ಅಂತರ್‌ಜಾತಿ ವಿವಾಹದಿಂದ ಜಾತಿ ವಿನಾಶ: ಬೆಂಗಳೂರು ದಲಿತ್ ಫೋರಂ ಅಧ್ಯಕ್ಷ ಟಿ.ಗಜೇಂದ್ರ

Update: 2019-04-21 14:44 GMT

ಬೆಂಗಳೂರು, ಎ.21: ಡಾ.ಬಿ.ಆರ್.ಅಂಬೇಡ್ಕರ್‌ರವರು ಅಂತರ್‌ಜಾತಿ ಮದುವೆಗಳ ಮೂಲಕ ಜಾತಿ ವಿನಾಶ ಆಗುತ್ತದೆ ಎಂದು ಬಲವಾಗಿ ನಂಬಿದ್ದರು ಎಂದು ಬೆಂಗಳೂರು ದಲಿತ್ ಫೋರಂ ಅಧ್ಯಕ್ಷ ಟಿ.ಗಜೇಂದ್ರ ಅಭಿಪ್ರಾಯಿಸಿದರು.

ರವಿವಾರ ಮಾ-ಲೆ ಅಧ್ಯಯನ ಕೂಟ ಹಾಗೂ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ ನಗರದ ನ್ಯಾಷನಲ್ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ ಪೂರ್ವದಲ್ಲಿ ಬಾಲಗಂಗಾಧರ ತಿಲಕ್, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್ ಮೊದಲ್ಗೊಂಡು ಸಾವಿರಾರು ನಾಯಕರು ಬ್ರಿಟಿಷರ ವಿರುದ್ಧ ರಾಜಕೀಯ ಸ್ವಾತಂತ್ರಕ್ಕೆ ಹೋರಾಟ ಮಾಡಿದರು. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಸಾವಿರಾರು ಶತಮಾನಗಳಿಂದ ದೇಶದಲ್ಲಿರುವ ಜಾತಿ ಅಸಮಾನತೆ, ಅಸ್ಪಷ್ಯತೆ ಸೇರಿದಂತೆ ನಾನಾ ಪೀಡುಗಳ ವಿರುದ್ಧ ಜನರನ್ನು ಜಾಗೃತಿ ಮೂಡಿಸುವುದಕ್ಕೆ ಮೊದಲ ಆದ್ಯತೆ ಕೊಟ್ಟರು ಎಂದು ಅವರು ನೆನಪು ಮಾಡಿಕೊಂಡರು.

ದೇಶದಲ್ಲಿರುವ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ ಬರದೆ, ರಾಜಕೀಯ ಸ್ವಾತಂತ್ರಕ್ಕೆ ಯಾವುದೆ ಮಾನ್ಯತೆ ಇಲ್ಲ. ಇದರಿಂದ ಬಡವರಿಗೆ, ದಲಿತರಿಗೆ, ಆದಿವಾಸಿಗಳಿಗೆ, ಅಲ್ಪಸಂಖ್ಯಾತರಿಗೆ ಹಾಗೂ ಮಹಿಳೆಯರಿಗೆ ಯಾವುದೆ ಪ್ರಯೋಜನವಿಲ್ಲವೆಂದು ಬಲವಾಗಿ ನಂಬಿದ್ದರು. ಹೀಗಾಗಿಯೆ ಸಂವಿಧಾನದಲ್ಲಿ ರಾಜಕೀಯ ಸ್ವಾತಂತ್ರದಷ್ಟೆ ಪ್ರಾಮುಖ್ಯತೆಯನ್ನು ಸಾಮಾಜಿಕ, ಆರ್ಥಿಕ ಬಲವರ್ಧನೆಗೆ ಅಗತ್ಯವಾದ ಅವಕಾಶಗಳನ್ನು ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತೆ ಗಾಯತ್ರಿ ಮಾತನಾಡಿ, ಜಾತಿ ವ್ಯವಸ್ಥೆ ಆರಂಭವಾಗುವುದೆ ಮಹಿಳೆಯನ್ನು ನಿರ್ಬಂಧಿಸುವುದರಿಂದ ಎಂದು ಡಾ.ಬಿ.ಆರ್.ಅಂಬೇಡ್ಕರ್ ನಂಬಿದ್ದರು. ಹೀಗಾಗಿ ಮಹಿಳಾ ಸಮುದಾಯದ ವಿಮೋಚನೆ ಆಗದ ಹೊರತು ದೇಶಕ್ಕೆ ಮುಕ್ತಿಯಿಲ್ಲವೆಂದು ಎಂದು ಅಭಿಪ್ರಾಯಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಆಯೋಜಿಸುತ್ತಿದ್ದ ಸಮಾವೇಶಗಳಲ್ಲಿ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಹಾಗೂ ಅವರ ಹೆಚ್ಚಿನ ಭಾಷಣಗಳು ಮಹಿಳಾ ಸಮುದಾಯವನ್ನೆ ಕೇಂದ್ರವನ್ನಾಗಿಟ್ಟು ಮಾತನಾಡುತ್ತಿದ್ದರು. ಒಬ್ಬ ಮಹಿಳೆ ಬದಲಾದರೆ ಆಕೆಯ ಕುಟುಂಬವೇ ಬದಲಾಗುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದರು ಎಂದು ಅವರು ಅಭಿಪ್ರಾಯಿಸಿದರು.

ಅಂಬೇಡ್ಕರ್ ಕೇವಲ ದಲಿತ ಸಮುದಾಯದ ಪರವಾಗಿ ಚಿಂತಿಸಿದವರಲ್ಲ. ಭಾರತದ ಎಲ್ಲ ಜಾತಿಯ ಜನ ಸಮುದಾಯದ ಹಿತದೃಷ್ಟಿಯಿಂದ ಮೌಲ್ಯಯುತವಾದ ಚಿಂತನೆಗಳನ್ನು ಧಾರೆಯೆರೆದಿದ್ದಾರೆ. ಕೌಟುಂಬಿಕ ಜೀವನದಲ್ಲಿ ಗಂಡು-ಹೆಣ್ಣು ಎಲ್ಲ ಕೆಲಸ ಕಾರ್ಯಗಳನ್ನು ಸಮಾನವಾಗಿ ನೋಡಿದರೆ ಮಾತ್ರ ಉತ್ತಮವಾಗಿ ಜೀವನ ನಡೆಸಲು ಸಾಧ್ಯವೆಂದು ತಿಳುವಳಿಕೆ ನೀಡಿದ್ದಾರೆ.

ಆದರೆ, ನಾವು ಅವರ ಬರವಣಿಗೆಯನ್ನು ಓದದೆ, ಅವರ ಕುರಿತು ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡಿದ್ದೇವೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಬರಹಗಳನ್ನು ಓದುವ ಮೂಲಕ ಕುಟುಂಬಕ್ಕೆ, ದೇಶಕ್ಕೆ ಉತ್ತಮ ಪ್ರಜೆಯಾಗಿ ಬದುಕಬೇಕೆಂದು ಅವರು ಆಶಿಸಿದರು. ಈ ವೇಳೆ ಹಿರಿಯ ಚಿಂತಕ ಜಿ.ರಾಮಕೃಷ್ಣ, ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಮಂಜುನಾಥ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News