ನಾಯಿಗಳ ಮಹಾ ಸಮ್ಮೇಳನ ನಡೆಸಿದ ವಾಟಾಳ್ ನಾಗರಾಜ್..!
ಬೆಂಗಳೂರು, ಸೆ.25: ಇತ್ತೀಚಿನ ರಾಜಕೀಯ ಚರ್ಚೆ, ರಾಜಕಾರಣಿಗಳ ಟೀಕೆಗಳನ್ನು ವಿರೋಧಿಸಿ, ವಿಭಿನ್ನವಾಗಿಯೇ ಪ್ರತಿಭಟನೆ ನಡೆಸಿದ ಹೋರಾಟಗಾರ ವಾಟಾಳ್ ನಾಗರಾಜ್, ನಾಯಿಗಳ ಮಹಾ ಸಮ್ಮೇಳನ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಇಲ್ಲಿನ ಕೆಂಪೇಗೌಡ ಬಸ್ ನಿಲ್ದಾಣದ ಆವರಣದಲ್ಲಿ ಸಾಕು ನಾಯಿಗಳೊಂದಿಗೆ ಕುಳಿತು ಪ್ರತಿಭಟನೆ ನಡೆಸಿದ ಅವರು, ಚುನಾಯಿತ ಪ್ರತಿನಿಧಿಗಳಿಗೆ ಜನರ ಸಂಕಷ್ಟಗಳನ್ನು ಆಲಿಸದೆ, ಟೀಕೆ ಟಿಪ್ಪಣಿಗಳಲ್ಲಿ ಕಾಲ ವ್ಯರ್ಥ ಮಾಡುತ್ತಿದ್ದಾರೆ. ಹಾಗಾಗಿ, ನಾಯಿಗಳ ಮಹಾ ಸಮ್ಮೇಳನ ನಡೆಸಿ, ಸ್ವತಃ ನಾನೇ ಅಧ್ಯಕ್ಷತೆ ವಹಿಸಿದ್ದೇನೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಹೋಗುತ್ತಿದ್ದು, ಪಕ್ಷಾಂತರಿ ಎನ್ನುವುದೇ ಅಪಾಯಕಾರಿ ಬೆಳವಣಿಗೆ. ಇದನ್ನು ತಡೆಗಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದ ಅವರು, ನಾಲಿಗೆ ಭದ್ರ ಇಲ್ಲದ ಜನಪ್ರತಿನಿಧಿಗಳು ನಮ್ಮ ನಡುವೆ ಇದ್ದಾರೆ. ಅವರನ್ನು, ಸಮಾಜದಿಂದ ದೂರಗೊಳಿಸಬೇಕೆಂಬ ಬೇಡಿಕೆಯನ್ನು ನಾಯಿಗಳ ಸಮ್ಮೇಳನದಲ್ಲಿ ಮಂಡಿಸಲಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.