆರಂಭದಲ್ಲಿ ಹರ್ಯಾಣ ಪೊಲೀಸರು ತನಿಖೆ ನಡೆಸಿದ್ದರು. ಆನಂತರ ಅದನ್ನು ಎನ್‌ಐಎಗೆ ಹಸ್ತಾಂತರ ಮಾಡಲಾಗಿತ್ತು.

ಆದರೆ 2014 ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಂದರೆ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎನ್‌ಐಎ ಈ ಪ್ರಕರಣವನ್ನು ನಿಭಾಯಿಸಿದ ರೀತಿಯ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. 2015 ಸುಮಾರಿಗೆ ಕೆಲವರು ಪ್ರತಿಕೂಲ ಸಾಕ್ಷ್ಯ ನುಡಿಯಲು ಆರಂಭಿಸಿದರು. ಹೀಗಾಗಿ ಪ್ರಾಸಿಕ್ಯೂಶನ್ ವಾದ ವಿಫಲಗೊಂಡಿತು.

ಭಾರತ-ಪಾಕಿಸ್ತಾನ ನಡುವಿನ ಸೌಹಾರ್ದ ಮಾತುಕತೆಯನ್ನು ಹಾಳು ಮಾಡುವ ಉದ್ದೇಶದಿಂದ ನಡೆಸಲಾದ ಸಂಜೋತಾ ರೈಲಿನ ಬಾಂಬ್ ಸ್ಫೋಟದಲ್ಲಿ ಪ್ರಾಸಿಕ್ಯೂಶನ್ ವೈಫಲ್ಯ ಎದ್ದು ಕಾಣುತ್ತದೆ. ಕೇಂದ್ರ ಸರಕಾರ ಇಲ್ಲವೇ ರಾಜಕೀಯ ಒತ್ತಡಕ್ಕೆ ಪ್ರಾಸಿಕ್ಯೂಶನ್ ಮಣಿದಂತೆ ಕಾಣುತ್ತಿದೆ. ಅದೇನೇ ಇರಲಿ, ಅರುವತ್ತೆಂಟು ಜನರ ಸಾವಿಗೆ ಕಾರಣವಾದ ಈ ಬಾಂಬ್ ಸ್ಫೋಟದ ಬಗ್ಗೆ ಪಾರದರ್ಶಕ ತನಿಖೆ ನಡೆದು ಸ್ಫೋಟಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಬೇಕಾಗಿದೆ. ಇಲ್ಲವಾದರೆ ತನಿಖಾ ಸಂಸ್ಥೆಗಳ ಕಾರ್ಯಕ್ಷಮತೆಯ ಬಗ್ಗೆ ಜನರಲ್ಲಿ ಸಂದೇಹ ಉಂಟಾಗುತ್ತದೆ.

ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ ಹಾಗೂ ಕರ್ನಾಟಕದ ಸತ್ಯ ಶೋಧಕ ಡಾ. ಎಂ. ಎಂ. ಕಲಬುರ್ಗಿ ಹತ್ಯೆ ಪ್ರಕರಣದಲ್ಲೂ ತನಿಖಾ ಸಂಸ್ಥೆಗಳ ನಿಷ್ಕ್ರಿಯತೆ ಬಗ್ಗೆ ಟೀಕೆ ವ್ಯಕ್ತವಾಗಿದೆ. ಪನ್ಸಾರೆ ಹತ್ಯೆ ಪ್ರಕರಣದಲ್ಲಿ ತನಿಖಾ ಸಂಸ್ಥೆಯ ವೈಫಲ್ಯದ ಬಗ್ಗೆ ಮುಂಬೈ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದ್ದರಿಂದ ಅದರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಿ ಒಂದು ಹಂತಕ್ಕೆ ಬಂದಿದೆ.

ಬಿಜೆಪಿ ಅಧಿಕಾರದಲ್ಲಿರುವ ಕಡೆಗಳಲ್ಲೆಲ್ಲ ಧರ್ಮದ ಹೆಸರಿನಲ್ಲಿ ಸಾಮಾಜಿಕ ಶಾಂತಿ ಕದಡುವುದು ಮಾತ್ರವಲ್ಲ ಅಪರಾಧ ಚಟುವಟಿಕೆಗಳಿಗೆ ಅಧಿಕಾರದಲ್ಲಿರುವವರಿಂದ ರಕ್ಷಣೆ ಸಿಗುತ್ತವೆ ಎಂಬ ದೂರುಗಳಿವೆ.

ಗುಜರಾತ್ ಹತ್ಯಾಕಾಂಡದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಹತ್ಯೆಗೊಳಗಾದರು. ಆ ಪ್ರಕರಣದ ತನಿಖೆ ಕೂಡ ನ್ಯಾಯ ಸಮ್ಮತವಾಗಿ ನಡೆದಿಲ್ಲ ಎಂಬ ಆರೋಪಗಳೂ ಇವೆ. ಅಂತಲೇ ಅನೇಕ ಆರೋಪಿಗಳು ಅಲ್ಲೂ ದೋಷಮುಕ್ತರಾಗಿ ಓಡಾಡುತ್ತಿದ್ದಾರೆ. ಹೀಗಾದರೆ ಜನತೆ ಕಾನೂನು ಆಡಳಿತದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ.

ಕ್ರಿಮಿನಲ್, ಫ್ಯಾಶಿಸ್ಟ್ ಶಕ್ತಿಗಳು ಆಡಳಿತಾಂಗದ ಎಲ್ಲ ಕಡೆ ನುಸುಳಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಕರಾಳ ಶಕ್ತಿಗಳು ಶಾಸನ ಬದ್ಧ ಆಡಳಿತದ ನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತಿವೆ. ಆದ್ದರಿಂದ ಸಾಂವಿಧಾನಿಕ ಸಂಸ್ಥೆಗಳಿಂದ ಈ ಅಪರಾಧಿ ಶಕ್ತಿಗಳನ್ನು ಹೊರದಬ್ಬುವ ಕಾರ್ಯಕ್ಕೆ ಎಲ್ಲ ಪ್ರಜಾಪ್ರಭುತ್ವವಾದಿ ಶಕ್ತಿಗಳು ಮುಂದಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News