ಅಭಿವೃದ್ಧಿ ಮಾಡದ ಕಾಂಗ್ರೆಸಿಗರು ಬುರ್ಖಾ ಹಾಕಿ ಮತ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ: ಸದಾನಂದಗೌಡ

Update: 2019-04-09 13:03 GMT

ಬೆಂಗಳೂರು, ಎ.9: ಕೇಂದ್ರದಿಂದ ಹೆಚ್ಚು ಅನುದಾನ ಕೊಡಿಸಿ ಎಂದು ನನ್ನ ಮನೆ ಬಾಗಿಲಿಗೆ ಬಂದಿದ್ದನ್ನು ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ ಮರೆತಿದ್ದಾರೆಯೇ ಅಥವಾ ಇದನ್ನು ಕಾಂಗ್ರೆಸಿಗರ 420 ಬುದ್ಧಿ ಎನ್ನಬೇಕೇ ಗೊತ್ತಾಗುತ್ತಿಲ್ಲ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದರು.

ಮಂಗಳವಾರ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವೀರಾಂಜನೇಯ ದೇವಸ್ಥಾನದ ಸಮೀಪ ಪ್ರಚಾರ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸದಾನಂದಗೌಡರು ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಕೃಷ್ಣಭೈರೇಗೌಡ ಆರೋಪಿಸುತ್ತಿದ್ದಾರೆ. ಇದು ಮರೆಗುಳಿತನವೇ, ಚುನಾವಣಾ ರಾಜಕೀಯವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಒಂದೂವರೆ ತಿಂಗಳ ಹಿಂದಷ್ಟೇ ದಿಲ್ಲಿಯಲ್ಲಿರುವ ನನ್ನ ಮನೆಯಲ್ಲಿ ರಾಜ್ಯದ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರನ್ನು ಆಹ್ವಾನಿಸಿ ಚರ್ಚೆ ನಡೆಸಿ ಕೇಂದ್ರದಿಂದ ಹೆಚ್ಚು ಅನುದಾನ ಕೊಡಿಸಿದ್ದನ್ನು ಕೃಷ್ಣಭೈರೇಗೌಡ ಮರೆತಿರಬೇಕು. ಈ ಸಭೆಗೆ ಕೃಷ್ಣಭೈರೇಗೌಡರೂ ಬಂದಿದ್ದರು ಎಂದು ಸದಾನಂದಗೌಡ ತಿರುಗೇಟು ನೀಡಿದರು.

ಯುಪಿಎ ಸರಕಾರ 2009-2014ರಲ್ಲಿ ರಾಜ್ಯಕ್ಕೆ 74.5 ಸಾವಿರ ಕೋಟಿ ರೂ. ಅನುದಾನ ನೀಡಿತ್ತು. ಬಿಜೆಪಿಯು 2014-2019 ರಲ್ಲಿ 2.42 ಲಕ್ಷ ಕೋಟಿ ರೂ. ಅನುದಾನವನ್ನು ಅಂದರೆ ಮೂರುಪಟ್ಟು ಅನುದಾನ ನೀಡಿದೆ. ಇದು ಕೃಷ್ಣಭೈರೇಗೌಡಗೆ ಗೊತ್ತಿಲ್ಲವೇ. ಹೊಟೇಲ್‌ಗಳಲ್ಲಿ ಕುಳಿತು ಗುತ್ತಿಗೆದಾರರಿಂದ ಕಲೆಕ್ಷನ್ ಮಾಡಿಸುವುದು ಮಾತ್ರ ಗೊತ್ತಾ ಎಂದು ಅವರು ಪ್ರಶ್ನಿಸಿದರು.

ಮೋದಿ ಮುಖವಾಡ ಹಾಕಿಕೊಂಡು ಬಿಜೆಪಿಯವರು ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸಿಗರು ಆರೋಪಿಸುತ್ತಿದ್ದಾರಲ್ಲಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾಂಗ್ರೆಸಿಗರು ಬುರ್ಖಾ ಹಾಕಿಕೊಂಡು ಮತ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ನಾವು ಮತ ಯಾಚಿಸುತ್ತಿದ್ದೇವೆ. ಕಾಂಗ್ರೆಸಿಗರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೆಸರೇಳಿಕೊಂಡು ಮತ ಯಾಚಿಸಲಿ ಎಂದು ಅವರು ವ್ಯಂಗ್ಯವಾಡಿದರು.

ಕ್ಷೇತ್ರಕ್ಕೆ ನಾನು ಮಾಡಿದ ಕೆಲಸಗಳು ಮತ್ತು ನರೇಂದ್ರ ಮೋದಿ ಮಾಡಿದ ಅಭಿವೃದ್ಧಿ ಹೆಸರಿನಲ್ಲಿ ನಾವು ಮತ ಯಾಚಿಸುತ್ತೇವೆ. ಆದರೆ ಕಾಂಗ್ರೆಸಿಗರು ಯಾವುದೇ ವಿಷಯಗಳಿಲ್ಲದಿರುವುದರಿಂದ ಟೀಕೆ ಮಾಡುವುದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಇದನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಾಡಿಗೆ ಜನರನ್ನು ಕರೆತಂದು ಸಭೆ ನಡೆಸುವ ಸ್ಥಿತಿಗೆ ನಮ್ಮ ವಿರೋಧಿಗಳು ಬಂದು ನಿಂತಿದ್ದಾರೆ. ಕುರುಬರಹಳ್ಳಿಯಲ್ಲಿ ನಡೆದ ಸಭೆಗೆ ತಲಾ 300 ರೂ.ಗಳಂತೆ ನೀಡಿ ಸ್ತ್ರೀ ಶಕ್ತಿ ಸಂಘದವರನ್ನು ಕರೆದುಕೊಂಡು ಬಂದಿದ್ದರು. ಇಂತಹ ಕೆಲಸಕ್ಕೆ ಮುಖ್ಯಮಂತ್ರಿಗಳು ಮತ್ತು ಈ ಕ್ಷೇತ್ರದ ಅಭ್ಯರ್ಥಿ ಇಳಿಯಬಾರದಿತ್ತು ಎಂದು ಸದಾನಂದಗೌಡ ಟೀಕಿಸಿದರು.

ಸಂಸದರ ಅನುದಾನ ಬಳಕೆಯಲ್ಲಿ ನಾನು ನಂ.1 ಎಂದು ಬಿ ಪ್ಯಾಕ್ ಬಿಡುಗಡೆ ಮಾಡಿದ ವರದಿ ಹೇಳಿದೆ. ರಾಜ್ಯದ ಯಾವ ಸಂಸದರೂ ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಇದು ಸಾಧ್ಯವಾಯಿತು ಎಂದು ಅವರು ವಿವರಿಸಿದರು.

ಜಾಲಹಳ್ಳಿಯಲ್ಲಿ ಪಾಸ್‌ಪೋರ್ಟ್ ಕಚೇರಿ ಉದ್ಘಾಟನೆಗೆ ಆಹ್ವಾನಿಸಿದರೂ ಕೃಷ್ಣ ಭೈರೇಗೌಡ ಬರಲಿಲ್ಲ. ಕೇಂದ್ರೀಯ ವಿದ್ಯಾಲಯ ಉದ್ಘಾಟನೆಗೂ ಆಗಮಿಸಲಿಲ್ಲ. ಇದು ಯಾವ ರಾಜಕೀಯ ಎಂದು ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮುಖಂಡರಾದ ಹರೀಶ್, ಶಂಕರಪ್ಪ, ಪ್ರಸನ್ನ, ರಾಜಣ್ಣ, ಎಂ.ನಾಗರಾಜ್, ರಾಜೇಂದ್ರ ಕುಮಾರ್, ಶಿವಾನಂದ್, ರಂಗಣ್ಣ, ಗಂಗಹನುಮಯ್ಯ, ಜಯಸಿಂಹ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News