ಅಘೋಷಿತ ಸರ್ವಾಧಿಕಾರದ ವಿರುದ್ಧ ಜನಾಂದೋಲನ ರೂಪಗೊಳ್ಳಬೇಕು: ಚಿಂತಕ ಡಾ.ಜಿ.ರಾಮಕೃಷ್ಣ

Update: 2019-05-26 15:05 GMT

ಬೆಂಗಳೂರು, ಮೇ 26: ದೇಶದಲ್ಲಿ ಮತ್ತೊಂದು ಬಾರಿ ಸರ್ವಾಧಿಕಾರಿ ಸರಕಾರ ಅಧಿಕಾರಕ್ಕೆ ಬಂದಿದೆ. ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರ ಸರ್ವಾಧಿಕಾರದ ವಿರುದ್ಧ ಚಳವಳಿ ನಡೆಸಿದ್ದೇವೆ. ಇದೀಗ ಅಘೋಷಿತ ಸರ್ವಾಧಿಕಾರದ ವಿರುದ್ಧ ಜನಾಂದೋಲನ ರೂಪಗೊಳ್ಳಬೇಕಿದೆ ಎಂದು ಶಿಕ್ಷಣ ತಜ್ಞ, ಚಿಂತಕ ಡಾ.ಜಿ.ರಾಮಕೃಷ್ಣ ಕರೆ ನೀಡಿದ್ದಾರೆ.

ರವಿವಾರ ನಗರದ ಜ್ಯೋತಿಬಸು ಭವನದಲ್ಲಿ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ ಹಾಗೂ ಮಾ-ಲೆ ಅಧ್ಯಯನ ಕೂಟದ ವತಿಯಿಂದ ಆಯೋಜಿಸಿದ್ದ ಲೋಕಸಭಾ ಚುನಾವಣಾ ಫಲಿತಾಂಶ-ಜನತಂತ್ರದ ಮುಂದಿರುವ ಸವಾಲುಗಳು ಕುರಿತ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಐದು ವರ್ಷಗಳ ಅವಧಿಯಲ್ಲಿ ನ್ಯಾಯಾಲಯಗಳಿಂದ ಆರಂಭವಾಗಿ ಎಲ್ಲ ಸಾರ್ವಜನಿಕ ಸಂಸ್ಥೆಗಳ ಮೇಲೆ ಗೂಬೆ ಕೂರಿಸಲಾಗಿದೆ. ಮುಂದಿನ ಅಧಿಕಾರದ ಅವಧಿಯಲ್ಲಿ ಎಲ್ಲ ಸಂಸ್ಥೆಗಳನ್ನು ಸಂಪೂರ್ಣವಾಗಿ ನಾಶ ಮಾಡಲಾಗುತ್ತದೆ. ಅಲ್ಲದೆ, ಶೈಕ್ಷಣಿಕ ವ್ಯವಸ್ಥೆಯನ್ನು ನಿರ್ನಾಮ ಮಾಡಲು ವ್ಯವಸ್ಥಿತ ಸಂಚು ರೂಪಿಸಲಾಗಿದ್ದು, ಎಲ್ಲವನ್ನೂ ಖಾಸಗೀಕರಣ ಮಾಡುವ ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಚುನಾವಣೆಗೂ ಮೊದಲೇ ದೇಶದಲ್ಲಿ ಕಾರ್ಮಿಕರ ಹಲವು ಹೋರಾಟ, ಮುಷ್ಕರಗಳು ನಡೆದವು. ರೈತರ ಬೃಹತ್ ಮಟ್ಟದ ಆಂದೋಲನಗಳು ನಡೆದಿವೆ. ಆದರೆ, ಅದರ ಪರಿಣಾಮ ಸರ್ವಾಧಿಕಾರಿ ಸರಕಾರವನ್ನು ತರದಂತೆ ಮಾಡಲು ಸಫಲವಾಗಿಲ್ಲ. ಜನ ಚಳವಳಿಯನ್ನು ಸಮರ್ಥವಾಗಿ ರಾಜಕೀಯಕ್ಕೆ ಬಳಸಿಕೊಳ್ಳಲು ಸಾಧ್ಯವಾಗಿಲ್ಲ ಎಂದ ಅವರು, ಮತ್ತೊಮ್ಮೆ ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಎಲ್ಲರೂ ಒಟ್ಟಾಗಿ ಎದುರಿಸಬೇಕು ಎಂದು ಕರೆ ನೀಡಿದರು.

ರಾಜ್ಯಸಭಾ ಸದಸ್ಯ ಹಾಗೂ ಸಾಹಿತಿ ಡಾ.ಎಲ್. ಹನುಮಂತಯ್ಯ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದಷ್ಟು ವರ್ಷಗಳು ಎಲ್ಲರನ್ನೂ ಒಳಗೊಳ್ಳುವ ಮೂಲಕ ಜಾತ್ಯಾತೀತತೆಯನ್ನು ಪ್ರದರ್ಶಿಸಿದೆ. ಆದರೆ, ಇಂದು ದೇಶದಲ್ಲಿ ನಕಲಿ ಹಿಂದುತ್ವ ಪ್ರಚಾರ ಮಾಡುತ್ತಿರುವವರಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ ಎಂದರು. ಈ ಹಿಂದೆ ದೇಶವನ್ನು ರಕ್ಷಿಸಲು ಕಾಂಗ್ರೆಸ್ ಹಾಗೂ ಅದರ ಮೈತ್ರಿಗೆ ಸಾಧ್ಯವಿದೆ ಎಂದು ನಂಬಿದ್ದರು. ಆದರೆ, ಪ್ರಧಾನಿ ಮೋದಿ ದೇಶ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ಸುಳ್ಳನ್ನು ಜನರ ಮನಸ್ಸಿನಲ್ಲಿ ಬಿತ್ತಿದ್ದಾರೆ. ಅದರ ಪರಿಣಾಮವಿಂದು ಜನರು ಬಿಜೆಪಿಗೆ ಹೆಚ್ಚು ಆದ್ಯತೆ ನೀಡಿದ್ದು, ಕಾಂಗ್ರೆಸ್ ದೇಶದಲ್ಲಿ ಪ್ರಾದೇಶಿಕ ಪಕ್ಷದಂತೆ ಆಗಿಬಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಕಮ್ಯುನಿಸ್ಟ್‌ರ ಶಕ್ತಿ ಸಂಪೂರ್ಣವಾಗಿ ಕುಂದುಹೋಗಿದೆ. ಎಲ್ಲೆಡೆ ಎಡಚಿಂತನೆಯುಳ್ಳವರನ್ನು ದೇಶದ್ರೋಹಿಗಳನ್ನಾಗಿ ಮಾಡುತ್ತಿದ್ದಾರೆ. ಅಲ್ಲದೆ, ಇಂದಿನ ಯುವ ಮತದಾರರು ಸ್ವತಂತ್ರವಾಗಿ ನಿರ್ಧಾರ ಮಾಡುತ್ತಿದ್ದು, ಅವರನ್ನು ತಲುಪಲು ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಸಾಧ್ಯವಾಗಿಲ್ಲ. ನಾವು ಎಲ್ಲರೂ ಮಾತನಾಡುವ ಶೈಲಿಯನ್ನು ಮೊದಲು ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲೋಕಸಭಾ ಚುನಾವಣೆಯು ಇಂದಿನ ಜನರ ನೈಜ ಸಮಸ್ಯೆಗಳನ್ನು ಆಧಾರದ ಮೇಲೆ ನಡೆಯಬೇಕಿತ್ತು. ಆದರೆ, ಬಿಜೆಪಿ ಎಲ್ಲಿಯೂ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಎಲ್ಲೆಡೆ ಮಹಿಳೆಯರಿಗೆ ಮೀಸಲಾತಿ, ಉದ್ಯೋಗ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮೋದಿ ಮಾತನಾಡಿದ 151 ರ್ಯಾಲಿಗಳಲ್ಲಿ ಎಲ್ಲವೂ ಯೋಧರು, ಬಾಲಕೋಟ್ ದಾಳಿ, ವೈಮಾನಿಕ ದಾಳಿ, ಪುಲ್ವಾಮ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಿಪಿಐನ ಪಿ.ವಿ.ಲೋಕೇಶ್, ಸಿಪಿಐ(ಎಂ)ನ ಎಸ್.ವೈ.ಗುರುಶಾಂತ್, ಸಿಪಿಐ(ಎಂಎಲ್-ಲಿಬರೇಶನ್)ನ ಎಸ್.ಬಾಲನ್, ಕರ್ನಾಟಕ ಜನಶಕ್ತಿಯ ಡಾ.ಎಚ್.ವಿ.ವಾಸು, ವೇದಿಕೆಯ ಡಾ.ಬಿ.ಆರ್. ಮಂಜುನಾಥ್ ಉಪಸ್ಥಿತರಿದ್ದರು.

ದೇಶದಲ್ಲಿ ಹೊಸ ಭಾರತ ಉದಯವಾಗಿದೆ. ಮೌಲ್ಯಗಳು ಬದಲಾಗಿದ್ದು, ರಾಜಕಾರಣದ ಮುಂಚೂಣಿಯಲ್ಲಿ ನಿಂತವರು ಬದಲಾಗಿದ್ದಾರೆ. ನೈತಿಕ ಮೌಲ್ಯಗಳು ಸಂಪೂರ್ಣವಾಗಿ ನಶಿಸಿ ಹೋಗಿದ್ದು, ಹೈಟೆಕ್ ಹೊಸ ಬ್ರಾಹ್ಮಣ್ಯತ್ವ ಮುನ್ನೆಲೆಗೆ ಬಂದಿದೆ. ಸಾಮಾಜಿಕ ನ್ಯಾಯವನ್ನು ನಾಶ ಮಾಡಲಾಗಿದೆ. ನಮ್ಮ ನಮ್ಮ ಮೇಲೆಯೇ ಅಪಾದನೆ ಮಾಡಿಕೊಳ್ಳುವ ಬದಲಿಗೆ, ಅಪಾಯಗಳನ್ನು ಜನರ ಮುಂದೆ ತೆರೆದಿಡಬೇಕು.

- ಡಾ.ಎಚ್.ವಿ.ವಾಸು, ಕರ್ನಾಟಕ ಜನಶಕ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News