ಇಂದಿರಾ ಕ್ಯಾಂಟೀನ್‌ಗೆ ಸರಕಾರದ ಅನುದಾನ ಇಲ್ಲ

Update: 2019-08-13 13:42 GMT

ಬೆಂಗಳೂರು, ಆ.13: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜ್ಯ ಸರಕಾರದ ಅನುದಾನ ಪಡೆದು ನಡೆಸಲಾಗುತ್ತಿದ್ದ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಹೊರೆಯನ್ನು ಇನ್ನು ಮುಂದೆ ಪಾಲಿಕೆಯೇ ಹೊರಬೇಕಾಗಿದೆ.

ಇಂದಿರಾ ಕ್ಯಾಂಟೀನ್ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಗೆ ರಾಜ್ಯ ಸರಕಾರವೇ ಅನುದಾನ ಒದಗಿಸುವ ಭರವಸೆ ನೀಡಿತ್ತು. ಅದರಂತೆ 2017-18ನೇ ಸಾಲಿನಲ್ಲಿ 100 ಕೋಟಿ ರೂ. ಬಿಡುಗಡೆ ಮಾಡಿ ಯೋಜನೆಗೆ ಚಾಲನೆಯನ್ನೂ ನೀಡಲಾಗಿತ್ತು.

ವರ್ಷ ಮುಗಿಯುವಷ್ಟರಲ್ಲಿ ಕ್ಯಾಂಟೀನ್ ನಿರ್ವಹಣಾ ವೆಚ್ಚ 124 ಕೋಟಿ ರೂ. ಆಗಿತ್ತು. 2018-19ನೇ ಸಾಲಿನಲ್ಲಿ 115 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಎರಡು ವರ್ಷಗಳಲ್ಲಿ 58 ಕೋಟಿ ರೂ. ಹೆಚ್ಚುವರಿ ಹಣವನ್ನು ಬಿಬಿಎಂಪಿ ಖರ್ಚು ಮಾಡಿದೆ. 2019- 20ನೇ ಸಾಲಿನ ಬಜೆಟ್‌ನಲ್ಲಿ ಸರಕಾರ ಹಣ ನಿಗದಿ ಮಾಡಲೇ ಇಲ್ಲ.

ಕ್ಯಾಂಟೀನ್ ನಿರ್ವಹಣೆಗೆ ಈ ವರ್ಷ ಕನಿಷ್ಠ 152 ಕೋಟಿ ರೂ. ಬೇಕಿದೆ ಎಂದು ಬಿಬಿಎಂಪಿ ಅಂದಾಜು ಮಾಡಿದೆ. ಬಾಕಿ 58 ಕೋಟಿ ರೂ. ಸೇರಿ 210 ಕೋಟಿ ರೂ. ಬಿಡುಗಡೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಎರಡು ಬಾರಿ ಮನವಿ ಮಾಡಿದೆ. ಆದರೆ, ಇಲಾಖೆ ಬಾಕಿ ಮೊತ್ತವನ್ನಾಗಲೀ, ಪ್ರಸಕ್ತ ಸಾಲಿನ ನಿರ್ವಹಣೆಗೆ ಬೇಕಿರುವ ಅನುದಾನವನ್ನಾಗಲೀ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News