ಬಾಬು ಭಟ್ ಶರವು

Update: 2019-04-04 17:29 GMT

ಮಂಗಳೂರು, ಎ.4: ‘ಬಾಬು ಭಟ್ ಶರವು’ ಎಂದೇ ಖ್ಯಾತರಾಗಿದ್ದ ಎ.ಶ್ರೀನಿವಾಸರಾವ್ (79) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನ ಹೊಂದಿದರು.

ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ಬಾಬು ಭಟ್ ದಿ.ವಿಶುಕುಮಾರ್ ಅವರ ‘ಹೆಗಲಿಗೆ ಹೆಗಲು’, ಮನೆಯಿಂದ ಮಸಣಕ್ಕೆ’ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು. ದಿ.ಮಾಸ್ಟರ್ ವಿಠಲ್ ಅವರ ಶಿಷ್ಯೆ ಸಿನೆಮಾ ತಾರೆ ಮಿನುಗು ತಾರೆ ಕಲ್ಪನಾ ಅವರ ಒಡನಾಡಿಯಾಗಿದ್ದ ಅವರು, ಬಿ.ರಾಮ ಕಿರೋಡಿಯನರ ‘ದಿಕ್ಕ್ ತತ್ತಿ ಬೊಕ್ಕ’ ನಾಟಕದ ಹಾಸ್ಯಪಾತ್ರಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದರು. ಎಂ.ಕೆ. ಸೀತಾರಾಮ ಕುಲಾಲ್ ಅವರ ‘ಮಣ್ಣ್‌ದ ಮಗಲ್ ಅಬ್ಬಕ್ಕ’ ಚಾರಿತ್ರಿಕ ನಾಟಕದಲ್ಲಿ ಸೇನಾಧಿಪತಿ ತಿಮ್ಮಣ್ಣ ನಾಯಕನ ಪಾತ್ರದಲ್ಲೂ ಮಿಂಚಿದ್ದರು.

1966ರಲ್ಲಿ ಶ್ರೀ ಕ್ಷೇತ್ರ ಶರವಿನಲ್ಲಿ ಜರಗಿದ್ದ ‘ಅಷ್ಟಗ್ರಹ ಶಾಂತಿಯಜ್ಞ’ ಕಾರ್ಯಕ್ರಮದ ಸಂದರ್ಭ ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪಅವರಿಂದ ಗೌರವಿಸಲ್ಪಟ್ಟಿದ್ದರು. ‘ಅಖಂಡ ಬ್ರಹ್ಮಚಾರಿ’ ಎಂಬ ಕನ್ನಡ ಚಲನಚಿತ್ರದಲ್ಲೂ ನಟಿಸಿರುವ ಇವರಿಗೆ ಶರವು ರಾಮಕೃಷ್ಣ ಶಾಸ್ತ್ರಿ ಪ್ರಶಸ್ತಿ, ತುಳು ನಾಟಕ ಕಲಾವಿದ ಒಕ್ಕೂಟದಿಂದ ಸನ್ಮಾನ, ದಿ.ವಿಷ್ಣು ಮೂರ್ತಿ ಸಂಸ್ಮರಣಾ ಸನ್ಮಾನ, ದ.ಕ. ಜಿಲ್ಲಾ ಸಾಂಸ್ಕೃತಿಕೋತ್ಸವ ಸನ್ಮಾನ ಸಹಿತ ಅನೇಕ ಸನ್ಮಾನಗಳು ಸಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ