ದೇಶದ ಸಮಗ್ರತೆಯ ಬಗ್ಗೆ ಒಕ್ಕಣ್ಣಿನ ದೃಷ್ಟಿಕೋನ

Update: 2019-08-28 18:34 GMT

ವಾಸ್ತವವಾಗಿ ಕಾಳಜಿಯುಳ್ಳ ನಾಗರಿಕರು ತಮ್ಮ ಗಮನವನ್ನು ಬಲಿಷ್ಠ ಭಾರತದ ಅಲ್ಪಾವಧಿಯ ಸಂಭ್ರಮಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಪ್ರಜ್ಞಾಶೀಲ ಹಾಗೂ ಘನತೆಯುಳ್ಳ ಮನುಷ್ಯರನ್ನು ನಾಗರಿಕರನ್ನಾಗಿ ಒಳಗೊಳ್ಳುವ ಪ್ರಜ್ಞಾವಂತ ಭಾರತದ ದೀರ್ಘಕಾಲೀನ ಹಿತಾಸಕ್ತಿಯಿಂದ ಅವರು ಬಹಳಷ್ಟು ದೂರಸರಿದಿದ್ದಾರೆ.

ಹಾಲಿ ಕೇಂದ್ರ ಸರಕಾರವು ತನ್ನ ಅಧಿಕಾರಕ್ಕೆ ರಾಜಕೀಯ ಮಾನ್ಯತೆಯನ್ನು ಗಳಿಸಿಕೊಳ್ಳಲು ಭಾರತ ದೇಶಕ್ಕೆ ‘ಸಶಕ್ತ’, ‘ಸಮಗ್ರ’, ‘ಸಕ್ರಿಯ’ವೆಂಬ ಗುಣವಿಶೇಷಗಳನ್ನು ಬಳಸಲು ನಿರ್ಧರಿಸಿದೆ ಎಂಬುದು ಸ್ಪಷ್ಟವಾಗತೊಡಗಿದೆ. ಅದೇನೇ ಇದ್ದರೂ ಹಾಲೀ ಕೇಂದ್ರ ಸರಕಾರದ ಪ್ರಧಾನ ವಕ್ತಾರರು ತಮ್ಮ ಇತ್ತೀಚಿನ ಹೇಳಿಕೆಯಲ್ಲಿ ಅವೆಲ್ಲಕ್ಕಿಂತ ಹೆಚ್ಚು ಸುರಕ್ಷಿತವಾದ ‘ಒಂದು ರಾಷ್ಟ್ರ-ಒಂದು ಸಂವಿಧಾನ’ ಎಂಬ ಪದಪುಂಜವನ್ನು ಬಳಸಿದ್ದು ಕುತೂಹಲಕಾರಿಯಾಗಿದೆ. ಆ ಮೂಲಕ ಸರಕಾರವು ತನ್ನನ್ನೂ ಒಳಗೊಂಡಂತೆ ಈ ದೇಶದ ಸಕಲರೂ ಸಂವಿಧಾನದ ಮಾರ್ಗದರ್ಶಿ ಸೂತ್ರಗಳಿಗೆ ಬದ್ಧರಾಗಿರಬೇಕೆಂದು ಸೂಚಿಸುತ್ತಿರಬಹುದು. ಅಷ್ಟು ಮಾತ್ರವಲ್ಲ. ಒಂದು ಸರಕಾರದ ಮತ್ತು ಆ ಸರಕಾರವನ್ನು ನಡೆಸುವವರ ನೈತಿಕ ಪ್ರಗತಿಯು ನಮ್ಮ ಸಂವಿಧಾನದ ಅಡಿಪಾಯವಾಗಿರುವ ಸ್ವಾತಂಂತ್ರ್ಯ, ಸಮಾನತೆ, ಮಾನವ ಘನತೆಗಳೆಂಬ ನೈತಿಕ ಮೌಲ್ಯಗಳ ವಿಶ್ವಾತ್ಮಕತೆಗೆ ಬದ್ಧರಾಗಿರುವುದನ್ನು ಆಧರಿಸಿರುತ್ತದೆ ಎಂಬುದನ್ನೂ ಸಹ ಅದು ಸೂಚಿಸಿದಂತಾಗಿದೆ. ಸಂವಿಧಾನದ ಪ್ರಾಮುಖ್ಯತೆಯನ್ನು ಪುನರುಚ್ಚರಿಸುವುದೆಂದರೆ ಸಾಂವಿಧಾನಾತ್ಮಕವಾದ ಮೌಲ್ಯಗಳ ಸುತ್ತ ಕಟ್ಟಿಕೊಳ್ಳಬೇಕಾದ ದೇಶದ ಸಮಗ್ರತೆಯನ್ನು ಸಾಕಾರಗೊಳಿಸುವಲ್ಲಿ ಅಡ್ಡಿ ಬರುವ ಪರಸ್ಪರ ಅನುಮಾನ, ದ್ವೇಷ ಮತ್ತು ತಿರಸ್ಕಾರಗಳನ್ನು ಕಿತ್ತೊಗೆಯುವುದು ಎಂದರ್ಥವಾಗುತ್ತದೆ. ಅಧಿಕಾರದಲ್ಲಿರುವ ಯಾವುದೇ ಸರಕಾರದ ಮಿತಿಗಳು ಈ ಸಮಗ್ರತೆಯ ಸಂಕೀರ್ಣ ಸ್ವರೂಪದ ಆಳಕ್ಕೆ ಹೋಗಲಾರದ ಅಸಮರ್ಥತೆಯಲ್ಲಿ ಮತ್ತು ಅಸಮ್ಮತಿಯಲ್ಲಿ ಅಡಗಿದೆ. ಸಾಮಾಜಿಕ ವಾಸ್ತವಗಳ ಆಳಕ್ಕೆ ಹೋಗುವುದರಲ್ಲಿ ಒಂದು ನೈತಿಕ ಅಪಾಯವಿರುವುದರಿಂದ ಆ ವಿಷಯದಲ್ಲಿ ಆಳಕ್ಕಿಳಿಯುವುದರ ಬದಲು ಅಸಮ್ಮತಿ ತೋರುವುದೇ ಲೇಸೆಂದು ಭಾವಿಸಲಾಗುತ್ತದೆ. ಏಕೆಂದರೆ ಆ ರೀತಿ ಆಳಕ್ಕಿಳಿದಾಗ ಈ ದೇಶದ ಅತಿ ಹೆಚ್ಚಿನ ಜನರನ್ನು ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಹೊರಗುಳಿಸಲಾಗಿದೆಯೆಂಬ ಮುಜುಗರ ಹುಟ್ಟಿಸುವಂತಹ ಸತ್ಯವನ್ನು ಎದುರಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ದೇಶದ ಸಮಗ್ರತೆಯೆಂಬ ಏಕಮುಖೀ ಆಯಾಮದ ಪರಿಕಲ್ಪನೆಯೂ ಬಯಲುಗೊಳ್ಳಬೇಕಾಗುತ್ತದೆ. ವಿಪರ್ಯಾಸವೆಂದರೆ ವಿವಿಧ ನೆಲೆಗಳಿಂದಾಗಿ ಅಭಿವೃದ್ಧಿಯ ಮತ್ತು ಸರೀಕ ಮನುಷ್ಯರ ಪರಿಗಣನೆಯಿಂದ ಹೊರಗುಳಿಯಲ್ಪಟ್ಟ ಸಾಮಾಜಿಕ ಗುಂಪುಗಳ ಸಾಮಾಜಿಕ ಸಮಗ್ರತೆಯ ಗೈರುಹಾಜರಿಯಲ್ಲಿ ಮಾತ್ರ ರಾಷ್ಟ್ರೀಯ ಸಮಗ್ರತೆಯ ಪ್ರತಿಪಾದನೆಗಳು ಪೂರ್ಣಗೊಳ್ಳುತ್ತವೆ. ಹೊರದಬ್ಬುವಿಕೆಗಳ ಈ ಆಂತರಿಕ ಸ್ವರೂಪಗಳು ಏಕಮುಖೀ ರಾಷ್ಟ್ರೀಯ ಸಮಗ್ರತೆಯ ಪರಿಕಲ್ಪನೆಗಳು ಪ್ರಶ್ನಿಸುತ್ತವೆ. ಇದು ಎಷ್ಟು ಏಕಮುಖಿಯಾಗಿದೆಯೆಂದರೆ ಬಾಹ್ಯ ಕಾರಣಗಳಿದ್ದಾಗ ಮಾತ್ರ ದೇಶದ ಸಮಗ್ರತೆಯ ಕಾರಣಗಳು ಹುಟ್ಟಿಕೊಳ್ಳುತ್ತವೆ. ಸಮಗ್ರತೆಯ ಕಾಳಜಿಗಳು ಆಂತರಿಕ ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಹೆದರಿಕೆಯಿಲ್ಲದ ತೀರ್ಮಾನಗಳಿಂದ ಹುಟ್ಟುವುದಿಲ್ಲ. ‘‘ಒಂದು ರಾಷ್ಟ್ರ-ಒಂದು ಸಂವಿಧಾನ’’ ಎಂಬುದರ ಸುತ್ತ್ತ ಕಟ್ಟಿಕೊಳ್ಳಬೇಕಾದ ಸಮಗ್ರತೆಯ ಸಂಕಥನಗಳು ತಮ್ಮ ಸಾರವನ್ನು ನಮ್ಮ ಸಂವಿಧಾನದಲ್ಲಿರುವ ಹಲವಾರು ಕಲಮುಗಳಿಂದ ಪಡೆದುಕೊಳ್ಳಬೇಕು. ಸಂವಿಧಾನದಲ್ಲಿರುವ ಅಂತಹ ಕಲಮುಗಳು ದೇಶದ ಸಮಗ್ರತೆಗೆ ಈ ಸಮಾಜದಲ್ಲಿರುವ ಆಂತರಿಕ ಶ್ರೇಣೀಕರಣವು ಅಂತ್ಯವಾಗುವುದು ಅತ್ಯಗತ್ಯವಾದ ಪೂರ್ವಾಗತ್ಯವೆಂದು ಸೂಚಿಸುತ್ತವೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ತಾತ್ವಿಕ ತಳಹದಿಯ ಬಗ್ಗೆ ಮತ್ತು ಅಸ್ಪೃಶ್ಯತೆಯೆಂಬ ಮಾನವ ಘನತೆಯನ್ನು ನಾಶ ಮಾಡುವಂತಹ ಸಾಮಾಜಿಕ ವಾಸ್ತವಗಳ ನಿರ್ಮೂಲನೆಯೆಂಬ ಎರಡೂ ವಿಷಯಗಳ ಬಗ್ಗೆಯೂ ಸಮಾನವಾದ ಒತ್ತನ್ನು ನೀಡುವುದು ಅಗತ್ಯವಾಗುತ್ತದೆ.

ಸಂವಿಧಾನದ ಈ ತತ್ವಗಳನ್ನು ಸಾಕಾರಗೊಳಿಸಬೇಕೆಂದರೆ ಅ ತತ್ವಗಳಿಗೆ ಪೂರಕವಾಗಿ ನಾಗರಿಕರ ಪರಿಕಲ್ಪನೆಯನ್ನು ರೂಪಿಸುವುದು ಅತ್ಯಗತ್ಯ. ನಾಗರಿಕರು ತಮ್ಮ ನೈತಿಕ ಬದ್ಧತೆಯ ಮೂಲಕ ಇತರರ ಬಗ್ಗೆ ದ್ವೇಷ ತಾಳದೆ ಮತ್ತು ಇತರೇ ‘ನಗಣ್ಯ’ರ ಬಗ್ಗೆ ಹಿಂಸಾತ್ಮಕ ಪ್ರತಿರೋಧವನ್ನು ಬೆಳೆಸಿಕೊಳ್ಳದ ರೀತಿಯಲ್ಲಿ ತಮ್ಮನ್ನು ತಾವು ರೂಪಿಸಿಕೊಳ್ಳಲು ಬೇಕಾದ ತಾತ್ವಿಕ ಶಕ್ತಿಯನ್ನು ಪಡೆದುಕೊಳ್ಳಬಹುದು. ಇದು ನಾಗರಿಕರಿಂದ ಇಟ್ಟುಕೊಳ್ಳಬಹುದಾದ ಅತ್ಯಂತ ಕನಿಷ್ಠಮಟ್ಟದ ನಿರೀಕ್ಷೆ. ಒಂದು ಆದರ್ಶ ಸಂದರ್ಭದಲ್ಲಿ ನಾಗರಿಕರೇ ಪರಸ್ಪರ ಪ್ರತಿಯೊಬ್ಬರ ಘನತೆಯುಳ್ಳ ವ್ಯಕ್ತಿತ್ವದ ಬಗ್ಗೆ ಪರಸ್ಪರ ಗೌರವವುಳ್ಳ ಸಾಮಾಜಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವಲ್ಲಿ ನೈತಿಕ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಬಹುದಿತ್ತು. ಅದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಯಾವುದೇ ಸಾಮಾಜಿಕ ಸಂಬಂಧಗಳು ಮನುಷ್ಯ ಸಂಬಂಧಗಳನ್ನು ಪರಸ್ಪರ ನಿರಾಕರಣೆ ಮಾಡದಂತೆ ಅಥವಾ ನಿರಂತರ ಹಗೆತನದ ಮಟ್ಟಕ್ಕೆ ಇಳಿಸಿಬಿಡದಂತೆ ನೋಡಿಕೊಳ್ಳುವ ನೈತಿಕ ಜಾಗೃತಿಯನ್ನು ವ್ಯಕ್ತಿಯು ಇರಿಸಿಕೊಂಡಿರಬೇಕೆಂದು ನಿರೀಕ್ಷಿಸಲಾಗುತ್ತದೆ.

ಆದರೆ ಈ ಸರಕಾರದ ಹಲವಾರು ಬೆಂಬಲಿಗರ ಧೋರಣೆಗಳು ಮತ್ತು ಕ್ರಿಯೆಗಳು ಸಮಗ್ರತೆಯ ಬಗ್ಗೆ ಏಕಮುಖೀ ಒತ್ತನ್ನು ಹೊಂದಿರುವುದು ಆಸಕ್ತಿದಾಯಕವಾಗಿದೆ. ವಾಸ್ತವವಾಗಿ ಅವರಲ್ಲಿ ಹಲವರು ಸರಕಾರದ ಏಕಮುಖೀ ಸಮಗ್ರತೆಯ ಪರಿಕಲ್ಪನೆಯನ್ನು ಆಚರಣೆಗಿಳಿಸಲು ಬೇಕಾದ ಸಾಮಾಜಿಕ ಪರಿಸ್ಥಿತಿಗಳನ್ನು ಸೃಷ್ಟಿಸಲು ಮತ್ತು ಹರಡಲು ನೇರವಾಗಿ ಕಾರಣರಾಗಿದ್ದಾರೆ. ಗೋ ಹತ್ಯೆ ಮತ್ತು ಅಂತರ್ಜಾತಿ ಮದುವೆಗಳ ಆಧಾರದಲ್ಲಿ ಥಳಿಸುವುದು ಮತ್ತು ಸಾಮಾಜಿಕ ಬಹಿಷ್ಕಾರಗಳನ್ನು ಮಾಡುವ ಮೂಲಕ ಸಮಾಜದಲ್ಲಿ ‘‘ನಾವು ಮತ್ತು ಅವರು’’ ಎಂಬ ಧ್ರುವಗಳು ಸೃಷ್ಟಿಯಾಗಲು ಅವರು ಕಾರಣರಾಗಿದ್ದಾರೆ. ಈ ಹಿಂಸಾಚಾರಗಳ ಪರವಾಗಿರುವವರೂ ಸಹ ಈ ಬಗೆಯ ದ್ವೇಷ, ಹಗೆತನ, ಕ್ರೋಧ ಮತ್ತು ತಿರಸ್ಕಾರಗಳ ಘಟನೆಗಳಿಗೆ ಮೂಕಪ್ರೇಕ್ಷಕರಾಗುವ ಮೂಲಕ ಅನ್ಯಾಯದ ಮುಂದುವರಿಕೆಗೆ ಕೊಡುಗೆ ನೀಡುತ್ತಿದ್ದಾರೆ.

ಚಿಂತೆಗೀಡುಮಾಡುವ ವಿಷಯವೆಂದರೆ ಈ ದ್ವೇಷದ ಮನೋಭಾವವು ಸಾಮಾಜಿಕ ವೈರುಧ್ಯಗಳ ಪರಿಣಾಮವಾಗಿಯೋ ಅಥವಾ ಉದ್ಯೋಗಗಳನ್ನು ಪಡೆಯುವ ಸ್ಪರ್ಧೆಯ ಪರಿಣಾಮವಾಗಿಯೋ ಉದ್ಭವಿಸುತ್ತಿಲ್ಲ. ಏಕೆಂದರೆ ಹಾಲಿ ರಾಜಕೀಯ ಆಳ್ವಿಕೆಯಲ್ಲಿ ಅಂತಹ ಸಂದರ್ಭವೇ ಇಲ್ಲ. ಉದಾಹರಣೆಗೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಯಾವ ರೀತಿಯಲ್ಲೂ ಬಹುಸಂಖ್ಯಾತರೊಡನೆ ಯಾವುದೇ ಸ್ಪರ್ಧೆ ಮಾಡುತ್ತಿಲ್ಲ. ಆದರೂ ಆ ಎರಡೂ ಸಮುದಾಯಗಳ ನಡುವಿನ ಸಂಬಂಧಗಳು ಮಾತ್ರ ಹದಗೆಟ್ಟಿದೆ. ಹೀಗೆ ಸಂಬಂಧಗಳು ಹದಗೆಟ್ಟಿರುವುದಕ್ಕೆ ಕಾರಣಗಳನ್ನು ಈಗ ಬಲಿಷ್ಠ ಭಾರತದ ಅಮೂರ್ತ ಕಲ್ಪನೆಯಲ್ಲಿ ಕಾಣಬಹುದು. ವ್ಯಕ್ತಿಗತ ಆಸಕ್ತಿಗಳಿಗೂ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ನಡುವೆ ಸೌಹಾರ್ದವನ್ನು ಬೆಸೆಯುವ ತಾರ್ಕಿಕ ಕಾರಣಗಳು ಮಾಯವಾಗಿ, ಆ ಜಾಗದಲ್ಲಿ ಅತಾರ್ಕಿಕ ಕಾರಣಗಳು ದೃಷ್ಟಿಕೋನಕ್ಕೆ ಪರಿಪೂರ್ಣತೆಯನ್ನು ಒದಗಿಸುತ್ತಿವೆ. ವಾಸ್ತವವಾಗಿ ಕಾಳಜಿಯುಳ್ಳ ನಾಗರಿಕರು ತಮ್ಮ ಗಮನವನ್ನು ಬಲಿಷ್ಠ ಭಾರತದ ಅಲ್ಪಾವಧಿಯ ಸಂಭ್ರಮಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಪ್ರಜ್ಞಾಶೀಲ ಹಾಗೂ ಘನತೆಯುಳ್ಳ ಮನುಷ್ಯರನ್ನು ನಾಗರಿಕರನ್ನಾಗಿ ಒಳಗೊಳ್ಳುವ ಪ್ರಜ್ಞಾವಂತ ಭಾರತದ ದೀರ್ಘಕಾಲೀನ ಹಿತಾಸಕ್ತಿಯಿಂದ ಅವರು ಬಹಳಷ್ಟು ದೂರಸರಿದಿದ್ದಾರೆ.

ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News