ಸಮರ್ಥ ನಾಯಕತ್ವಕ್ಕೆ ಬಿಜೆಪಿ ಬೆಂಬಲಿಸಿ: ಡಿ.ವಿ.ಸದಾನಂದಗೌಡ

Update: 2019-04-15 15:09 GMT

ಬೆಂಗಳೂರು, ಎ.15: ಸಮರ್ಥ ನಾಯಕತ್ವ, ಸ್ಥಿರ ಸರಕಾರಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಮನವಿ ಮಾಡಿದ್ದಾರೆ.

ಸೋಮವಾರ ಬೆಳಗ್ಗೆ ಯಶವಂತಪುರ ಕ್ಷೇತ್ರದ ತಾವರೆಕೆರೆಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವನಾಗಿ ಐದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿದ್ದೇನೆ. ಕೇಂದ್ರ ಮತ್ತು ರಾಜ್ಯದ ಕೊಂಡಿಯಾಗಿ ಅನುದಾನ ತರುವಲ್ಲಿ ನೆರವಾಗಿದ್ದೇನೆ. ಆದುದರಿಂದ ನನ್ನನ್ನು ಪುನರ್ ಆಯ್ಕೆ ಮಾಡಬೇಕೆಂದು ಕೋರಿದರು.

ಐದು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇನೆ. ಇನ್ನು ಮುಂದೆಯೂ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ ಎಂದ ಅವರು, ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರವು ಜನಮೆಚ್ಚುವಂತಹ ಆಡಳಿತವನ್ನು ನೀಡಿದೆ. ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದರು.

ವಿಶ್ವಬ್ಯಾಂಕ್ ವರದಿ ಪ್ರಕಾರ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಹಿಂದಿನ ಭಾರತಕ್ಕೆ 147ನೆ ರ್ಯಾಂಕ್ ಇತ್ತು. ಮೋದಿ ಆಡಳಿತದಲ್ಲಿ ಅದು 77ನೆ ರ್ಯಾಂಕಿಗೆ ಜಿಗಿತ ಕಂಡಿದೆ ಎಂದರು. ನರಸಿಂಹಮೂರ್ತಿ, ರಮೇಶ್, ವರಲಕ್ಷ್ಮಿ ವೀರೇಶ್, ನವೀನಾ, ಅನುಪಮಾ, ಪ್ರೇಮಾ ನಾಗಯ್ಯ, ಸೌಮ್ಯ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News