ಲಾಲ್‌ಬಾಗ್ ರಸ್ತೆಗಳಿಗೆ ಮರುಡಾಂಬರೀಕರಣ ಭಾಗ್ಯ

Update: 2019-04-28 16:32 GMT

ಬೆಂಗಳೂರು, ಎ.28: ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಮೂರು ದಶಕಗಳ ಹಳೆಯ ಡಾಂಬರು ರಸ್ತೆಗಳಿಗೆ ಮರು ಡಾಂಬರೀಕರಣ ಮಾಡುತ್ತಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ವಿ ಮಾದರಿಯ ಕಾಲುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಸಾಮಾನ್ಯವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಡಾಂಬರೀಕರಣ ಮಾಡುವಂತಿಲ್ಲ. ಈ ಬಗ್ಗೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಣ್ಣಿನ ರಸ್ತೆಗಳೇ ಸೂಕ್ತ. ಮಳೆ ಬಂದಾಗ ನೀರು ಭೂಮಿಯೊಳಗೆ ಇಂಗಬೇಕು. ಡಾಂಬರು ಹಾಕಿದರೆ ಅಷ್ಟೂ ಜಾಗದಲ್ಲಿ ನೀರು ಭೂಮಿಯಲ್ಲಿ ಇಂಗುವುದಿಲ್ಲ. ಪರಿಸರಕ್ಕೆ ಹಾನಿಯಾಗುತ್ತದೆ ಎಂಬುದು ಪರಿಸರವಾದಿಗಳ ವಾದವಾಗಿದೆ.

ಆದರೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಾವು ಯಾವುದೇ ಹೊಸ ರಸ್ತೆಗೆ ಡಾಂಬರು ಹಾಕಿಸುತ್ತಿಲ್ಲ. ಬದಲಿಗೆ ಕಳೆದ 30 ವರ್ಷಗಳ ಹಿಂದೆ ನಿರ್ಮಿಸಿರುವ ರಸ್ತೆಗಳಿಗೆ ಮಾತ್ರ ಡಾಂಬರು ಹಾಕಿಸಲಾಗಿತ್ತು. ಅದು ಕೆಲವು ವರ್ಷಗಳಿಂದ ಕಿತ್ತು ಹಾಳಾಗಿದ್ದರಿಂದ ಎಲ್ಲೆಡೆ ಧೂಳು ಏಳುತ್ತಿತ್ತು. ಜತೆಗೆ ಉದ್ಯಾನದ ಅಭಿವೃದ್ಧಿ ಕಾರ್ಯಗಳಿಗೆ ಬೇಕಾದ ಸಾಮಾನು ಸರಂಜಾಮು ಸಾಗಿಸಲು ಟ್ರ್ಯಾಕ್ಟರ್‌ನಂತಹ ವಾಹನಗಳನ್ನು ಬಳಸುತ್ತಿದ್ದೆವು. ಇವುಗಳ ಸಂಚಾರದಿಂದ ಧೂಳು ಹೆಚ್ಚಾಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮಳೆ ಬಂದಾಗ ರಸ್ತೆಗಳು ಕೆಸರು ಗದ್ದೆಗಳಂತಾಗುತ್ತಿದ್ದವು. ಸಾಕಷ್ಟು ಪ್ರಮಾಣದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗುತ್ತಿತ್ತು. ಇದೆಲ್ಲವನ್ನೂ ತಡೆಯುವ ನಿಟ್ಟಿನಲ್ಲಿ ಹಾಳಾಗಿದ್ದ ಹಳೆಯ ರಸ್ತೆಗಳಿಗೆ ಡಾಂಬರು ಹಾಕಿಸಲಾಗಿದೆ ಎಂದು ಹೇಳಿದ್ದಾರೆ.

ಇಲ್ಲಿನ ಲಾಲ್‌ಬಾಗ್‌ನಲ್ಲಿ ಮೊದಲ ಬಾರಿಗೆ ರಸ್ತೆ ನಿರ್ಮಾಣಗೊಂಡ ನಂತರ ಇದುವರೆಗೂ ಡಾಂಬರೀಕರಣ ನಡೆದಿರಲಿಲ್ಲ. ಹೀಗಾಗಿ, ಈಗ ಮಾಡಲಾಗುತ್ತಿದೆ. ಅಲ್ಲದೆ, ರಸ್ತೆಯ ಮೇಲೆ ಬಿದ್ದ ಮಳೆ ನೀರು ಸರಾಗವಾಗಿ ಹರಿದು ಅಲ್ಲಿನ ಗಿಡ, ಮರಗಳು ಹಾಗೂ ಹುಲ್ಲು ಹಾಸಿಗೆಗೆ ಹರಿದು ಹೋಗುವಂತೆ ವಿ ಮಾದರಿಯಲ್ಲಿ ಚಾನೆಲ್ (ಕಾಲುವೆ) ಅನ್ನು ಮಾಡಲಾಗಿದೆ. ಹೀಗಾಗಿ ಮಳೆ ಬಿದ್ದಾಗ ಆ ನೀರು ಚರಂಡಿಗೆ ಹರಿದು ಹೋಗದೆ ಲಾಲ್‌ಬಾಗ್‌ನ ಗಿಡ-ಮರಗಳಿಗೆ ಹಾಗೂ ಅಲ್ಲಿನ ಹುಲ್ಲು ಹಾಸಿಗೆ ಹರಿದು ಹೋಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಲಾಲ್‌ಬಾಗ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೇ ನಂತರ ಸಂಚಾರ ನಿಷೇಧ

ಮೇ ತಿಂಗಳ ನಂತರ ಉದ್ಯಾನದಲ್ಲಿ ಅಧಿಕಾರಿಗಳ ವಾಹನಗಳು ಸೇರಿದಂತೆ ಯಾವುದೇ ವಾಹನಗಳನ್ನು ಒಳ ರಸ್ತೆಗಳಲ್ಲಿ ಸಂಚರಿಸಲು ಬಿಡುವುದಿಲ್ಲ. ಡಬ್ಬಲ್ ರೋಡ್ ಬಳಿ ನಿರ್ಮಿಸಿರುವ ಪಾರ್ಕಿಂಗ್ ಜಾಗದಲ್ಲಿ ಮತ್ತು ಮುಖ್ಯ ಪ್ರವೇಶ ದ್ವಾರದ ಹೊರಭಾಗದಲ್ಲಿ ವಾಹನಗಳನ್ನು ನಿಲ್ಲಿಸಿ ನಂತರ ಕಚೇರಿಗಳಿಗೆ ನಡೆದು ಹೋಗುವ ಇಲ್ಲವೇ, ಪರಿಸರ ಸ್ನೇಹಿ ತೆರೆದ ವಾಹನದಲ್ಲಿ ಕಚೇರಿಗೆ ತೆರಳುವ ವ್ಯವಸ್ಥೆ ಮಾಡಲಾಗುವುದು.

- ಡಾ.ಎಂ.ವಿ.ವೆಂಕಟೇಶ್, ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ

ಉದ್ಯಾನದಲ್ಲಿ 6 ರಿಂದ 7 ಕಿ.ಮೀ. ವ್ಯಾಪ್ತಿಯಷ್ಟು ಉದ್ದದ ಡಾಂಬರು ರಸ್ತೆಯಿದೆ. ಅದರಲ್ಲಿ 5 ಕಿ.ಮೀ.ವರೆಗಿನ ರಸ್ತೆ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದ್ದು, ಇದನ್ನು ಮಾತ್ರ ಮಾಡಿಸುತ್ತಿದ್ದೇವೆ. ಒಟ್ಟಾರೆ 1.98 ಲಕ್ಷ ರೂ. ವೆಚ್ಚದಲ್ಲಿ ಡಾಂಬರು ಕಾಮಗಾರಿ ಕೈಗೊಳ್ಳಲಾಗಿದೆ.

- ಎಂ.ಆರ್. ಚಂದ್ರಶೇಖರ್, ಉಪ ನಿರ್ದೇಶಕರು, ರಾಜ್ಯ ತೋಟಗಾರಿಕೆ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News