ಸಾರ್ವಜನಿಕ ಸಂಸ್ಥೆಗಳ ಘನತೆ

Update: 2019-07-08 18:23 GMT

ರಾಜಕೀಯ ವಲಯದಲ್ಲಿ ‘ಅವಮಾನ’ ಎಂಬ ಪದದ ಬಳಕೆ ಕೆಲವೊಮ್ಮೆ ಕುತೂಹಲ ಹುಟ್ಟಿಸುವಂತಿರುತ್ತದೆ. ಅಂತಹ ಪದಗಳನ್ನು ಸಾರ್ವಜನಿಕ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಬಳಸಲಾಗುತ್ತದೆ. ಆದರೆ ಆ ಸಂಸ್ಥೆಯ ಅಧಿಕಾರ ಸ್ಥಾನದಲ್ಲಿರುವವರು ನೇಪಥ್ಯದಲ್ಲಿರುತ್ತಾರೆ. ಪ್ರಧಾನಿಗಳು ನೈತಿಕವಾಗಿ ನೋವು ಕೊಡುವ ‘ಅಪಮಾನ’ದ ಭಾವನೆಗೂ ಮತ್ತು ಅಮಾಯಕ ಜಾರ್ಖಂಡ್ ಸರಕಾರಕ್ಕೂ ಸಂಬಂಧ ಕಲ್ಪಿಸಿ ಮಾತನಾಡುವಾಗ ಈ ಬಗೆಯ ಭಾಷೆಯನ್ನು ಬಳಸಿದ್ದಾರೆ. ಇದು ಒಂದು ಆಸಕ್ತಿದಾಯಕವಾದ ಪರಿಶೀಲನೆಗೆ ಎಡೆಮಾಡಿಕೊಡುತ್ತದೆ. ಮೊದಲನೆಯದು ಸಾರ್ವಜನಿಕ ಸಂಸ್ಥೆಗಳನ್ನು ಅಪಮಾನಿಸಬಹುದೇ? ಎರಡನೆಯದು ಸಾರ್ವಜನಿಕ ಸಂಸ್ಥೆಗಳಿಗೆ ಅಪಮಾನ ಮಾಡಲಾಗಿದೆಯೆಂಬ ಆಪಾದನೆಗಳು ಯಾವ ನೆಲೆಯಲ್ಲಿ ನೈತಿಕವಾಗಿ ಮಾನ್ಯಗೊಳ್ಳುತ್ತವೆ?

ಹಾಗೆ ನೋಡಿದರೆ, ಸಾರ್ವಜನಿಕ ಸಂಸ್ಥೆಗಳಿಗೆ ಅಪಮಾನದ ಭಾವನೆಯು ಉಂಟಾಗುವಂತೆ ಮಾಡುವ ನೈತಿಕ ಸಂವೇದನಾಶೀಲತೆಯು ಅಂತರ್ಗತವಾಗಿದೆಯೆಂದು ಹೇಳಲಾಗುವುದಿಲ್ಲ. ಏಕೆಂದರೆ ಅವು ಕೇವಲ ಭೌತಿಕ ಸ್ಥಾವರಗಳಷ್ಟೆ. ಹಾಗೆಯೇ ಸಾಂಸ್ಥಿಕ ಪ್ರಕ್ರಿಯೆಗಳು ಕೂಡಾ ಮಾನವ ಸಹಜವಾದ ಅಪಮಾನಕ್ಕೊಳಗಾಗುತ್ತವೆಂದು ಹೇಳುವುದು ಹಾಸ್ಯಾಸ್ಪದವಾದರೂ ಆ ಪ್ರಕ್ರಿಯೆಗಳನ್ನೂ ಮನುಷ್ಯರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಖಂಡಿತಾ ಇರುತ್ತದೆ. ಅಷ್ಟು ಮಾತ್ರವಲ್ಲ, ಎಂತಹ ವ್ಯಕ್ತಿಗಳು ಆ ಪ್ರಕ್ರಿಯೆಗಳನ್ನು ನಿಭಾಯಿಸುತ್ತಿದ್ದಾರೆ ಎಂಬುದನ್ನು ಆಧರಿಸಿ ಆ ಪ್ರಕ್ರಿಯೆಗಳು ತುಂಬಾ ಅಪಮಾನಕಾರಿಯಾಗಿ ಇರಬಲ್ಲವು ಎಂಬುದನ್ನೇನು ನಿರಾಕರಿಸಲಾಗುವುದಿಲ್ಲ. ಹೀಗಾಗಿ ಸಾರ್ವಜನಿಕ ಸಂಸ್ಥೆಗಳು ಯಾವುದೇ ಒಬ್ಬ ವ್ಯಕ್ತಿಗೆ ಸೇರಿದವಲ್ಲವಾದ್ದರಿಂದ ಅವುಗಳ ಸಾರ್ವಜನಿಕ ಸ್ವರೂಪವು ಅವಕ್ಕೆ ಅಮೂರ್ತ ಸ್ವಭಾವವನ್ನು ಒದಗಿಸುತ್ತವೆ. ಸಾರ್ವಜನಿಕ ಸಂಸ್ಥೆಗಳ ಈ ಎರಡು ಆಯಾಮಗಳಿಂದಾಗಿ ಒಂದು ಸಂಸ್ಥೆಯ ಜೊತೆಗೆ ಅವಮಾನದ ಭಾವನೆಯನ್ನು ಬೆಸೆದು ಭಾವಿಸಲಾಗುವುದಿಲ್ಲ. ಹೀಗೆ ಒಂದು ಸಾರ್ವಜನಿಕ ಸಂಸ್ಥೆಯ ಜೊತೆಗೆ ಅವಮಾನದ ಭಾವವನ್ನು ಸೇರಿಸಲು ಅಸಾಧ್ಯವಾಗಿರುವಾಗ ‘‘ಸರಕಾರಕ್ಕೆ ಅವಮಾನವಾಯಿತು’’ ಎಂಬ ಪ್ರತಿಪಾದನೆಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ಒಂದು ಪ್ರಭುತ್ವದ ಪ್ರಜಾತಾಂತ್ರಿಕ ಸಾರ ಮತ್ತು ಗಣರಾಜ್ಯ ಸ್ವಭಾವಗಳೆಲ್ಲವನ್ನೂ ನಾಶಗೊಳಿಸಿ ಒಂದು ಸಾರ್ವಜನಿಕ ಸಂಸ್ಥೆಯು ಸಂಪೂರ್ಣವಾಗಿ ವ್ಯಕ್ತೀಕರಣಗೊಳ್ಳುವ ಪ್ರಕ್ರಿಯೆಗೆ ಒಳಗಾದ ಸಂದರ್ಭದಲ್ಲಿ ಮಾತ್ರ ಒಂದು ಸಂಸ್ಥೆಗೆ ‘ಅವಮಾನ’ವಾಯಿತೆಂದು ಭಾವಿಸಲು ಸಾಧ್ಯ. ಅಥವಾ ಒಂದು ಸಾಂಸ್ಥಿಕ ಅಧಿಕಾರವನ್ನು ಒಬ್ಬ ವ್ಯಕ್ತಿಯ ಜೊತೆಗೆ ಅಥವಾ ಒಂದು ಗುಂಪಿನ ಜೊತೆಗೆ ಸಂಪೂರ್ಣವಾಗಿ ಸಮೀಕರಿಸಿದಾಗ ಮಾತ್ರ ಅವಮಾನವಾಯಿತೆಂದು ಹೇಳಲು ಸಾಧ್ಯ. ಆಗ ಮಾತ್ರ ಒಬ್ಬ ವ್ಯಕ್ತಿಯ ನಕಾರಾತ್ಮಕ ಭಾವನೆಯಾದ ಅಪಮಾನ ಅಥವಾ ಸಕಾರಾತ್ಮಕ ಭಾವನೆಯಾದ ಗೌರವಗಳು ಸಂಸ್ಥೆಯ ಮೇಲೆ ಆರೋಪಿತವಾಗುತ್ತವೆ. ಈ ಅರ್ಥದಲ್ಲಿ ಅಪಮಾನದ ಭಾಷೆಗಳು ಸಂಸ್ಥೆಯೊಂದಕ್ಕೆ ಅನ್ವಯವಾಗುತ್ತವೆ. ಅಂತಹ ಸಂಸ್ಥೆಗಳು ನೈತಿಕ ಹೆಗ್ಗಳಿಕೆಗಳ ಪ್ರತಿಪಾದನೆಯನ್ನು ಮಾಡುವ ಈ ಸಾರ್ವಜನಿಕ ವ್ಯಕ್ತಿಗಳ ವಿಸ್ತರಣೆಯಾಗಿರುತ್ತವಷ್ಟೆ. ಆದರೆ ‘‘ಸಂಸ್ಥೆಗಳಿಗೆ ಅವಮಾನ ಮಾಡಲಾಗುತ್ತಿದೆ’’ ಎಂಬ ಪ್ರತಿಪಾದನೆಗಳು ಅಪೂರ್ಣವಾಗಿರುತ್ತದೆ ಮತ್ತು ಅಪರಿಪಕ್ವವಾಗಿರುತ್ತವೆ. ಒಂದು ಬಲವಾದ ಕಾರಣಗಳನ್ನು ಆಧರಿಸಿದಾಗ ಮಾತ್ರ ಅವು ಪೂರ್ಣವೂ ಮತ್ತು ಮಾನ್ಯವೂ ಆಗುತ್ತವೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಉತ್ತಮ ಆಡಳಿತದ ವಿಷಯದಲ್ಲಿ ಸಾಪೇಕ್ಷವಾಗಿ ಒಳ್ಳೆಯ ಹೆಸರಿರುವ ಸರಕಾರವೊಂದರ ಮೇಲೆ ಅವಮಾನವೆಂಬುದು ನ್ಯಾಯೋಚಿತವಲ್ಲದ ನೈತಿಕ ಆರೋಪವಾಗಿರುತ್ತದೆ.

ಈ ನ್ಯಾಯೋಚಿತವಲ್ಲದ ಆರೋಪವು ಆ ಸರಕಾರವು ಮಾಡುತ್ತಿರುವ ಒಳ್ಳೆಯ ಕೆಲಸದ ಬಗ್ಗೆ ಯಾವುದೇ ಗೌರವವನ್ನು ತೋರ್ಪಡಿಸುವುದಿಲ್ಲ. ಈ ಅರ್ಥದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ಪುರಾವೆಯನ್ನು ಹೊಂದಿರುವ ಸರಕಾರದ ಬಗ್ಗೆ ಅಗೌರವ ತೋರುವುದೇ ಅವಮಾನವಾಗಿಬಿಡುತ್ತದೆ. ಹೀಗಾಗಿ ಅವಮಾನಕ್ಕೊಳಗಾದೆ ಎಂಬ ಅಭಿಪ್ರಾಯವು ವ್ಯಕ್ತಿನಿಷ್ಟವಾದದ್ದಾಗಿರುತ್ತದೆ. ಅದನ್ನು ನ್ಯಾಯಾತ್ಮಕ ನಿಯಮಗಳ ಶಕ್ತಿಯಿಂದ ಹಾಗೂ ಬಲವಾದ ಕಾರಣಗಳ ಮೂಲಕ ಪುಷ್ಠೀಕರಿಸಬೇಕಾಗುತ್ತದೆ. ಅವಮಾನದ ಪ್ರತಿಪಾದನೆಗಳನ್ನು ಬಲವಾದ ಕಾರಣಗಳಿಂದ ಪುಷ್ಠೀಕರಿಸದಿದ್ದರೆ ಪೂರ್ವಗ್ರಹಗಳಿಂದ ಕೂಡಿದ ಪ್ರತಿಪಾದನೆಯಾಗುತ್ತದೆಯೇ ವಿನಃ ನ್ಯಾಯದ ನಿಯಮಗಳ ಆಧಾರದ ಪ್ರತಿಪಾದನೆಯಾಗುವುದಿಲ್ಲ. ಒಂದು ಸರಕಾರಕ್ಕೆ, ಸದರಿ ಪ್ರಕರಣದಲ್ಲಿ ಜಾರ್ಖಂಡ್ ಸರಕಾರಕ್ಕೆ, ಸರಿಯಾದ ಸಮಯಕ್ಕೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಅಗತ್ಯವಾದ ನೈತಿಕ ಸಮರ್ಥನೆಗಳು ದಕ್ಕುತ್ತವೆ. ಒಂದು ಸರಕಾರವು ತೆರಿಗೆ ವಂಚಕರಿಗೆ ದಂಡ ವಿಧಿಸುವ ಮೂಲಕ ಮತ್ತು ಗುಂಪು ಹತ್ಯೆ ಮಾಡುವವರಿಗೆ ಶಿಕ್ಷೆಗೆ ಗುರಿ ಮಾಡುವ ಮೂಲಕ ತನ್ನ ಅಸ್ಥಿತ್ವವನ್ನು ಸಾಬೀತು ಮಾಡಿಕೊಳ್ಳುತ್ತದೆ. ಅಂತಹ ಗುಂಪುದಾಳಿಯ ಸಂದರ್ಭದಲ್ಲಿ ಸೂಕ್ತ ಕ್ರಮವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಂಡು ಹಿಂಸಾಚಾರವನ್ನು ತಡೆಗಟ್ಟುವ ಮೂಲಕ ಮಾತ್ರ ಸರಕಾರದಂತಹ ಸಾರ್ವಜನಿಕ ಸಂಸ್ಥೆಯ ಪ್ರತಿಷ್ಟೆಯು ಹೆಚ್ಚುತ್ತದೆ. ಒಂದು ಉದಾರವಾದಿ ಪ್ರಜಾತಂತ್ರದ ಸಂದರ್ಭದಲ್ಲಿ ಒಂದು ಸರಕಾರವು ಜನರ ವಿಶ್ವಾಸ ಮತ್ತು ಗೌರವಗಳನ್ನು ಪಡೆದುಕೊಳ್ಳಲು ಇವು ಪೂರ್ವಾಗತ್ಯಗಳು.

ಒಂದು ಸರಕಾರಕ್ಕಿರುವ ದಂಡಿಸುವ ಮತ್ತು ಶಿಕ್ಷಿಸುವ ಅಧಿಕಾರಗಳು ಸಹ ಅದನ್ನು ಅಪಮಾನದಿಂದ ಮುಕ್ತವಾಗುವ ಸಂದರ್ಭವನ್ನು ಒದಗಿಸುತ್ತವೆ. ಆದರೆ ಜಾರ್ಖಂಡ್ ಸರಕಾರವನ್ನೂ ಒಳಗೊಂಡಂತೆ ಹಲವಾರು ರಾಜ್ಯ ಸರಕಾರಗಳಲ್ಲಿ ಅಂತಹ ವಾತಾವರಣವೇ ಇಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಗುಂಪು ಹಿಂಸಾಚಾರವನ್ನು ತಡೆಗಟ್ಟಲು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದೇ ಸುಖಾ ಸುಮ್ಮನೆ ಸರಕಾರಕ್ಕೆ ಅವಮಾನ ಮಾಡುತ್ತಿದ್ದಾರೆ ಎಂಬ ನೆಪವನ್ನೊಡ್ಡುವ ಮೂಲಕ ಆ ಸರಕಾರದ ನಡಾವಳಿಯ ವಸ್ತುನಿಷ್ಟ ಮೌಲ್ಯಮಾಪನವನ್ನು ತಡೆಗಟ್ಟಲಾಗುತ್ತದೆ. ಒಂದು ಸರಕಾರದ ಆಡಳಿತ ನಿರ್ವಹಣೆಯ ಸರಿಯಾದ ಮೌಲ್ಯಮಾಪನವಾಗಬೇಕೆಂದರೆ ಆಡಳಿತರೂಢರು ಹಿಂದಕ್ಕೆ ಸರಿಯಬೇಕು. ಹಿಂದಕ್ಕೆ ಸರಿಯುವುದೆಂಬುದು ಒಂದು ಆಡಳಿತ ರೂಢ ಸರಕಾರವು ಸ್ವಮೌಲ್ಯಮಾಪನ ಮಾಡಿಕೊಳ್ಳಲು ಮತ್ತು ಸ್ವವಿಮರ್ಶೆ ಮಾಡಿಕೊಳಲ್ಲು ನಿಯಮಿತವಾಗಿ ಅನುಸರಿಸಬೇಕಾದ ಪ್ರಕ್ರಿಯೆಯಾಗಿದೆ.

ಹಿಂದಕ್ಕೆ ಸರಿಯುವುದೆಂದರೆ ನಾಗರಿಕರ ರಕ್ಷಣೆ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ನಿರ್ವಹಿಸುವ ಸಂವಿಧಾನಾತ್ಮಕ ಜವಾಬ್ದಾರಿಯಿಂದ ಹಿಂದಕ್ಕೆ ಸರಿಯುವುದೆಂದರ್ಥವಲ್ಲ. ಅವು ಸರಕಾರಗಳು ತಮ್ಮ ಕಾರ್ಯ ನಿರ್ವಹಣೆಯನ್ನು ಉತ್ತಮಪಡಿಸಿಕೊಂಡು ಉತ್ತಮ ಆಡಳಿತವನ್ನು ಒದಗಿಸುವ ಅವಕಾಶವನ್ನು ಕಲ್ಪಿಸಿಕೊಡುತ್ತವೆ. ಸಹಜವಾಗಿಯೇ ಆಗ ವಿರೋಧ ಪಕ್ಷಗಳು ಆಡಳಿತ ರೂಢ ಸರಕಾರವನ್ನು ಟೀಕಿಸಲು ಬೇಕಾದ ಭೂಮಿಕೆಯನ್ನೇ ಇಲ್ಲವಾಗಿಸುತ್ತದೆ. ಆ ರೀತಿಯಲ್ಲಿ ಹಿಂದಕ್ಕೆ ಸರಿದು ತಮ್ಮ ಕಾರ್ಯನಿರ್ವಹಣೆಯ ಆತ್ಮಾವಲೋಕನ ಮಾಡಿಕೊಂಡರೆ ನ್ಯಾಯೋಚಿತವಾದ ಮತ್ತು ಸರಿಯಾದ ಟೀಕೆಗಳನ್ನು ಅವಮಾನವೆಂದು ಭಾವಿಸುವ ಅಗತ್ಯವೇ ಇಲ್ಲವಾಗುತ್ತದೆ.


ಕೃಪೆ: Economic and Political Week

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News