ನಿಮ್ಮ ಭಾವನೆಗೆ ಚ್ಯುತಿ ತರುವುದಿಲ್ಲ: ಡಿ.ವಿ.ಸದಾನಂದಗೌಡ ಭರವಸೆ

Update: 2019-05-24 14:38 GMT
ಫೈಲ್ ಚಿತ್ರ

ಬೆಂಗಳೂರು, ಮೇ 24: ನಿಮ್ಮ ವಿಶ್ವಾಸಕ್ಕೆ ದ್ರೋಹ ಮಾಡದೆ, ನಿಮ್ಮ ಮನಸ್ಸಿನ ಭಾವನೆಗೆ ಚ್ಯುತಿ ಬರುವಂತಹ ರೀತಿಯಲ್ಲಿ ನಾನೆಂದೂ ನಡೆದುಕೊಳ್ಳುವುದಿಲ್ಲ ಎಂದು ಬೆಂಗಳೂರು ಉತ್ತರ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆಯಾಗಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ನಿಮ್ಮ ಸೇವೆಯನ್ನ ಮಾಡಿದ್ದಕ್ಕೆ, ಮತ್ತಷ್ಟು ಕೆಲಸವನ್ನ ನನ್ನಿಂದ ನಿರೀಕ್ಷೆ ಮಾಡುವ ನಿಟ್ಟಿನಲ್ಲಿ ಜನಾದೇಶ ನೀಡಿದ್ದೀರಿ. ನನ್ನನ್ನು ಚುನಾಯಿಸಿದ ಉತ್ತರ ಕ್ಷೇತ್ರದ ಜನರಿಗೆ ಅಭಾರಿ ಎಂದು ಬಣ್ಣಿಸಿದರು.

ದೇಶ ಮೊದಲು ಎಂಬ ಘೋಷ ವಾಕ್ಯಕ್ಕೆ ಜನಾದೇಶ ಸಿಕ್ಕಿದೆ. ಮೋದಿಯವರು 5 ವರ್ಷ ಮಾಡಿದ ಆಡಳಿತ ವೈಖರಿ ಮೂಲಕ ದೇಶದ ಅಭಿವೃದ್ಧಿ, ಜನತೆಯ ಸಮಸ್ಯೆಗಳ ಪರಿಹಾರ ಮತ್ತು ರಾಷ್ಟ್ರದ ಘನತೆ ಗೌರವ ಎತ್ತಿ ಹಿಡಿಯುವಂತಹ ಕೆಲಸವನ್ನ ಜನ ಇಂದು ಒಪ್ಪಿಕೊಂಡಿದ್ದಾರೆ ಎಂದು ಡಿವಿಎಸ್ ತಿಳಿಸಿದರು.

ಕ್ಷೇತ್ರದ ನೂರಾರು ಸಮಸ್ಯೆಗೆ ಸ್ಪಂದಿಸಿದ್ದೇನೆ. ಇನ್ನೂ ಸೇವೆ ಮಾಡಲು ಸಾಕಷ್ಟಿದೆ ಎಂದು ನಂಬಿದ್ದೇನೆ. ದೇಶದಲ್ಲಿಯೇ ಅತ್ಯಂತ ದೊಡ್ಡ ಕ್ಷೇತ್ರವಾದಂತಹ ಬೆಂಗಳೂರು ಉತ್ತರ ಕ್ಷೇತ್ರದ 29 ಲಕ್ಷ ಮತದಾರರ ಆಶೀರ್ವಾದ ಪಡೆದುಕೊಂಡು ಮುಂದೆ ಹೋಗುತ್ತಿದ್ದೇನೆ ಎಂದು ಹೇಳಿದರು.

ಈ ಕ್ಷೇತ್ರವೇ ನನಗೆ ಸವಾಲಾಗಿತ್ತು. ಏಳು ಮಂದಿ ಶಾಸಕರು ನನ್ನ ವಿರೋಧಿ ಬಣದಲ್ಲಿದ್ದರು, ಒಬ್ಬ ಶಾಸಕರು ಮಾತ್ರ ನನ್ನ ಜೊತೆಗಿದ್ದರು. ಇಡೀ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಗೆಲುವು ಕಷ್ಟ ಎಂಬ ವಾತಾವರಣದ ನಡುವೆ ಕಾರ್ಯಕರ್ತರು ಶ್ರಮವಹಿಸಿ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಸದಾನಂದಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News