ವಿಶ್ವಕಪ್ ಕ್ರಿಕೆಟ್ ಗೆ ಲಂಕಾ ತಂಡ ಪ್ರಕಟ

Update: 2019-04-19 04:45 GMT

ಕೊಲಂಬೊ, ಎ.18:  ಮಾಜಿ ನಾಯಕ ದಿನೇಶ್ ಚಾಂಡಿಮಲ್ ಸೇರಿದಂತೆ ಪ್ರಮುಖ ಆಟಗಾರರನ್ನು ಕೈಬಿಟ್ಟಿರುವ ಶ್ರೀಲಂಕಾ ವಿಶ್ವಕಪ್ ಕ್ರಿಕೆಟ್‌ಗೆ ಗುರುವಾರ ತಂಡವನ್ನು ಪ್ರಕಟಿಸಿದೆ. ಲಹಿರು ತಿರಿಮನ್ನೆ ಹಾಗೂ ಲೆಗ್‌ಸ್ಪಿನ್ನರ್ ಜೆಫರಿ ವಂಡರ್ಸೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ಧಾರೆ. ಕಳೆದ ಅಕ್ಟೋಬರ್‌ವರೆಗೆ ತಂಡದ ನಾಯಕತ್ವ ವಹಿಸಿದ್ದ ಚಾಂಡಿಮಲ್, ವಿಕೆಟ್‌ಕೀಪರ್ ದಾಂಡಿಗ ನಿರೋಶನ್ ಡಿಕ್ವೆಲ್ಲಾ, ಆಫ್‌ಸ್ಪಿನ್ನರ್ ಅಖಿಲ ಧನಂಜಯ, ಆರಂಭಿಕ ಆಟಗಾರರಾದ ಧನುಷ್ಕ ಗುಣತಿಲಕ ಹಾಗೂ ಉಪುಲ್ ತರಂಗರನ್ನು ಹೊರಗಿಟ್ಟು 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ. ತಿರಿಮನ್ನೆ ಹಾಗೂ ವಂಡರ್ಸೆ ಜೊತೆಗೆ ಇನ್ನೂ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಏಕದಿನದಲ್ಲಿ ದೇಶವನ್ನು ಪ್ರತಿನಿಧಿಸದಿದ್ದರೂ ಮಿಲಿಂದ ಸಿರಿವರ್ಧನ ಹಾಗೂ ಜೀವನ್ ಮೆಂಡಿಸ್ ವಿಶ್ವಕಪ್ ಕ್ರಿಕೆಟ್‌ಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬುಧವಾರ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿರುವ ಎಡಗೈ ದಾಂಡಿಗ ದಿಮುತ್ ಕರುಣರತ್ನೆ, 2015ರ ಮಾರ್ಚ್ ನಲ್ಲಿ ಕೊನೆಯ ಬಾರಿ ಏಕದಿನ ಪಂದ್ಯವಾಡಿದ್ದಾರೆ. ಆರಂಭಿಕ ಆಟಗಾರ ಆವಿಷ್ಕಾ ಫೆರ್ನಾಂಡೊ ಹಾಗೂ ವೇಗಿ ನುವಾನ್ ಪ್ರದೀಪ್ ಕೂಡ 50 ಓವರ್ ಮಾದರಿಯ ಮೆಗಾ ಟೂರ್ನಿಗಾಗಿ ಇಂಗ್ಲೆಂಡ್‌ಗೆ ತೆರಳಲಿದ್ದಾರೆ.

1996ರ ಟೂರ್ನಿಯ ಚಾಂಪಿಯನ್‌ಗಳು ಈ ಆವೃತ್ತಿಯ ತಮ್ಮ ಮೊದಲ ಪಂದ್ಯವನ್ನು ಜೂ.1ರಂದು ಕಾರ್ಡಿಫ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಆಡಲಿದ್ದಾರೆ.

►ಶ್ರೀಲಂಕಾ ತಂಡ

ದಿಮುತ್ ಕರುಣರತ್ನೆ (ನಾಯಕ), ಲಸಿತ್ ಮಾಲಿಂಗ, ಆ್ಯಂಜೆಲೊ ಮ್ಯಾಥ್ಯುಸ್, ತಿಸಾರ ಪೆರೇರ, ಕುಸಾಲ್ ಪೆರೇರ, ಧನಂಜಯ ಡಿಸಿಲ್ವಾ, ಕುಸಾಲ್ ಮೆಂಡಿಸ್, ಇಸುರು ಉಡಾನಾ, ಮಿಲಿಂದ ಸಿರಿವರ್ಧನ, ಆವಿಷ್ಕಾ ಫೆರ್ನಾಂಡೊ, ಜೀವನ್ ಮೆಂಡಿಸ್, ಲಹಿರು ತಿರಿಮನ್ನೆ, ಜೆಫರಿ ವಂಡರ್ಸೆ, ನುವಾನ್ ಪ್ರದೀಪ್ ಹಾಗೂ ಸುರಂಗ ಲಕ್ಮಲ್.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News