ಬಿಬಿಎಂಪಿ ಕಾಮಗಾರಿಗಳಿಗೆ ತಡೆ ಬೆಂಗಳೂರು ಅಭಿವೃದ್ಧಿಗೆ ಮಾರಕ: ಕಾಂಗ್ರೆಸ್

Update: 2019-08-05 13:00 GMT

ಬೆಂಗಳೂರು, ಆ. 5: ಮೈತ್ರಿ ಸರಕಾರದ ಅವಧಿಯಲ್ಲಿ ನಡೆದಿದ್ದ ಕಾಮಗಾರಿಗಳ ಬಗ್ಗೆ ಸಂಶಯವಿದ್ದರೆ ತನಿಖೆ ನಡೆಸುವುದನ್ನು ಬಿಟ್ಟು ಅನುಮೋದನೆ ನೀಡಿದ್ದ ಕಾಮಗಾರಿಗಳಿಗೆ ತಡೆ ಹಿಡಿದಿರುವುದು ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಸಲ್ಲ ಎಂದು ಕಾಂಗ್ರೆಸ್ ಆಕ್ಷೇಪಿಸಿದೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ರಾಮಲಿಂಗಾರೆಡ್ಡಿ, ಪರಿಷತ್ ಸದಸ್ಯ ರಿಜ್ವಾನ್ ಅರ್ಶದ್ ಜಂಟಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದಿನೇಶ್ ಗುಂಡೂರಾವ್ ಮಾತನಾಡಿ, ನವ ಬೆಂಗಳೂರು ಯೋಜನೆ ಅಡಿ 8 ಸಾವಿರ ಕೋಟಿ ರೂ.ಮೊತ್ತದ ಯೋಜನೆಯನ್ನು ಬಿಜೆಪಿ ಸರಕಾರ ತಡೆಹಿಡಿದಿದೆ. ಹಿಂದಿನ ಮೈತ್ರಿ ಸರಕಾರ ಘೋಷಿಸಿದ್ದ ಯೋಜನೆಗಳನ್ನು ತಡೆಹಿಡಿಯುವ ಜೊತೆಗೆ ಬಿಬಿಎಂಪಿ ಬಜೆಟ್ ಅನ್ನು ತಡೆಹಿಡಿದಿರುವುದು ಬೆಂಗಳೂರು ಅಭಿವೃದ್ಧಿಗೆ ಮಾರಕ ಎಂದು ಟೀಕಿಸಿದರು.

ನಗರೋತ್ಥಾನ ಯೋಜನೆಯನ್ನು ಹಿಂದೆ ಸಿದ್ದರಾಮಯ್ಯ ಅನುಷ್ಠಾನಕ್ಕೆ ತಂದಿದ್ದರು. ಕಸ ವಿಲೇವಾರಿ ಸಮಸ್ಯೆ, ಕುಡಿಯುವ ನೀರು, ರಸ್ತೆ, ಟೆಂಡರ್ ಶ್ಯೂರ್ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಮತ್ತೆ 11,500 ಕೋಟಿ ರೂ.ಗೆ ಅನುಮೋದನೆ ನೀಡಿ ಕಾಮಗಾರಿಗಳು ವೇಗವಾಗಿ ನಡೆದಿದ್ದವು. ಆದರೆ, ಯಡಿಯೂರಪ್ಪ ಬರುತ್ತಿದ್ದಂತೆ ತಡೆ ನೀಡಿದ್ದಾರೆ ಅವರು ವಾಗ್ದಾಳಿ ನಡೆಸಿದರು.

ಗುಣಮಟ್ಟ ಪರಿಶೀಲಿಸಿ: ಕಾಮಗಾರಿಗಳ ಬಗ್ಗೆ ಸಂಶಯವಿದ್ದರೆ ತನಿಖೆ ನಡೆಸಲಿ. ಅದು ಬಿಟ್ಟು ಕಾಮಗಾರಿಗಳಿಗೆ ತಡೆ ಹಿಡಿದಿರುವುದು ಸರಿಯಲ್ಲ. ಈಗಾಗಲೇ ಸಾಕಷ್ಟ ಹಣ ವೆಚ್ಚ ಮಾಡಲಾಗಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಹೇಳಿದರು.

8,500 ಕೋಟಿ ರೂ.ಮೊತ್ತದ ವಿವಿಧ ಕಾಮಗಾರಿಗಳು ಪ್ರಾರಂಭವಾಗಿವೆ. ರಸ್ತೆ, ಫ್ಲೈ ಓವರ್, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳು ಸೇರಿವೆ. 150 ಕೋಟಿ ರೂ.ಗಳಿಗಿಂತ ಹೆಚ್ಚು ಹಣ 28 ಕ್ಷೇತ್ರಗಳಿಗೆ ಹಂಚಿಕೆಯಾಗಿದೆ. ಹೀಗಾಗಿ ನವ ಬೆಂಗಳೂರು ಯೋಜನೆಗೆ ತಡೆ ಬೇಡ. ಗುಣಮಟ್ಟ ಪರಿಶೀಲನೆಗೆ ಅಭ್ಯಂತರವಿಲ್ಲ ಎಂದರು.

ಆಸ್ತಿಗಳ ಋಣಮುಕ್ತ ಮಾಡಿದ್ದೇವೆ: ಮಾಜಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬಿಜೆಪಿಯವರು ಈ ಹಿಂದೆ ಬಿಬಿಎಂಪಿ ಆಸ್ತಿಗಳನ್ನು ಅಡವಿಟ್ಟು ಹೋಗಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ನಾವು ಅವುಗಳನ್ನು ಬಿಡಿಸಿದ್ದೆವು ಎಂದು ತಿಳಿಸಿದರು.

ಹೊರವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಿದ್ದೇವೆ. ಮಳೆ ನೀರಿನಿಂದ ರಸ್ತೆ ಗುಂಡಿ ಬೀಳುತ್ತಿದ್ದವು. ಈಗ ವೈಟ್ ಟಾಪಿಂಗ್ ಮಾಡುತ್ತಿದ್ದೇವೆ. ಇದರಿಂದ 30 ವರ್ಷ ರಸ್ತೆ ಗುಣಮಟ್ಟದಿಂದ ಕೂಡಿರುತ್ತದೆ. ಹೊರಭಾಗದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಉತ್ತಮ ಕೆಲಸಗಳು ಈಗ ನಡೆಯುತ್ತಿವೆ. ಇದನ್ನ ನಿಲ್ಲಿಸಿದರೆ ಅಭಿವೃದ್ಧಿ ಕಾಮಗಾರಿ ನಿಲ್ಲುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News