ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಕಾರ್ಯಪಡೆಗಳಿಗೆ ಸೂಚನೆ: ಸಚಿವ ಕೃಷ್ಣಭೈರೇಗೌಡ

Update: 2019-04-24 12:39 GMT

ಬೆಂಗಳೂರು, ಎ. 24: ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಸೂಚಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿನ ತನ್ನ ಕಚೇರಿಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನೊಳಗೊಂಡ ಉನ್ನತಾಧಿಕಾರಿಗಳ ಸಭೆಯನ್ನು ನಡೆಸಿದ ಅವರು, ರಾಜ್ಯದ 176 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಇಲ್ಲಿ ತುರ್ತಾಗಿ ನೀರು ಪೂರೈಕೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕೆಂದು ನಿರ್ದೇಶನ ನೀಡಿದರು.

ಅವಶ್ಯವಿರುವ ಕಾಮಗಾರಿಗಳಿಗೆ ಟೆಂಡರ್ ಕರೆದು ಕಾರ್ಯಾದೇಶ ನೀಡಲು ಹಾಗೂ ಕಾಮಗಾರಿ ಅನುಷ್ಠಾನಗೊಳಿಸಲು ಚುನಾವಣಾ ಆಯೋಗ ಒಪ್ಪಿಗೆ ನೀಡಿರುವುದರಿಂದ ತುರ್ತಾಗಿ ಅಲ್ಪಾವಧಿ ಟೆಂಡರುಗಳನ್ನು ಕರೆದು ಕುಡಿಯುವ ನೀರಿನ ಕಾಮಗಾರಿಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಅವಶ್ಯಕತೆ ಇರುವ ಕಡೆ ಹೊಸ ಕೊಳವೆಬಾವಿ ಕೊರೆಯುವ ಅಗತ್ಯತೆ ಪರಿಗಣಿಸಿ ಪ್ರತಿ ತಾಲೂಕಿಗೆ ಒಂದು-ಎರಡು ಕೊಳವೆಬಾವಿ ಕೊರೆಯುವ ಏಜೆನ್ಸಿಗಳನ್ನು ಟೆಂಡರ್ ಮೂಲಕ ಗುರುತಿಸಲಾಗುತ್ತಿದೆ. ಅವಧಿಯನ್ನು 15 ತಿಂಗಳುಗಳ ಅವಧಿಗೆ ಸಿದ್ದಪಡಿಸುವಂತೆ ಕೊಳವೆಬಾವಿಗಳಿಂದ ಸಂಪರ್ಕ ಕಲ್ಪಿಸಲು ಜಿಲ್ಲಾಧಿಕಾರಿಗಳ ಬಳಿ ಇರುವ ಎನ್‌ಡಿಆರ್‌ಎಫ್/ಎಸ್‌ಡಿಆರ್‌ಎಫ್ ಅಥವಾ ಗ್ರಾ.ಪಂ.ಗಳ ಅನುದಾನ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಈ ಹಣದ ಕೊರತೆ ಬಂದಲ್ಲಿ ಟಾಸ್ಕ್‌ಫೋರ್ಸ್‌ಗಳಿಗೆ ಒದಗಿಸಲಾದ ಅನುದಾನ ಬಳಸಿಕೊಳ್ಳಲು ಸೂಚಿಸಿದೆ. ಅಲ್ಲದೆ, ಈ ಬಗ್ಗೆ ಅಗತ್ಯವಾದ ಸುತ್ತೋಲೆಯನ್ನು ಹೊರಡಿಸಿದೆ ಎಂದ ಅವರು, ಒಣಗಿದ ಕೊಳವೆ ಬಾವಿಗಳಿಂದ ಬಂದಂತಹ ಸಾಮಗ್ರಿಗಳನ್ನು ಶೇಖರಿಸಿ ಹೊಸ ಕೊಳವೆ ಬಾವಿಗಳಿಗೆ ಬೇಕಾಗುವ ಪಂಪ್‌ಸೆಟ್, ಜಿಐ ಪೈಪ್, ಕೇಬಲ್‌ಗಳನ್ನು ಕಡ್ಡಾಯವಾಗಿ ಉಪಯೋಗಿಸಲು ತಿಳಿಸಲಾಗಿದೆ.

ಹಳೆಯ ವಿದ್ಯುತ್ ಸಂಪರ್ಕವನ್ನು ಹೊಸ ಸಂಪರ್ಕಕ್ಕೆ ವರ್ಗಾಯಿಸಲು ಸೂಚಿಸಲಾಗಿದೆ. ಈ ಮೂಲಕ ಅನಗತ್ಯ ದುಂದುವೆಚ್ಚವನ್ನು ತಡೆಯಲು ಕ್ರಮ ವಹಿಸಲಾಗಿದೆ ಎಂದ ಅವರು, ಈ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದರು ಎಚ್ಚರಿಸಿದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News