ಯಶಸ್ವಿ ಜೀವನಕ್ಕೆ ಸಾಧಕರ ಮಾರ್ಗದರ್ಶನ ಅಗತ್ಯ: ಚಕ್ರವರ್ತಿ ಸೂಲಿಬೆಲೆ

Update: 2019-07-21 17:21 GMT

ಬೆಂಗಳೂರು, ಜು.21: ಸಾಧಕ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೆ ಸಾಧನೆ ಮಾಡಿರುವವರ ಕುರಿತು ತಿಳಿದುಕೊಳ್ಳುವುದು ಅಗತ್ಯವೆಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ರವಿವಾರ ವಾಡಿಯಾ ಸಭಾಂಗಣದಲ್ಲಿ ವಸಂತ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಎಸ್.ರವೀಂದ್ರ ದೇಶ್‌ಮುಖ್‌ರವರ ‘ಖುಷಿ ಹಂಚೋಣ ಬನ್ನಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾರ ಬದುಕು ಸರಳವಲ್ಲ. ಸಾಧನೆಯ ದಾರಿಯಲ್ಲಿ ಮುನ್ನೆಡೆದಾಗ ಮಾತ್ರ ಬದುಕಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ನಮ್ಮ ಸುತ್ತಮುತ್ತಲಿನವರು ನಮ್ಮನ್ನು ತುಳಿಯಲು ಕಾಯ್ದು ಕುಳಿತಾಗ ಅದನ್ನು ಎದುರಿಸಿ ನಿಲ್ಲುವುದೇ ಬದುಕು. ಹೆಸರು ಕಾಣದಂತೆ ಸಾಧನೆ ಮಾಡುವುದು ಹಾಗೂ ಇನ್ನೊಬ್ಬರ ಬದುಕು ಹಾಳು ಮಾಡದಂತೆ ಇರುವುದೆ ನಿಜವಾದ ಸಾಧನೆ. ಟಿವಿ ನೋಡುವುದನ್ನು ಕಡಿಮೆ ಮಾಡಿ ಆ ಸಮಯವನ್ನು ಪುಸ್ತಕ ಓದುವುದಕ್ಕೆ ಮೀಸಲಿಟ್ಟರೆ ಏನಾದರು ಸಾಧಿಸಲು ಛಲ ನಮ್ಮೆಳಗೆ ಪುಟಿಯುತ್ತದೆ ಎಂದು ಅವರು ಹೇಳಿದರು.

ಅಂಕಣಕಾರ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಸಮರ್ಥವಾಗಿ ನಮ್ಮ ಬದುಕು ರೂಪಿಸಿಕೊಳ್ಳುವ, ಬದುಕು ಕಟ್ಟಿಕೊಳ್ಳಲು ನೆರವಾಗುವಂತಹ ಸಾಹಿತ್ಯ ಬೇಕು. ಅಂತಹ ಸಾಹಿತ್ಯವನ್ನು ಲೇಖಕ ರವೀಂದ್ರ ನೀಡಿದ್ದಾರೆ. ಅವರು ಕೃತಿ ಖುಷಿ ಹಂಚೋಣ ಬನ್ನಿ ಕೃತಿಯನ್ನು ನಾವೆಲ್ಲರೂ ಓದೋಣವೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News