ಮಹತ್ವಾಕಾಂಕ್ಷಿ ಜನಪ್ರಿಯ ನಾಯಕರು ಮತ್ತು ಉತ್ಪಾದಿತ ಸಮ್ಮತಿ

Update: 2019-08-22 18:35 GMT

ಫ್ಯಾಶಿಸಂನ ಎಲ್ಲಾ ಕ್ರೌರ್ಯವನ್ನು ಮೈಗೂಡಿಸಿಕೊಂಡ ಮತ್ತು ಅದನ್ನೇ ಮುಂದುವರಿಸುತ್ತಿರುವ ಈ ಮಹತ್ವ್ವಾಕಾಂಕ್ಷಿ ಜನಪ್ರಿಯ ನಾಯಕರು ಬಹಿರಂಗವಾಗಿ ಮಾತ್ರ ಅದೇ ಫ್ಯಾಶಿಸಂನ ಇತಿಹಾಸವನ್ನು ನಿರ್ಜೀವಗೊಳಿಸಿ ತಮ್ಮ ರಾಜಕೀಯ ನೆಲೆಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ. ನೆತನ್ಯಾಹು ಅವರ ಅಪ್ತ ಸ್ನೇಹಿತರಾದ ನರೇಂದ್ರ ಮೋದಿ ಸಹ ಇದೇ ತಂತ್ರವನ್ನು ಅನುಸರಿಸುತ್ತಿದ್ದಾರೆ. ನೆಹರೂ ಅವರ ವ್ಯಕ್ತಿತ್ವವನ್ನು ತೇಜೋವಧೆಗೊಳಿಸುವ ಸುಳ್ಳುಗಳನ್ನು ಬಿತ್ತುತ್ತಾ ಇತಿಹಾಸವನ್ನು ವಿರೂಪಗೊಳಿಸುತ್ತಿರುವ ಮೋದಿ ಆ ಮೂಲಕ ಪ್ರಸ್ತುತ ಸಂದರ್ಭದ ರಾಜಕೀಯ ಫಸಲನ್ನು ಕೊಯ್ಲು ಮಾಡಿಕೊಳ್ಳುತ್ತಿದ್ದಾರೆ.


ಪ್ರೊ. ಪ್ರದೀಪ್ ಚಿಬ್ಬರ್ ಮತ್ತು ಪ್ರೊ. ನಸೀಮುಲ್ಲ ಅವರು ಈ ನಿರಂಕುಶ ಪ್ರಭುತ್ವದ ಕುರಿತು ‘‘ಫಿಲಿಪ್ಪೀನ್ಸ್‌ನ ರೋಡ್ರಿಗೋ ಡುಟೆರ್ಟೆ, ಟರ್ಕಿಯ ಎರ್ದೊಗಾನ್, ಹಂಗರಿಯ ವಿಕ್ಟೋರ್ ಒರ್ಬನ್, ಯುಎಸ್‌ಎನ ಟ್ರಂಪ್, ಭಾರತದ ಮೋದಿಯಂತಹ ಬಲಪಂಥೀಯ ನಾಯಕರು ಜನಪ್ರಿಯತೆ ಮತ್ತು ವ್ಯಕ್ತಿತ್ವದ ಮೂಲಕ ಚುನಾವಣೆಯನ್ನು ಗೆಲ್ಲುತ್ತಿದ್ದಾರೆ. ಒಂದು ಕಾಲದಲ್ಲಿ ತಮ್ಮದು ಎಂತಹ ಅಸಾಧಾರಣ ದೇಶವಾಗಿತ್ತು ಎನ್ನುವ ಕಥನವನ್ನು ಮುಂದಿಡುವ Apprehensive populists ತಮ್ಮ ವಾಕ್ಚಾತುರ್ಯದ ಮೂಲಕ ಭೀತಿ ಮತ್ತು ಹಾನಿಗೆ ಒತ್ತು ಕೊಡುತ್ತಾರೆ. ಅಲ್ಪಸಂಖ್ಯಾತರು, ವಲಸೆಗಾರರು ಮತ್ತು ಇಲ್ಲಿಗಿಂತ ಭಿನ್ನವಾದ ಜನಾಂಗಗಳು ಇವರೆಲ್ಲರಿಂದ ತಮ್ಮ ದೇಶದ ಹಿಂದಿನ ಹೆಗ್ಗಳಿಕೆಗೆ ಭಂಗ ಬಂದಿದೆ ಎಂದು ಭೀತಿ ಹುಟ್ಟಿಸುತ್ತಾರೆ. ಟ್ರಂಪ್ ಮತ್ತು ಒರ್ಬನ್‌ರಂತಹವರು ತಮ್ಮ ದೇಶದ ಗಡಿಗಳನ್ನು ಮುಕ್ತಗೊಳಿಸಿದರೆ ದೇಶವು ಅಪಾರವಾದ ಹಾನಿಗೆ ಒಳಗಾಗಬೇಕಾಗುತ್ತದೆ, ಸಾಂಪ್ರದಾಯಿಕ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಅಥವಾ ಹಿಂದಿನ ಶ್ರೇಣೀಕರಣವನ್ನು ಮರಳಿ ಸ್ಥಾಪಿಸಲು ಸಾಧ್ಯವಾಗುವುದಿಲ್ಲ.

ಗಡಿಯಾರದ ಮುಳ್ಳನ್ನು ಹಿಂದಕ್ಕೆ ತಿರುಗಿಸುವುದರ ಮೂಲಕ ತಮ್ಮ ದೇಶವನ್ನು ಮತ್ತೆ ಅಪ್ರತಿಮಗೊಳಿಸುವ ಯೋಜನೆಗಳನ್ನ್ನು ಪ್ರಾರಂಭಿಸಬೇಕು ಎನ್ನುವ ಸಂದೇಶ ಕೊಡುತ್ತಾರೆ ಇವರಿಗೆ ಹೋಲಿಸಿದರೆ ‘ಮಹತ್ವಾಕಾಂಕ್ಷಿ ಜನಪ್ರಿಯ ನಾಯಕರು’ ದೇಶದ ಉಜ್ವಲ ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಹೇಳುತ್ತಾರೆ. ಇವರ ಪ್ರಕಾರ ದೇಶವು ಒಂದೇ, ಏಕರೂಪಿ ಸಮುದಾಯವನ್ನು ಒಳಗೊಂಡಿರಬೇಕು ಮತ್ತು ತಮ್ಮನ್ನು ಅನುಸರಿಸಿದರೆ ಮಾತ್ರ ದೇಶಕ್ಕೆ ಉತ್ತಮ ಭವಿಷ್ಯವಿದೆ ಎಂದು ಸಂದೇಶ ಕೊಡುತ್ತಾರೆ. ಈ ಮಾದರಿಯ ಮಹತ್ವಾಕಾಂಕ್ಷಿ ರಾಜಕಾರಣವು ಮೋದಿಯ ಆದ್ಯತೆ, ಯೋಜನೆಯಾಗಿದೆ. ಮೋದಿ ಏಕರೂಪಿ, ಒಂದೇ ಭಾರತದ ಏಳಿಗೆಗಾಗಿ ಎಲ್ಲಾ ಭಾರತೀಯರು ಒಂದಾಗಿ ಕೆಲಸ ಮಾಡಬೇಕು ಮತ್ತು ಇದು ತಮ್ಮ ಸರಕಾರದ ಏಕೈಕ ಗುರಿಯಾಗಿದೆ ಎಂದೆ ಪದೇ ಪದೇ ಹೇಳುತ್ತಿರುತ್ತಾರೆ’’ ಎಂದು ಬರೆಯುತ್ತಾರೆ

ಆದರೆ ಮಹತ್ವ್ವಾಕಾಂಕ್ಷಿ ಜನಪ್ರಿಯ ನಾಯಕರಾದ ನರೇಂದ್ರ ಮೋದಿಯವರ ಆಡಳಿತದಲ್ಲಿ ಮೇಲಿನ ಭೀತಿಗೆ ಒತ್ತು ಕೊಟ್ಟು ಅಧಿಕಾರ ಬಲಪಡಿಸಿಕೊಳ್ಳುವ Apprehensive populistsರ ಸರ್ವಾಧಿಕಾರಿ ಅಂಶಗಳಿವೆ. ಕಳೆದ ಆರು ವಷರ್ಗಳಲ್ಲಿ ಮೋದಿ ಸರಕಾರವು ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿಟ್ಟುಕೊಂಡು ಅವರಿಂದ ದೇಶದ ಭದ್ರತೆಗೆ ಧಕ್ಕೆ ಇದೆ ಎನ್ನುವ ಭೀತಿ ಸೃಷ್ಟಿಸಿ ತ್ರಿವಳಿ ವಿಚ್ಛೇದನ ಮಸೂದೆ, ಕಾನೂನುಬಾಹಿರ ಚಟುವಟಿಕೆ (ನಿಗ್ರಹ) ಮಸೂದೆಗಳನ್ನು (ಯುಎಪಿಎ) ತಮಗಿರುವ ದೈತ್ಯ ಸದೃಶ್ಯ ಬಹುಮತದ ಮೂಲಕ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡುಬಿಟ್ಟಿತು.

ರಾಷ್ಟ್ರೀಯ ನಾಗರಿಕರ ನೋಂದಣಿ ಮಸೂದೆಯ ಮೂಲಕ ಇಲ್ಲಿನ ಮುಸ್ಲಿಮರು ಯಾವತ್ತಿಗೂ ಹೊರಗಿನವರು ಅವರಿಗೆ ಇಲ್ಲಿ ಸ್ಥಳವಿಲ್ಲ ಎನ್ನುವ ಶಾಸನವನ್ನು ಜಾರಿಗೊಳಿಸಲು ಹೊರಟಿದ್ದಾರೆ. ಕಾಶ್ಮೀರದಲ್ಲಿ ಕಳೆದ ಎಪ್ಪತ್ತು ವರ್ಷಗಳಲ್ಲಿನ ಅನಿಶ್ಚಿತತೆ, ಭಯೋತ್ಪಾದನೆ, ಗಲಭೆಗಳಿಂದ ಸಂಪೂರ್ಣ ಹತಾಶರಾಗಿದ್ದ ಬಹುಸಂಖ್ಯಾತರ ಟೊಳ್ಳು ದೇಶಪ್ರೇಮವನ್ನು ಬಳಸಿಕೊಂಡು ಸ್ವಾಯತ್ತತೆ ಕೊಡುವ 370 ಕಲಮನ್ನು ರದ್ದುಗೊಳಿಸಿದರು ಮತ್ತು ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನೇ ಕಿತ್ತುಕೊಳ್ಳಲಾಯಿತು. ಇದನ್ನು ಸಹ ಭೀತಿ ಹುಟ್ಟಿಸಿ, ಆಂತಕ ಸೃಷ್ಟಿಸುವುದರ ಮೂಲಕ ಸಾಧಿಸಿಕೊಳ್ಳಲಾಯಿತು. ಬೆನ್ನೆಲುಬಿಲ್ಲದ, ಹೆಚ್ಚೂಕಡಿಮೆ ಕೋಮಾದಲ್ಲಿರುವ ವಿರೋಧಪಕ್ಷಗಳ ನಿಷ್ಕ್ರಿಯತೆ ಸಹ ಮೋದಿ-ಶಾ ಜೋಡಿಯ ಸುಗಮ ಹಾದಿಗೆ ಕಾರಣವಾಯಿತು. ಮೋದಿ-ಶಾ-ಆರೆಸ್ಸೆಸ್‌ನಂತಹ ಈ ಮಹತ್ವಾಕಾಂಕ್ಷೆಯ ಜನಪ್ರಿಯ ನಾಯಕರು ದೇಶದ ಭವಿಷ್ಯ ನಮ್ಮ ಕೈಯಲ್ಲಿದೆ ಎಂದು ಬಹುಸಂಖ್ಯಾತರಿಗೆ ನಂಬಿಕೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಂದರ್ಭದಲ್ಲಿ ಇಲ್ಲಿನ ಮುಸ್ಲಿಂ ಮತ್ತು ತಳ ಸಮುದಾಯಗಳಿಂದ ಈ ದೇಶದ ಭವಿಷ್ಯಕ್ಕೆ ಅಪಾಯವಿದೆ ಎಂದು ಅಪಪ್ರಚಾರದ ಮೂಲಕ ಈ ಸಮುದಾಯಗಳಿಗೆ ಬಲು ದೊಡ್ಡ ಬೆದರಿಕೆಯಾಗಿದ್ದಾರೆ.

ಆಡಳಿತ ನಡೆಸುವ ನಾಯಕರೇ ತಮಗೆ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನುವ ಸಂಗತಿ ಮುಸ್ಲಿಂ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ. ಪ್ರದೀಪ್ ಚಿಬ್ಬರ್ ಮತ್ತು ನಸೀಮುಲ್ಲ ಅವರು ‘‘ಇಲ್ಲಿ ಮೋದಿ ತನಗೆ ದೇಶದ ಅಭಿವೃದ್ಧಿ ಎಂಬುದೇ ಗುರಿ, ಇದಕ್ಕಾಗಿ ಎಲ್ಲರನ್ನು ಜೊತೆಗೆ ಕೊಂಡೊಯ್ಯುತ್ತೇನೆ ಎಂದು ಹೇಳುತ್ತಿರುತ್ತಾರೆ, ಆದರೆ ಈ ಅಭಿವೃದ್ಧಿಗೆ ಸಹಕಾರಿಯಾಗುವಂತಹ ಯಾವುದೇ ಯೋಜನೆ, ಚಿಂತನೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಮೋದಿಯಂತಹ ‘ಮಹತ್ವಾಕಾಂಕ್ಷಿ ನಾಯಕರು’ ಎಂದಿಗೂ ಬಹುತ್ವವನ್ನು ಮಾನ್ಯ ಮಾಡುವುದಿಲ್ಲ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳು ವೋಟು ಕಳೆದುಕೊಳ್ಳುವ ಭೀತಿಯಿಂದ ಮುಸ್ಲಿಮರನ್ನು ಬೆಂಬಲಿಸುವುದಿಲ್ಲ’’ ಎಂದು ಹೇಳುತ್ತಾರೆ

ಪ್ರೊ. ಫೆಡ್ರಿಕೋ ಫಿಂಚೆಲ್ಸಸ್ಟೇನ್ ಅವರು, ‘‘ದಶಕಗಳಿಂದ ಈ ಮಹತ್ವಾಕಾಂಕ್ಷಿ ಜನಪ್ರಿಯ ನಾಯಕರು ಉತ್ಕಟತೆಯಿಂದ ಇತಿಹಾಸದ ದಾಖಲೆಗಳನ್ನು ನಾಶ ಮಾಡುತ್ತಾರೆ, ಉದಾಹರಣೆಗೆ ನಾಝಿ ಇತಿಹಾಸವನ್ನು ನಾಶಗೊಳಿಸುವುದು ಈ ಮಹತ್ವಾಕಾಂಕ್ಷೆ ಬ್ರಾಂಡ್ ಆಗಿದೆ. ಇಸ್ರೇಲ್ ಮತ್ತು ಇತರ ಭಾಗಗಳಲ್ಲಿನ ಸರ್ವಾಧಿಕಾರಿ, ್ಡಛ್ಞಿಟಟಚಿಜ್ಚಿ ರಾಷ್ಟ್ರಗಳೊಂದಿಗೆ ಗುರುತಿಸಿಕೊಂಡಿರುವ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ತನ್ನ ರಾಜಕೀಯ ಹಿತಾಸಕ್ತಿಗೆ ಪೂರಕವಾಗುವಂತೆ ಆ ಮಾರಣಹೋಮದ ಇತಿಹಾಸವನ್ನು ವಿರೂಪಗೊಳಿಸಿದ್ದಾರೆ. ಯುರೋಪ್‌ನ ಜ್ಯೂಗಳ ಹತ್ಯಾಕಾಂಡದಲ್ಲಿ ಆ ಕಾಲದಲ್ಲಿನ ಫೆಲೆಸ್ತೀನ್ ನಾಯಕ ಮುಫ್ತಿಯವರ ನಾಝಿ ಪರವಾದ ಒಲವು ಸಹ ಕಾರಣವಾಗಿದೆ ಎಂದು ಸುಳ್ಳುಗಳನ್ನು ತೇಲಿಬಿಡುತ್ತಿದ್ದಾರೆ. ನೆತನ್ಯಾಹು ಅನುಸಾರ ಹಿಟ್ಲರ್ ಈ ಮುಫ್ತಿಯವರನ್ನು ‘ನಾನು ಅವರನ್ನು (ಜ್ಯೂಗಳನ್ನು) ಏನು ಮಾಡಲಿ ಎಂದು ಕೇಳಿದ, ಮುಫ್ತಿ ಅವರನ್ನು ಸುಟ್ಟುಬಿಡಿ ಎಂದು ಉತ್ತರಿಸಿದ.’ ಆದರೆ ಈ ಮಾದರಿಯ ಸಂಭಾಷಣೆ ನಡೆದಿರುವುದಕ್ಕೆ ಇತಿಹಾಸದಲ್ಲಿ ಎಲ್ಲಿಯೂ ದಾಖಲೆಗಳಿಲ್ಲ’’ ಎಂದು ಹೇಳುತ್ತಾರೆ.

ಫ್ಯಾಶಿಸಂನ ಎಲ್ಲಾ ಕ್ರೌರ್ಯವನ್ನು ಮೈಗೂಡಿಸಿಕೊಂಡ ಮತ್ತು ಅದನ್ನೇ ಮುಂದುವರಿಸುತ್ತಿರುವ ಈ ಮಹತ್ವ್ವಾಕಾಂಕ್ಷಿ ಜನಪ್ರಿಯ ನಾಯಕರು ಬಹಿರಂಗವಾಗಿ ಮಾತ್ರ ಅದೇ ಫ್ಯಾಶಿಸಂನ ಇತಿಹಾಸವನ್ನು ನಿರ್ಜೀವಗೊಳಿಸಿ ತಮ್ಮ ರಾಜಕೀಯ ನೆಲೆಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ. ಈ ನೆತನ್ಯಾಹು ಅವರ ಅಪ್ತ ಸ್ನೇಹಿತರಾದ ನರೇಂದ್ರ ಮೋದಿ ಸಹ ಇದೇ ತಂತ್ರವನ್ನು ಅನುಸರಿಸುತ್ತಿದ್ದಾರೆ. ನೆಹರೂ ಅವರ ವ್ಯಕ್ತಿತ್ವವನ್ನು ತೇಜೋವಧೆಗೊಳಿಸುವ ಸುಳ್ಳುಗಳನ್ನು ಬಿತ್ತುತ್ತಾ ಇತಿಹಾಸವನ್ನು ವಿರೂಪಗೊಳಿಸುತ್ತಿರುವ ಮೋದಿ ಆ ಮೂಲಕ ಪ್ರಸ್ತುತ ಸಂದರ್ಭದ ರಾಜಕೀಯ ಫಸಲನ್ನು ಕೊಯ್ಲು ಮಾಡಿಕೊಳ್ಳುತ್ತಿದ್ದಾರೆ. ಸ್ವತಃ ನಿರಂಕುಶ ಪ್ರಭುತ್ವದ ಆಡಳಿತ ನಡೆಸುತ್ತಿರುವ ಮೋದಿ ಇತಿಹಾಸದಲ್ಲಿ ಇಂದಿರಾಗಾಂಧಿ ಸರ್ವಾಧಿಕಾರಿಯಾಗಿದ್ದರು ತಾನು ಮತ್ತೆ ಆ ಸರ್ವಾಧಿಕಾರದ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿ ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸುತ್ತಿದ್ದೇನೆ ಎಂದು ಜನರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯ ತಜ್ಞರು ಹೇಳಿದಂತೆ ಜನತೆಯಿಂದ, ಜನ ಸಾಮಾನ್ಯರ ಸರಕಾರ ಎನ್ನುವ ಪ್ರಜಾಪ್ರಭುತ್ವದ ಮೂಲ ಆಶಯವು ಬದಲುಗೊಂಡು ಜನತೆಗಾಗಿ ಸರಕಾರ ಎಂಬುದು ಪ್ರತಿಯೊಬ್ಬರು ಒಪ್ಪಿತ ಮಿಥ್ಯೆಯಾಗಿದೆ. ಈ ಪ್ರಕ್ರಿಯೆಯಲ್ಲಿ ನಾವೆಲ್ಲ ನಂಬಿಕೆಯಿಟ್ಟಿದ್ದ ನ್ಯಾಯಾಂಗವೂ ಸಹ ಈ ನಿರಂಕುಶ ಪ್ರಭುತ್ವದ ದಾಳಿಗೆ ಶರಣಾಗಿಬಿಟ್ಟಿದೆ. ಜನಪ್ರಿಯ ನಾಯಕನೊಬ್ಬ ಚುನಾವಣಾ ಕಣದಾಚೆಗೆಯೂ ತಾನು ಜನರ ನಿಜದ ಪ್ರತಿನಿಧಿ ಎಂದು ಘೋಷಿಸಿದಾಗ ಅತ ಧ್ವಂಸಗೊಳಿಸುವ ಶಕ್ತಿಕೇಂದ್ರವನ್ನು ಹುಟ್ಟು ಹಾಕುತ್ತಿದ್ದಾನೆ ಎಂದೇ ಅರ್ಥ. ಈ ಜನಪ್ರಿಯತೆಯು ಮೋದಿ ಮಾದರಿಯ ನಾಯಕರಿಗೆ ಕ್ಷಿಪ್ರ ಗತಿಯಲ್ಲಿ ಅಧಿಕಾರವನ್ನು ಕಬ್ಜ ಮಾಡಿಕೊಳ್ಳಲು ಕಾರಣವಾಗುತ್ತದೆ.

ಮೋದಿ ಈ ದೇಶದ ರಕ್ಷಕರು ಎಂದು ನಂಬಿರುವ ಬಹುಸಂಖ್ಯಾತ ಭಾರತೀಯರ ನಂಬಿಕೆಯನ್ನ್ನು ಯಾವ ರೀತಿ ಪರಿವರ್ತನೆಗೊಳಿಸಬೇಕು ಎಂಬುದು ಇಲ್ಲಿನ ಪ್ರಜ್ಞಾವಂತರಿಗೆ ಬಲು ದೊಡ್ಡ ಸವಾಲಾಗಿದೆ. ಮೋದಿ-ಆರೆಸ್ಸ್ಸೆಸ್ ಬಿತ್ತುತ್ತಿರುವ ಈ ಉತ್ಪಾದಿತ ಸಮ್ಮತಿ ಮತ್ತು ವ್ಯವಸ್ಥಿತ ಸುಳ್ಳುಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲು ಬೇಕಾದಂತಹ ಹತ್ಯಾರಗಳ್ಯಾವುವು? 2011ರಲ್ಲಿನ ಎರಡು ಜನಪ್ರಿಯ ಚಳವಳಿಗಳಿಂದ ಇಂದಿಗೂ ನಮಗೆ ಯಾವುದೇ ಬಗೆಯ ಸುಳುಹುಗಳು ದೊರಕಬಹುದೇ? ಅಸಮಾನ ಆರ್ಥಿಕ ಹಂಚಿಕೆಯ ವಿರುದ್ಧದ ನ್ಯೂಯಾರ್ಕ್ ನಗರದಲ್ಲಿ ವ್ಯಾಪಿಸಿಕೊಂಡ ‘ವಾಲ್ ಸ್ಟ್ರೀಟ್ ಆಕ್ರಮಣ’ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ಸಂಚಲನೆ ಮೂಡಿಸಿದ್ದು ಸತ್ಯ. ಶೇ. 1 ಪ್ರಮಾಣದ ಬಂಡವಾಳಶಾಹಿಗಳ ಬಳಿ ಸಂಪತ್ತು ಕ್ರೋಡೀಕರಣಗೊಂಡಿರುವುದನ್ನು ವಿರೋಧಿಸಿ ನಾವು ಶೇ. 99 ಎಂದು ಬ್ಯಾಂಕ್, ಕಾರ್ಪೊರೇಟ್ ಕಚೇರಿ, ಕಾಲೇಜು, ವಿಶ್ವವಿದ್ಯಾನಿಲಯಗಳನ್ನು ಆಕ್ರಮಿಕೊಂಡ ಚಳವಳಿ ಪ್ರಭುತ್ವಕ್ಕೆ ಬಿಸಿ ಮುಟ್ಟಿಸಿತು.

ಅದೇ ಸಂದರ್ಭದಲ್ಲಿ ಇಂಡಿಯಾದಲ್ಲಿ ‘ಭ್ರಷ್ಟಾಚಾರದ ವಿರುದ್ಧ ಭಾರತ’ (ಐಎಸಿ) ಎನ್ನುವ ಪ್ರತಿಭಟನೆ ದೇಶದ್ಯಾಂತ ಕಾವು ಪಡೆದುಕೊಂಡಿತು. ಅಣ್ಣಾ ಹಝಾರೆ ನೇತೃತ್ವದ ಈ ಪ್ರತಿಭಟನೆಯು ಆಗ ಅಧಿಕಾರದಲ್ಲಿದ್ದ ಯುಪಿಎ-2 ಸರಕಾರದ ಭ್ರಷ್ಟ್ಟಾಚಾರದ ಆರೋಪಗಳ ವಿರುದ್ಧ ಸಂಘಟಿತವಾಗಿ ಜನಾಂದೋಲನ ರೂಪಿಸಿತು ಮತ್ತು ಈ ಜನಾಂದೋಲನವನ್ನು ಬಳಸಿಕೊಂಡು ಮೋದಿ ನೇತೃತ್ವದ ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದಿದ್ದು ಈಗ ಇತಿಹಾಸ. ಇಲ್ಲಿನ ವಿಶೇಷವೆಂದರೆ 2011ರ ಮೇಲಿನ ಎರಡೂ ಪ್ರತಿಭಟನೆಗಳಲ್ಲಿ ಮಧ್ಯಮವರ್ಗ ಸಕ್ರಿಯವಾಗಿತ್ತು ಮತ್ತು ಅದರ ನೇತೃತ್ವ ವಹಿಸಿಕೊಂಡಿತ್ತು. ಆದರೆ ಇಂದು ಇದೇ ಮಧ್ಯಮವರ್ಗ ಬೌದ್ಧಿಕವಾಗಿ ಭ್ರಷ್ಟ್ಟಗೊಂಡಿದೆ. ಸ್ವಾರ್ಥದಲ್ಲಿ ಮುಳುಗಿರುವ ಈ ಮಧ್ಯಮವರ್ಗ ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಫ್ಯಾಶಿಸಂ ಶಕ್ತಿಗಳನ್ನು ಬೆಂಬಲಿಸುತ್ತಿದೆ.

ಮಧ್ಯಮವರ್ಗ ತಮ್ಮ ಸ್ವಾರ್ಥ ಮತ್ತು ಮತಾಂಧತೆಯ ಕಾರಣಕ್ಕಾಗಿ ಕಳೆದ ಎಪ್ಪತ್ತು ವರ್ಷಗಳಲ್ಲಿ ಜತನದಿಂದ, ಕಾಳಜಿಯಿಂದ ಅನೇಕ ಮಿತಿಗಳ ನಡುವೆ ಕಟ್ಟಿದ ಈ ಸಂಸದೀಯ ಪ್ರಜಾಪ್ರಭುತ್ವವನ್ನು ನಾಶಗೊಳಿಸಿ ನಿರಂಕುಶ ಪ್ರಭುತ್ವವನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದೆ. ಭಾರತವು ಪ್ರಜಾಪ್ರಭುತ್ವಕ್ಕೆ ಯಾವುದೇ ಭರವಸೆಗಳನ್ನು ನೀಡದ ದೇಶ ಎನ್ನುವಂತಹ ಸ್ಥಿತಿಗೆ ತಲುಪಲು ಇಲ್ಲಿನ ಮಧ್ಯಮವರ್ಗ ಮತ್ತು ವಿದ್ಯಾವಂತರ ಕಾಣಿಕೆ ಬಹಳಷ್ಟಿದೆ.

ಈ ಉತ್ಪಾದಿತ ಸಮ್ಮತಿಯು ದೇಶದೆಲ್ಲೆಡೆ ಮಾನಸಿಕ ವ್ಯಾದಿಯಂತೆ ವ್ಯಾಪಿಸಿಕೊಂಡಿರುವಂತಹ ಇಂದಿನ ದುರಿತ ಕಾಲದಲ್ಲಿ 2011ರ ಮಧ್ಯಮವರ್ಗಗಳ ಆ ಪ್ರತಿಭಟನೆ ಮೋದಿ-ಆರೆಸ್ಸೆಸ್‌ನ ನಿರಂಕುಶ ಮತೀಯ ಆಡಳಿತದ ವಿರುದ್ಧದ ಇಂದಿನ ಚಳವಳಿಗೆ ಯಾವುದೇ ಬಗೆಯಲ್ಲಿ ಸ್ಫೂರ್ತಿಯನ್ನು ತುಂಬಲು ಸಾದ್ಯವಿಲ್ಲ. ಏಕೆಂದರೆ ತಾನು ಸರ್ವಾಧಿಕಾರಿ ವ್ಯವಸ್ಥೆಗೆ ವೇದಿಕೆ ಕಲ್ಪಿಸುತ್ತಿದ್ದೇನೆ ಎಂಬುದನ್ನು ನಿರ್ಲಕ್ಷ್ಯ ಮಾಡಿದ ಐಎಸಿ ಪ್ರತಿಭಟನೆ ಮೈಯೆಲ್ಲ ಕಣ್ಣಾಗಿ ಜನಾಂದೋಲನ ರೂಪಿಸಬೇಕಾದ ಸಂದರ್ಭದಲ್ಲಿ ಮತೀಯವಾದಿಗಳನ್ನು ತನ್ನೊಳಗೆ ಬೆರೆತು ಹೋಗಲು ಅವಕಾಶ ಮಾಡಿಕೊಟ್ಟು ಇಂದು ಭಾರತದ ಪ್ರಜಾಪ್ರಭುತ್ವ ಘಾಸಿಗೊಂಡು ನರಳುವಿಕೆಗೆ ಕಾರಣವಾಗಿದೆ.

ಆದರೆ ಭಾರತೀಯರಿಗೆ ತಾವು ಹಿಂಬಾಲಿಸುತ್ತಿರುವ ನಾಯಕ ಅನಾಹುತಕಾರಿ ಭವಿಷ್ಯವನ್ನು ಸೃಷ್ಟಿಸುತ್ತಿದ್ದಾನೆ ಮತ್ತು ಈ ಭವಿಷ್ಯವು ತಮ್ಮ ಮುಂದಿನ ತಲೆಮಾರುಗಳಿಗೆ ಮಾರಕವಾಗಲಿದೆ ಎಂದು ಮನವರಿಕೆ ಮಾಡಿಕೊಡಬೇಕಾಗಿದೆ. ಆದರೆ ಹೇಗೆ ಎಂಬುದೇ ಇಂದಿನ ಯಕ್ಷ ಪ್ರಶ್ನೆ. ಮೊದಲು ಜನರ ಬಳಿಗೆ ತೆರಳಬೇಕು. ಈ ಜನಸಂಪರ್ಕ ತಳಮಟ್ಟದವರೆಗೆ ತಲುಪಬೇಕಾಗಿದೆ. ಅವರ ನಿರೀಕ್ಷೆಗಳು ಮತ್ತು ಹತಾಶೆಗಳ ಆಳ ಮತ್ತು ಪ್ರಮಾಣಗಳನ್ನು ಅರಿಯಬೇಕಾಗಿದೆ. ಬೌದ್ಧ್ದಿಕ ವಾಕ್ಚಾತುರ್ಯಕ್ಕಿಂತ ಪಿಸುಮಾತಿನ ಕನವರಿಕೆಗಳು ಈ ಜನಸಂಪರ್ಕಕ್ಕೆ ಅಗತ್ಯವಾಗಿದೆ. ಇದನ್ನು ಸಾಂಸ್ಕೃತಿಕ ನೆಲೆಯಲ್ಲಿ, ರಾಜಕೀಯ ನೆಲೆಯಲ್ಲಿ ಮತ್ತು ಆರ್ಥಿಕ ನೆಲೆಯಲ್ಲಿ ಅರಿತುಕೊಳ್ಳಬೇಕು. ಪ್ರಜ್ಞಾವಂತರು ವಿದ್ಯಾರ್ಥಿಗಳಾಗಿ ಜನಸಂಪರ್ಕದ ಅರಿವಿನ ಪಯಣವನ್ನು ಮುಂದುವರಿಸಬೇಕು ಮತ್ತು ಶಿಕ್ಷಕರಾಗಿ ಸೂಕ್ಷ್ಮ ಸಂವೇದನೆಯನ್ನು ರೂಪಿಸಬೇಕು. ಎಲ್ಲಕ್ಕಿಂತಲೂ ಮೊದಲು ವಾಸ್ತವವನ್ನು ಗ್ರಹಿಸಲು ಅವಶ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ನೆಲಕ್ಕೆ ಕಿವಿ ಹಚ್ಚಬೇಕಾಗಿದೆ.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News