×
Ad

ಎಲ್ಲ ಇಲಾಖೆಗಳಲ್ಲಿಯೂ ಆನ್‌ಲೈನ್ ವ್ಯವಸ್ಥೆಗೆ ಚಿಂತನೆ: ಸಚಿವ ಸುರೇಶ್ ಕುಮಾರ್

Update: 2019-09-24 18:31 IST

ಬೆಂಗಳೂರು, ಸೆ.24: ಮುಂದಿನ ಅಧಿವೇಶನದ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.

ಮಂಗಳವಾರ ನಗರದ ಶಿಕ್ಷಕರ ಸದನದಲ್ಲಿ ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ‘ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಆನ್‌ಲೈನ್ ಸೇವೆ’ಗಳ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನೇಮಕಾತಿ, ಕಚೇರಿ, ಮೂಲಭೂತ ಸೌಕರ್ಯ, ಬಾಕಿ ವೇತನ ಸೇರಿದಂತೆ ವಿವಿಧ 18 ಬೇಡಿಕೆಗಳಿಗೆ ಸಂಬಂಧಿಸಿದಂತೆ ಕ್ರಮ ವಹಿಸಲಾಗುವುದು. ಚಳಿಗಾಲದ ಅಧಿವೇಶನ ಮುಗಿದ ಕೂಡಲೇ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಅನಂತರ ಎಲ್ಲ ಸಮಸ್ಯೆಗಳಿಗೂ ಪರಿಹಾರಗಳನ್ನು ಹುಡುಕುತ್ತೇವೆ ಎಂದು ಹೇಳಿದರು.

ಎಲ್ಲ ಇಲಾಖೆಗಳಲ್ಲಿಯೂ ಆನ್‌ಲೈನ್ ವ್ಯವಸ್ಥೆ ರೂಪಿಸಿಕೊಂಡರೆ ಜನರಿಗೆ ಸರಳವಾಗಿ ಸೌಲಭ್ಯಗಳನ್ನು ತಲುಪಿಸಲು ಸಾಧ್ಯವಾಗುತ್ತದೆ. ನಾನು ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಸಿಎಂ ಬಳಿ ಯಾವುದೇ ಖಾತೆ ನೀಡಿದರೂ ಪರವಾಗಿಲ್ಲ, ಸಕಾಲ ನೀಡುವಂತೆ ಮನವಿ ಮಾಡಿದ್ದೆ. ಸಕಾಲ ಇಂದು ದೇಶದಲ್ಲಿಯೇ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಶಿಕ್ಷಕರನ್ನೂ ಇದರ ಅಡಿಯಲ್ಲಿ ಸೇರಿಸಿದ್ದು, ಅವರಿಗೂ ಅಲೆಯುವುದು ತಪ್ಪಿದಂತಾಗಿದೆ ಎಂದು ನುಡಿದರು.

ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ಸುಮಂಗಲಾ ಮಾತನಾಡಿ, ಆಡಳಿತದಲ್ಲಿ ತಂತ್ರಜ್ಞಾನ ಬಳಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಲ್ಲಿ ಅನೇಕ ಯೋಜನೆಗಳು ಆನ್‌ಲೈನ್ ಮೂಲಕ ಕೆಲಸ ನಿರ್ವಹಿಸುತ್ತಿವೆ. ಶಿಕ್ಷಕರು ಹಲವು ಸೇವೆಗಳನ್ನು ಪಡೆಯಲು ಬಿಇಒ ಕಚೇರಿಯಿಂದ ರಾಜ್ಯಮಟ್ಟದ ಕಚೇರಿವರೆಗೂ ಅಲೆಯಬೇಕಿತ್ತು. ಇದೀಗ ಆನ್‌ಲೈನ್ ಮಾಡಿದ್ದು, ಎಲ್ಲರಿಗೂ ಸಹಕಾರಿಯಾಗಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸುಧೀರ್ಘವಾಗಿ ಆರು ತಿಂಗಳು ಕಾಲ ಚರ್ಚೆ ನಡೆಸಿ, ಪರಿಶೀಲನೆ ನಡೆಸಿ ಇಲಾಖೆಯ ಎಲ್ಲ ಸೇವೆಗಳನ್ನು ಆನ್‌ಲೈನ್ ಮಾಡಲಾಗಿದೆ. ಎಸೆಸ್ಸೆಲ್ಸಿ ಪರೀಕ್ಷೆ ಆರಂಭದಿಂದ ಹಿಡಿದು ಫಲಿತಾಂಶದ ವರೆಗೆ, ಶಿಕ್ಷಕರ ರಜಾ ಮಂಜೂರಾತಿ, ಅಂಕಪಟ್ಟಿಗಳು ಸೇರಿದಂತೆ 25 ವಿವಿಧ ಸೌಲಭ್ಯಗಳಿದ್ದು, ಎಲ್ಲವನ್ನೂ ಆನ್‌ಲೈನ್ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂಘದ ಅಧ್ಯಕ್ಷ ಎಸ್.ಎನ್.ಸುರೇಶ್ ಮಾತನಾಡಿ, ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಹಲವು ವಿಷಯಗಳ ಕುರಿತು ಕಾಲಕಾಲಕ್ಕೆ ತರಬೇತಿ ಡಯಟ್ ವ್ಯವಸ್ಥೆ ಮಾಡಬೇಕು. ಮೂಲಸೌಕರ್ಯಗಳನ್ನು ಒದಗಿಸಬೇಕು. ಹೊಸ ತಾಲೂಕುಗಳಿಗೆ ಸಿಬ್ಬಂದಿ, ಬೋಧಕೇತರ ವೃಂದದ ಹುದ್ದೆಗಳನ್ನು ಮಂಜೂರು ಮಾಡಬೇಕು. ಹೊಸ ಜಿಲ್ಲೆಗಳ ಉಪ ನಿರ್ದೇಶಕರ ಕಚೇರಿಗಳಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಹುದ್ದೆಗಳಿದ್ದು, ಅದನ್ನು ಸಹಾಯಕರ ಹುದ್ದೆಗಳಾಗಿ ಪರಿವರ್ತಿಸಬೇಕು ಎಂದು ಆಗ್ರಹಿಸಿದರು.

ಪತ್ರಾಂಕಿತ ವ್ಯವಸ್ಥಾಪಕ ಹುದ್ದೆಗಳನ್ನು ಸಹಾಯಕ ನಿರ್ದೇಶಕರು ಹುದ್ದೆಗಳೆಂದು ಪದನಾಮೀಕರಿಸಬೇಕು. ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ತಲಾ ಒಂದು ಸಹಾಯಕ ನಿರ್ದೇಶಕ ಹುದ್ದೆ ಸೃಜನೆ ಮಾಡಬೇಕು. ಆಡಿಟ್ ಆಫೀಸರ್‌ಗಳ ಹುದ್ದೆ ಸೃಜಿಸಬೇಕು. ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಬೋಧಕೇತರ ವೃಂದದವರಿಂದ ಭರ್ತಿ ಮಾಡಬೇಕು. ಜಿಲ್ಲಾ ಮಟ್ಟದ ಅಕ್ಷರ ದಾಸೋಹ ಕಚೇರಿಗೆ ಅಧೀಕ್ಷಕರು ಹಾಗೂ ಒಂದು ಸಹಾಯಕ ನಿರ್ದೇಶಕ ಹುದ್ದೆ ಸೃಜಿಸಬೇಕು ಸೇರಿದಂತೆ 18 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಟಿ.ಸಿ.ಚಂದ್ರಶೇಖರ್, ಎಸ್.ಎನ್.ಸುರೇಶ್ ಸೇರಿದಂತೆ ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಪ್ರಮುಖರು ಉಪಸ್ಥಿತರಿದ್ದರು.

ಆನ್‌ಲೈನ್ ನಂಬಿಕೆ ತರಲಿದೆ

ರಾಜ್ಯದಲ್ಲಿ ಆನ್‌ಲೈನ್ ವ್ಯವಸ್ಥೆ ಅತ್ಯಂತ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಜನರಲ್ಲಿ ಸರಕಾರಿ ಇಲಾಖೆಗಳ ಹಾಗೂ ರಾಜಕಾರಣಿಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ಆದರೂ, ನಾವೇ ಇದನ್ನು ಜಾರಿ ಮಾಡಬೇಕಾಗಿದೆ. ಜನರಲ್ಲಿ ಅಪನಂಬಿಕೆ ತೊಲಗಿಸಿ, ನಂಬಿಕೆ ತರುವುದೇ ಆನ್‌ಲೈನ್ ಯೋಜನೆಯ ಉದ್ದೇಶವಾಗಿದೆ.

-ಸುರೇಶ್‌ ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News