×
Ad

ಬಸವಣ್ಣ ಈಗಿನ ರಾಜಕಾರಣಿಗಳಿಗೆ ಆದರ್ಶ: ಬಸವ ಮರುಳಸಿದ್ದ ಸ್ವಾಮೀಜಿ

Update: 2019-05-04 20:44 IST

ಬೆಂಗಳೂರು, ಮೇ 4: ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ ಕಿರೀಟ ಧರಿಸಿರುವ ಬಸವಣ್ಣ ಒಬ್ಬ ರಾಜಕಾರಣಿಯಾಗಿ ಈಗಿನ ಎಲ್ಲ ರಾಜಕಾರಣಿಗಳಿಗೆ ಆದರ್ಶಪ್ರಾಯ ಎಂದು ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ದುಬೈ ಬಸವ ಸಮಿತಿ ಇಲ್ಲಿನ ಜೆಎಸ್‌ಎಸ್ ಇಂಟರ್ ನ್ಯಾಷನಲ್ ಪ್ರೈ.ಸ್ಕೂಲ್ ನಲ್ಲಿ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣ ಜಯಂತಿ ಕಾರ್ಯಕ್ರಮ ಸಾನಿದ್ಯ ವಹಿಸಿ ಮಾತನಾಡಿದ ಅವರು, ಅನೇಕರು ಕಿರೀಟ ಹಾಕಿರುವ ಬಸವಣ್ಣನ ಮೂರ್ತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇಷ್ಟ ಲಿಂಗ ಪೂಜೆ ಮಾಡುವ ಬಸವಣ್ಣ ಧಾರ್ಮಿಕವಾಗಿ ಸರಳತೆ ಆಚರಣೆಯನ್ನು ತೋರಿಸಿಕೊಟ್ಟರು. ವಚನ ರಚನೆ ಮಾಡುವ ಮೂಲಕ ಕಠಿಣ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳಿ ಎಲ್ಲರಿಗೂ ತಿಳಿಯುವಂತೆ ಮಾಡಿದರು. ಮೂರನೆಯದಾಗಿ ಕಿರೀಟ ಧರಿಸಿರುವ ಬಸವಣ್ಣನ ಬಗ್ಗೆ ಆಕ್ಷೇಪವಿದೆ. ಈಗಿನ ರಾಜಕಾರಣಿಗೆ ಕಿರೀಟಧಾರಿ ಬಸವಣ್ಣ ಸ್ಪೂರ್ತಿಯಾಗಬೇಕು. ಬಸವಣ್ಣ ಅಧಿಕಾರದಲ್ಲಿದ್ದಾಗ ಕೈಗೆ ಯಾವುದೇ ರೀತಿಯ ಮಸಿ ಬಳಿಸಿಕೊಳ್ಳದೆ ಅಧಿಕಾರದಿಂದ ಹೊರಗೆ ಬಂದರು. ಭ್ರಷ್ಟಾಚಾರ ರಹಿತ ಅಧಿಕಾರ ನಡೆಸಿದ ಬಸವಣ್ಣ ಇವತ್ತಿನ ರಾಜಕಾರಣಿಗಳಿಗೆ ಆದರ್ಶ ಎಂದರು.

ಬಿಜ್ಜಳ ಮಹಾರಾಜ ಬಸವಣ್ಣನ ಆಡಳಿತದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ಬಸವಣ್ಣ ತನ್ನ ತಲೆಯ ಮೇಲಿನ ಕಿರೀಟ ತೆಗೆದು ತನ್ನ ಅಧಿಕಾರ ತ್ಯಾಗ ಮಾಡಿದರು. ಈಗಿನ ರಾಜಕಾರಣಿಗಳ ಹಾಗೆ ಅಧಿಕಾರಕ್ಕಾಗಿ ಯಾವುದೇ ರೀತಿಯ ಕುದುರೆ ವ್ಯಾಪಾರ ಮಾಡಲಿಲ್ಲ. ಅದೇ ಕಾರಣಕ್ಕೆ ಶರಣನಾಗಿ ಕೈಯಲ್ಲಿ ಲಿಂಗ ಹಿಡಿದು ಪೂಜೆ ಮಾಡುತ್ತಿರುವ ಬಸವಣ್ಣ ಎಷ್ಟು ಮುಖ್ಯವೋ ರಾಜಕಾರಣಿಯಾಗಿ ಕಿರೀಟ ಹಾಕಿರುವ ಬಸವಣ್ಣನೂ ಈಗಿನ ಕಾಲಕ್ಕೆ ಅಷ್ಟೇ ಪ್ರಸ್ತುತ ಎಂದು ವಿಶ್ಲೇಷಿಸಿದರು.

ಬಸವಣ್ಣ ಕಾಯಕ ತತ್ವದ ಮೂಲಕ ಇಡೀ ವಿಶ್ವಕ್ಕೆ ಪ್ರೇರಣೆಯಾಗಿದ್ದಾರೆ. ಕಾಯಕ ತ್ವತ್ವ ಪಾಲಿಸಿದರೆ ಆತ್ಮವಿಶ್ವಾಸದಿಂದ ವಿಶ್ವದ ಯಾವುದೇ ದೇಶದಲ್ಲಿ ನೆಮ್ಮದಿಯಾಗಿ ಜೀವನ ಮಾಡಬಹುದು ಎಂದು ಹೇಳಿದರು. ಇದೇ ವೇಳೆ ಸದ್ಯದ ವಾತಾವರಣದಲ್ಲಿ ವಿಶ್ವದಲ್ಲಿ ನೀರಿನ ಸಮಸ್ಯೆ ದೊಡ್ಡದಾಗಿದ್ದು ಜೀವ ಸೃಷ್ಟಿಗೆ ಕಾರಣವಾಗಿರುವ ನೀರನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಆನಂದಪುರ ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಸಾಗರದಾಚೆ ದುಬೈನಂತ ನಗರದಲ್ಲಿ ಬಸವಣ್ಣನ ಸಮಾನತೆ ತತ್ವ ಹಾಗೂ ಕನ್ನಡವನ್ನ ಜೀವಂತವಾಗಿಟ್ಟ ವಚನ ಸಾಹಿತ್ಯವನ್ನು ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಭಾರತದಲ್ಲಿರುವ ಬಸವಾಭಿಮಾನಿಗಳಿಗೂ ಮಾದರಿ ಎಂದು ಹೇಳಿದರು.

ಜಡೆ ಸಂಸ್ಥಾನ ಮಠದ ಮಹಾಂತಸ್ವಾಮಿ ಯೋಗ ಪ್ರದರ್ಶನದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಸರಿಗಮಪ ಕಾರ್ಯಕ್ರಮ ವಿನ್ನರ್ ಚೆನ್ನಪ್ಪಹುದ್ದಾರ್ ಸಂಗೀತ, ಮಾತನಾಡಿಸುವ ಗೊಂಬೆ ಖ್ಯಾತಿಯ ಸುಮಾ ರಾಜಕುಮಾರ್ ಅವರ ಗೊಂಬೆ ಮಾತು ಜನರ ಮನಸೂರೆಗೊಂಡವು.

ಕಾರ್ಯಕ್ರಮದಲ್ಲಿ ದುಬೈ ಬಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ, ಸಂಗಮೇಶ್ ಬಿಸರಳ್ಳಿ, ಮಲ್ಲಿಕಾರ್ಜುನ ಮುಳ್ಳೂರು, ಸತೀಶ್ ಹಿಂಡೇರ್, ರುದ್ರಯ್ಯ ನವಲಿ ಹಿರೇಮಠ, ಮಮತಾ ರಡ್ಡೇರ್, ಜಗದೀಶ್ ಲಾಲಿ, ಮುರುಗೇಶ್ ಗಾಜರೆ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News