ಬೆಂಗಳೂರು: ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತ್ಯು

Update: 2019-06-10 13:52 GMT

ಬೆಂಗಳೂರು, ಜೂ.10: ಎಲೆಕ್ಟ್ರಾನಿಕ್‌ ಸಿಟಿಯ ಬಿಂಗಿಪುರ ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸೂರ್ಯ ಸಿಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಬಿಂಗಿಪುರದ ನಿವಾಸಿಗಳಾದ ಶಾಹೀದ್ ಖಾನ್(17), ಝಾಕೀರ್ ಖಾನ್(14) ಹಾಗೂ ಮರಸೂರಿನ ರೋಷನ್(14) ಎಂಬುವರು ಮೃತ ವಿದ್ಯಾರ್ಥಿಗಳೆಂದು ಪೊಲೀಸರು ಗುರುತಿಸಿದ್ದಾರೆ.

ಎಲೆಕ್ಟ್ರಾನಿಕ್‌ಸಿಟಿಯ ಬಿಂಗಿಪುರ ಕೆರೆಯಲ್ಲಿ ಶಹೀದ್ ಖಾನ್ ಹಾಗೂ ಝಾಕೀರ್ ಖಾನ್ ರವಿವಾರ ಸಂಜೆ ಈಜಲು ಹೋಗಿದ್ದಾರೆ. ಕೆರೆಯ ಆಳಕ್ಕೆ ಹೋದ ಮೂವರು ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ವಿದ್ಯಾರ್ಥಿಗಳ ಮೃತ ದೇಹಕ್ಕೆ ಹುಡುಕಾಟ ನಡೆಸಿದ್ದರು. ಆದರೆ, ರಾತ್ರಿ ಕಳೆದರೂ ಮೃತ ದೇಹಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಸೋಮವಾರ ಬೆಳಗ್ಗೆ ನುರಿತ ಈಜುಗಾರರ ಸಹಾಯದಿಂದ ಶವಗಳನ್ನು ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಆನೇಕಲ್ ಪಟ್ಟಣಕ್ಕೆ ಸಮೀಪವಿರುವ ಮರಸೂರು ಗ್ರಾಮದಲ್ಲಿ ಕೆರೆಗೆ ಈಜಲು ತೆರಳಿದ್ದ ರೋಷನ್ ಸಾವನ್ನಪ್ಪಿದ್ದಾನೆ. ಕೆರೆಯಲ್ಲಿದ್ದ ಹೂಳಿನಲ್ಲಿ ಕಾಲು ಸಿಲುಕಿದ್ದರಿಂದ ಈಜಲು ಸಾಧ್ಯವಾಗದೇ ರೋಷನ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸೂರ್ಯಸಿಟಿ ಪೊಲೀಸರು, ರೋಷನ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News