ಕಾರಿಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ: ಯುವಕ ಮೃತ್ಯು

Update: 2019-05-25 15:38 GMT

ಬೆಂಗಳೂರು, ಮೇ 25: ಕೆಎಸ್ಸಾರ್ಟಿಸಿ ಬಸ್ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ಇಲ್ಲಿನ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗಮಂಗಲ ಮೂಲದ ರವಿಕಿರಣ್(19) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ.

ಲಗ್ಗೆರೆಯಲ್ಲಿ ರವಿಕಿರಣ್ ವಾಸವಾಗಿದ್ದ. ಪಕ್ಕದ ಮನೆಯ ನಿವಾಸಿ ಗಂಗಾಧರ-ವರಲಕ್ಷ್ಮೀ ದಂಪತಿ ಪುತ್ರ ಸುಮಂತ್ ಶನಿವಾರ ಬೆಳಗಿನ ಜಾವ ತೀವ್ರ ಜ್ವರದಿಂದ ಬಳಲುತ್ತಿದ್ದನು. ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ದಂಪತಿ ರವಿಕಿರಣ್ ನೆರವು ಕೋರಿದ್ದಾರೆ. ರವಿಕಿರಣ್ ತನ್ನ ಸ್ನೇಹಿತ ಪುನೀತ್ ಕಾರಿನಲ್ಲಿ ಮಗುವನ್ನು ಲಗ್ಗೆರೆಯಿಂದ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು.

ಈ ವೇಳೆ, ಪುನೀತ್ ಕಾರು ಚಾಲನೆ ಮಾಡುತ್ತಿದ್ದರೆ, ದಂಪತಿ, ಮಗು ಮತ್ತು ಗೆಳೆಯ ರವಿಕಿರಣ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ನವರಂಗ್ ಚಿತ್ರಮಂದಿರ ಬಳಿ ಬಂದಾಗ ಅತಿ ವೇಗವಾಗಿ ಬಂದ ಕೆಎಸ್ಸಾರ್ಟಿಸಿ ಬಸ್ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ರವಿಕಿರಣ್ ಗಂಭೀರ ಗಾಯಗೊಂಡಿದ್ದರು.

ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇನ್ನುಳಿದವರೂ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬಸ್ ಚಾಲಕನನ್ನು ಬಂಧಿಸಿ ಮಲ್ಲೇಶ್ವರಂ ಸಂಚಾರಿ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News