×
Ad

ಅತಿಸಾರ ಭೇದಿ: ಸರಳ ಮಾರ್ಗೋಪಾಯದ ಮೂಲಕ ಮಕ್ಕಳ ರಕ್ಷಣೆ ಸಾಧ್ಯ- ಜಾವೇದ್ ಅಖ್ತರ್

Update: 2019-06-03 20:33 IST

ಬೆಂಗಳೂರು, ಜೂ.3: ಅತಿಸಾರ ಭೇದಿ ರೋಗವನ್ನು ಸುಲಭವಾಗಿ ತಡೆಗಟ್ಟಬಹುದಾಗಿದ್ದು, ಸಕಾಲದಲ್ಲಿ ಸರಳ ಮಾರ್ಗೋಪಾಯ ಅನುಸರಿಸುವುದರಿಂದ ಮಕ್ಕಳನ್ನು ಸಾವಿನಿಂದ ರಕ್ಷಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಹೇಳಿದರು.

ಸೋಮವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಂಗಣದಲ್ಲಿ ಇಂದಿನಿಂದ ಜೂ.17 ವರೆಗೆ ರಾಜ್ಯ ವ್ಯಾಪ್ತಿ ಆಚರಿಸಲಾಗುತ್ತಿರುವ ತೀವ್ರ ಅತಿಸಾರ ಭೇದಿ ನಿಯಂತ್ರಣಾ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದಿನದಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚು ಬಾರಿ ಹಾಗೂ ನೀರಾಗಿ ಮಲವಿಸರ್ಜನೆ ಮಾಡುವುದನ್ನು ಅತಿಸಾರ ಭೇದಿ ಎಂದು ಗುರುತಿಸಬಹುದಾಗಿದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಮತ್ತು ಮಳೆಗಾಲದಲ್ಲಿ ಅತಿಸಾರ ಭೇದಿ ರೋಗದಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಾಗಿ ಕಾಣಬಹುದು. ಬಡತನ ರೇಖೆಗಿಂತಲೂ ಕೆಳಗಿರುವ ಕುಟುಂಬಗಳಲ್ಲಿ ರೋಗದ ತೀವ್ರತೆ ಅಧಿಕವಾಗಿ ಕಂಡು ಬರುತ್ತದೆ ಎಂದರು. ವೈದ್ಯರ ಮಾರ್ಗದರ್ಶನದಲ್ಲಿ ಓಆರ್‌ಎಸ್ ಎಂದೇ ಕರೆಯಲ್ಪಡುವ ಓರಲ್ ರೀ-ಹೈಡ್ರೇಷನ್ ಸಲೂಷನ್ ಮತ್ತು ಜಿಂಕ್ ಮಾತ್ರೆಗಳನ್ನು ಸೇವಿಸುವುದರಿಂದ ಅತಿಸಾರ ಭೇದಿಯ ಪರಿಣಾಮ ದೇಹದಲ್ಲಿ ಉಂಟಾಗುವ ನಿರ್ಜಲೀಕರಣವನ್ನು ನಿಯಂತ್ರಿಸಬಹುದು. ಶುದ್ಧ ಕುಡಿಯುವ ನೀರು, ಕೈಗಳ ಶುಚಿತ್ವ, ಶೌಚಾಲಯ ಉಪಯೋಗ, ಪರಿಸರ ನೈರ್ಮಲ್ಯ, ಲಸಿಕೆಗಳನ್ನು ಹಾಕಿಸುವುದು, ಪೌಷ್ಠಿಕ ಆಹಾರ ಹಾಗೂ ಸರಿಯಾಗಿ ಎದೆ ಹಾಲು ಉಣಿಸುವುದರಿಂದ ಮಕ್ಕಳಲ್ಲಿ ಅತಿಸಾರ ಭೇದಿಯನ್ನು ತಡೆಗಟ್ಟಬಹುದೆಂದು ಅವರು ಹೇಳಿದರು.

ತೀವ್ರತರ ಅತಿಸಾರ ಭೇದಿಯಿಂದ ಶೂನ್ಯ ಮಕ್ಕಳ ಮರಣ ಎಂಬ ಧ್ಯೇಯ ವಾಕ್ಯ ಹೊತ್ತ ಈ ಪಾಕ್ಷಿಕದಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ವೈದ್ಯಕೀಯ ಮಹಾದ್ಯಾಲಯಗಳಲ್ಲಿ ಅತಿಸಾರ ಭೇದಿ ನಿಯಂತ್ರಣ ಚಿಕಿತ್ಸೆಯ ಸೌಲಭ್ಯವಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕ ಡಿ.ಎಸ್.ರಮೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಟಿ.ಎಸ್.ಪ್ರಭಾಕರ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಪರ ನಿರ್ದೇಶಕ ಡಾ.ಓಂ.ಪ್ರಕಾಶ್ ಪಾಟೀಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್ ಭೃಂಗೀಶ್, ಬೆಂ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಪ್ರಕಾಶ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News