ಬಿಲ್ಕೀಸ್ ಬಾನುಗೆ ಸೂಕ್ತ ಪರಿಹಾರ ನೀಡಲು ಸುಪ್ರೀಂ ಸೂಚನೆ: ಪಾಪ್ಯುಲರ್ ಫ್ರಂಟ್ ಸ್ವಾಗತ

Update: 2019-04-25 13:20 GMT

ಬೆಂಗಳೂರು: ಬಿಲ್ಕೀಸ್ ಬಾನು ಅವರಿಗೆ ರೂ.50 ಲಕ್ಷ ಪರಿಹಾರ ಮತ್ತು ಸರಕಾರಿ ಉದ್ಯೋಗ ನೀಡುವಂತೆ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟಿನ ಆದೇಶವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ವಾಗತಿಸಿದೆ.

ಈ ಆದೇಶವು 2002ರ ಮುಸ್ಲಿಂ ವಿರೋಧಿ ಗಲಭೆಯ ವೇಳೆ ಆಡಳಿತದಲ್ಲಿದ್ದ ಬಿಜೆಪಿಯ ಉನ್ನತ ಮಟ್ಟದ ದುಷ್ಟ ನಾಯಕತ್ವಕ್ಕೆ ನೀಡಿದ ಹೊಡೆತವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ನ ಚೆಯರ್‍ಮೆನ್ ಇ. ಅಬೂಬಕರ್ ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್ ಗಲಭೆ ಸಂದರ್ಭದಲ್ಲಿ, ಗರ್ಭಿಣಿಯಾಗಿದ್ದ  21 ವರ್ಷ ವಯಸ್ಸಿನ ಬಿಲ್ಕೀಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಮಾತ್ರವಲ್ಲದೆ, ಆಕೆಯ ಮೂರು ವರ್ಷದ ಮಗು ಸಹಿತ  ಕುಟುಂಬದ 14 ಮಂದಿಯನ್ನು ಗುಂಪು ಹತ್ಯೆ ಮಾಡಲಾಗಿತ್ತು, 2002ರ ಗಲಭೆಯ ನಂತರ ಆಕೆ ಅಲೆಮಾರಿ ಜೀವನ ನಡೆಸುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಆಕೆ ಇಚ್ಚಿಸುವ ಪ್ರದೇಶದಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಗುಜರಾತ್ ಸರ್ಕಾರಕ್ಕೆ ನಿರ್ದೇಶಿಸಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಮತ್ತು ಸಂತ್ರಸ್ತೆಗೆ ಕೇವಲ ರೂ.5 ಲಕ್ಷ ಪರಿಹಾರ ಘೋಷಿಸಿರುವ ಗುಜರಾತ್ ಸರಕಾರದ ಕ್ರಮವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. 

ಈ ತೀರ್ಪು ಅಧಿಕಾರ ದುರುಪಯೋಗ ಮತ್ತು ತಾರತಮ್ಯದ ವಿರುದ್ಧ ಸುಪ್ರೀಂ ಕೋರ್ಟಿನ ಸೂಚನೆಯಾಗಿದ್ದು, ಇದು ಗಲಭೆಯ ಸಮಯದಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯ ಉನ್ನತ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾರನ್ನು ತಲೆತಗ್ಗಿಸುವಂತೆ ಮಾಡಿದೆ. ಕನಿಷ್ಠ ಇನ್ನಾದರೂ ಅವರು ಆ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕಾಗಿದೆ. ಈಗ ಮತ್ತೆ ಅನಾವರಣಗೊಂಡ ಆರೆಸ್ಸೆಸ್ ಮತ್ತು ಬಿಜೆಪಿಗಳ ನೈಜ ಮುಖವು ಪ್ರಸಕ್ತ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಜನರನ್ನು ಜಾಗೃತಗೊಳಿಸಲಿದೆ ಎಂದು ಇ. ಅಬೂಬಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News