ಹೂ ಮಾರುವ ಮಹಿಳೆಯ ಭೀಕರ ಕೊಲೆ

Update: 2019-05-09 14:46 GMT

ಬೆಂಗಳೂರು, ಮೇ 9: ಹೂ ಮಾರಾಟ ಮಾಡುತ್ತಿದ್ದ ಮಹಿಳೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡ ಕಲ್ಲಸಂದ್ರದ 7 ನೆ ಕ್ರಾಸ್‌ನಲ್ಲಿರುವ ಮನೆಯೊಂದರ ಎರಡನೆ ಮಹಡಿಯಲ್ಲಿ ವಾಸವಾಗಿದ್ದ ಭಾಗ್ಯಮ್ಮ ಎಂಬುವವರು ಕೊಲೆಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಅವರು, ಕೆಎಸ್ ಲೇಔಟ್‌ನಲ್ಲಿ ಹೂ ವ್ಯಾಪಾರ ಮಾಡುತ್ತಿದ್ದರು. ಕಳೆದ ಮೂರು ದಿನಗಳಿಂದ ವ್ಯಾಪಾರಕ್ಕೆ ಬಂದಿರಲಿಲ್ಲ. ಈ ಸಂಬಂಧ ಅವರ ಅಣ್ಣನಿಗೆ ಹೂ ವ್ಯಾಪಾರ ಮಾಡುವವರು ಮಾಹಿತಿ ನೀಡಿದ್ದರು.

ವ್ಯಾಪಾರಿಗಳು ನೀಡಿದ ಮಾಹಿತಿ ಆಧರಿಸಿ ಭಾಗ್ಯಮ್ಮರ ಅಣ್ಣ ನಾರಾಯಣ ಅವರಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಇದರಿಂದ ಅನುಮಾನಗೊಂಡ ಅವರು, ಬುಧವಾರ ತಂಗಿಯ ಮನೆಗೆ ಹೋಗಿದ್ದಾರೆ. ಅಲ್ಲಿ ರಕ್ತಮಯವಾಗಿದ್ದ ದೇಹವನ್ನು ಕಂಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಶವ ಭಾಗಶಃ ಕೊಳೆತಿದ್ದರಿಂದ ಎರಡು-ಮೂರು ದಿನಗಳ ಹಿಂದೆಯೇ ಕೊಲೆ ಮಾಡಲಾಗಿದೆ ಎಂಬ ವಿಷಯ ಮೇಲ್ನೋಟಕ್ಕೆ ಕಂಡುಬಂದಿದೆ.

ಈ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News