ದರೋಡೆಗೆ ಯತ್ನ ಆರೋಪ: ನಾಲ್ವರ ಬಂಧನ
Update: 2019-05-26 14:30 GMT
ಬೆಂಗಳೂರು, ಮೇ 26: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರನ್ನು ಗುರಿಯಾಗಿಸಿಕೊಂಡು ಬೆದರಿಸಿ ದರೋಡೆಗೆ ಯತ್ನಿಸುತ್ತಿದ್ದ ಆರೋಪದಡಿ ನಾಲ್ವರನ್ನು ಬೆಂಗಳೂರು ಹೊರವಲಯದ ನಂದಗುಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ (24), ಆಫ್ರಿದ್(22), ಬಾಬು (21) ಹಾಗೂ ಸಂತೋಷ್(21) ಎಂಬುವರು ಬಂಧಿತ ಆರೋಪಿಗಳೆಂದು ತಿಳಿದುಬಂದಿದೆ.
ಆರೋಪಿಗಳು ಮೂಲತಃ ನಲ್ಲೂರಹಳ್ಳಿ ಹಾಗೂ ವರ್ತೂರು ಭಾಗದವರು ಎಂದು ತಿಳಿದು ಬಂದಿದೆ. ಬೆಳಗಿನ ಜಾವ ಸುಮಾರು 3:30ರ ಸುಮಾರಿಗೆ ಆಟೊದಲ್ಲಿ ಬಂದು ಇಲ್ಲಿನ ತಾವರೆಕೆರೆಯ ರಸ್ತೆ ಸೇತುವೆ ಬಳಿ ಸಂಚರಿಸುತ್ತಿದ್ದ ವಾಹನಗಳನ್ನು ಗಮನಿಸುತ್ತ ದರೋಡೆಗೆ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ.
ಆರೋಪಿಗಳ ಪೈಕಿ ಓರ್ವ ಕೈಯಲ್ಲಿ ಹಾಕಿ ಮಾರಕಾಸ್ತ್ರಗಳನ್ನು ಹಿಡಿದು ವಾಹನಗಳನ್ನು ಅಡ್ಡಗಟ್ಟಲು ಪ್ರಯತ್ನಿಸುತ್ತಿದ್ದ. ಇದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.