ಬಿಜೆಪಿ ಆಡಳಿತದಲ್ಲಿ ಸಾಮಾಜಿಕ-ಆರ್ಥಿಕ ಮಟ್ಟದಲ್ಲಿ ದಲಿತರು, ಒಬಿಸಿಗಿಂತಲೂ ಮುಸ್ಲಿಮರು ಹಿಂದೆ

Update: 2019-11-03 18:05 GMT

ಹೊಸದಿಲ್ಲಿ, ನ.3: ಸಾಮಾಜಿಕ-ಆರ್ಥಿಕ ವಿಚಾರದಲ್ಲಿ ಮುಸ್ಲಿಮರು ದಲಿತರಿಗಿಂತ ಹಿಂದುಳಿದಿದ್ದಾರೆ ಎಂದು ಸುಮಾರು 15 ವರ್ಷಗಳ ಹಿಂದೆ ಜಸ್ಟಿಸ್ ಸಾಚಾರ್ ಸಮಿತಿ ಪತ್ತೆ ಮಾಡಿತ್ತು. ಈ ಎರಡು ಸಮುದಾಯಗಳ ನಡುವಿನ ಅಂತರ ಕಳೆದ 6 ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿದೆ ಎಂದು ಸರಕಾರದ ಎರಡು ಸಮೀಕ್ಷೆಗಳ ತುಲನಾತ್ಮಕ ಅಧ್ಯಯನ ಹೇಳಿದೆ.

ಶೇಕಡಾ ಸಮುದಾಯವಾರು ಪದವೀಧ ರರು (21ರಿಂದ 29 ವರ್ಷ)

2017 ಜುಲೈ- 2018 ಜೂನ್ ನಡುವೆ ನಡೆಸಿದ ಎನ್‌ಎಸ್‌ಎಸ್‌ಒ ವರದಿ (ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆ-ಪಿಎಲ್‌ಎಫ್‌ಎಸ್ 2017-2018) ದಲಿತರು, ಹಿಂದೂ ಒಬಿಸಿ ಹಾಗೂ ಹಿಂದೂ ಮೇಲ್ಜಾತಿಗೆ ಹೋಲಿಸಿದರೆ ಪದವೀಧರರಾಗಿರುವ ಮುಸ್ಲಿಮ್ ಯುವಜನತೆ (21-29 ಪ್ರಾಯ) ಸಂಖ್ಯೆ ಅತಿ ಕಡಿಮೆ. ಈಗ ಮುಸ್ಲಿಮರು ಹಾಗೂ ದಲಿತರ ನಡುವಿನ ಅಂತರ ಶೇ.4 ಇದೆ. 6 ವರ್ಷಗಳ ಹಿಂದೆ (2011-2012) ಈ ಅಂತರ ಕೇವಲ ಶೇ.1. ಇತ್ತು. ದಲಿತರಲ್ಲದೆ ಮುಸ್ಲಿಮರು ಹಿಂದೂ ಒಬಿಸಿ ಹಾಗೂ ಹಿಂದೂ ಮೇಲ್ಜಾತಿಗಿಂತ ಶೇ. 7ರಿಂದ 11ರಷ್ಟು ಹಿಂದುಳಿದಿದ್ದಾರೆ.

‘‘ಎನ್‌ಎಸ್‌ಎಸ್-ಎಂಪ್ಲಾಯ್‌ಮೆಂಟ್ ಆ್ಯಂಡ್ ಅನ್‌ಎಂಪ್ಲಾಯ್‌ಮೆಂಟ್ ಸಿಚುವೇಶನ್ ಇನ್ ಇಂಡಿಯಾ- ಇಯುಎಸ್ 2011-2012’’ನ್ನು ಈ 2011-12ರ ದತ್ತಾಂಶ ಆಧಾರವಾಗಿ ಹೊಂದಿದೆ. ಕೇಂದ್ರ ಸರಕಾರ (ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನಡೆಸಿದ)ದ ಎರಡು ವರದಿಗಳ ತುಲನಾತ್ಮಕ ಅಧ್ಯಯನದ ಆಧಾರದಲ್ಲಿ ಜನಪ್ರಿಯ ರಾಜಕೀಯ ವಿಶ್ಲೇಷಕ ಹಾಗೂ ಲೇಖಕ ಕ್ರಿಸ್ಟೋಫೆ ಜೆಫ್ರೆಲೊಟ್ ಹಾಗೂ ಕಾಳಯ್ಯರಸನ್ ಜೊತೆಯಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಲೇಖನ ಬರೆದಿದ್ದಾರೆ. ಈ ಲೇಖನದಲ್ಲಿ ದೇಶದ ಯಾವುದೇ ಇತರ ವಲಯಗಳಿಗೆ ಹೋಲಿಸಿದರೆ ‘ಕೌ ಬೆಲ್ಟ್’ (ಬಿಹಾರ್, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರಪ್ರದೇಶ. ಇದರಲ್ಲಿ ಗೋಹತ್ಯೆ ನಿಷೇಧಿಸಿದ ಗುಜರಾತ್, ಮಹಾರಾಷ್ಟ್ರ ಹಾಗೂ ಹರ್ಯಾಣ ಕೂಡ ಸೇರುತ್ತದೆ)ನಲ್ಲಿ ಮುಸ್ಲಿಮರು ಹಾಗೂ ದಲಿತರ ನಡುವಿನ ಸಾಮಾಜಿಕ-ಆರ್ಥಿಕ ಅಂತರ ಹೆಚ್ಚಾಗಿರುವುದನ್ನು ಗುರುತಿಸಿದ್ದಾರೆ.

ಹರ್ಯಾಣದಲ್ಲಿ ಮುಸ್ಲಿಮರು ತೀರಾ ಹಿಂದುಳಿದಿದ್ದಾರೆ. ಆನಂತರ ಅವರು ಹಿಂದುಳಿದಿರುವ ರಾಜ್ಯಗಳು ರಾಜಸ್ಥಾನ ಹಾಗೂ ಉತ್ತರಪ್ರದೇಶ. ಬಿಹಾರ್‌ನಲ್ಲಿ ಮಾತ್ರ ಮುಸ್ಲಿಮರು ದಲಿತರಿಗಿಂತ ಸ್ಪಲ್ಪ ಮುಂದುವರಿದಿದ್ದಾರೆ. ಉತ್ತರ ಮತ್ತು ಪೂರ್ವಕ್ಕೆ ಹೋಲಿಸಿದರೆ ಹಾಗೂ 2011-2012ರ ತಮ್ಮ ಸ್ಥಿತಿಗೆ ಹೋಲಿಸಿದರೆ ಮುಸ್ಲಿಮರು ಪಶ್ಚಿಮ ಭಾರತದಲ್ಲಿ ಮುಂದುವರಿದಿದ್ದಾರೆ. ಆದರೂ ಅವರು ಈ ವಲಯದಲ್ಲಿ ಅವರು ಈಗಲೂ ದಲಿತರು ಹಾಗೂ ಹಿಂದೂ ಒಬಿಸಿಗಳಿಗಿಂತ ನಿರಂತರವಾಗಿ ಹಿಂದುಳಿಯುತ್ತಿದ್ದಾರೆ.

ಉದಾಹರಣೆಗೆ ಪದವೀಧರರ ವರ್ಗದಲ್ಲಿ ಮುಸ್ಲಿಮರು ಹಾಗೂ ದಲಿತರ ನಡುವಿನ ಅಂತರ ಗುಜರಾತ್‌ನಲ್ಲಿ ಅತಿ ಹೆಚ್ಚಿದೆ. 2011-2012ರಲ್ಲಿ ಈ ಅಂತರ ಶೇ. 8 ಇತ್ತು. 2017-2018ರಲ್ಲಿ ಅದು ಶೇ.14ಕ್ಕೆ ಏರಿಕೆ ಆಯಿತು. ಇದೇ ರೀತಿ ಮಹಾರಾಷ್ಟ್ರದಲ್ಲಿ ದಲಿತರ ಪರಿಸ್ಥಿತಿಗೆ ಹೋಲಿಸಿದರೆ 2011-2012ರಲ್ಲಿ ಮುಸ್ಲಿಮರ ಸ್ಥಿತಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ (ಶೇ.2). ಆದರೆ, ಈಗ ಅವರು ದಲಿತರಿಗಿಂತ ಹಿಂದುಳಿದಿರುವುದು ಮಾತ್ರವಲ್ಲ ಅವರಿಗಿಂತ ಶೇ. 8ರಷ್ಟು ಹಿಂದುಳಿದಿದ್ದಾರೆ. ದಕ್ಷಿಣ ಭಾರತದಲ್ಲಿ ಮುಸ್ಲಿಮರು ಉತ್ತಮ ಸ್ಥಿತಿಯಲ್ಲಿದ್ದಾರೆ. ತಮಿಳುನಾಡಿನಲ್ಲಿ ಶೇ.36, ಕೇರಳದಲ್ಲಿ ಶೇ.28, ಆಂಧ್ರಪ್ರದೇಶದಲ್ಲಿ ಶೇ.21 ಹಾಗೂ ಕರ್ನಾಟಕದಲ್ಲಿ ಶೇ.18 ಮುಸ್ಲಿಂ ಪದವೀಧರರು ಇದ್ದಾರೆ. ಈ ರಾಜ್ಯಗಳಲ್ಲಿ ಮುಸ್ಲಿಮರು ದಲಿತರಿಗೆ ನಿಕಟ ಸ್ಪರ್ಧೆ ನೀಡುತ್ತಿದ್ದಾರೆ.

ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಶೇಕಡವಾರು ಮುಸ್ಲಿಂ ಯುವಜನತೆ (15-24 ವರ್ಷ)

ಇತರ ಸಮುದಾಯಗಳಿಗೆ ಹೋಲಿಸಿದರೆ ಮುಸ್ಲಿಂ ಸಮುದಾಯದವರಲ್ಲಿ ಪದವಿ ಪಡೆದುಕೊಂಡವರು ತುಂಬಾ ಕಡಿಮೆ. ಮಾತ್ರವಲ್ಲ ಪ್ರಸ್ತುತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವವರು ಕೂಡ ತುಂಬಾ ಕಡಿಮೆ. 2017-18ರಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ 15-24 ಪ್ರಾಯ ಗುಂಪಿನ ಮುಸ್ಲಿಂ ಯುವಜನತೆ ಕೇವಲ ಶೇ. 39 ಇದ್ದರು. ಆದರೆ, ದಲಿತರು ಶೇ. 44, ಹಿಂದೂ ಒಬಿಸಿ ಶೇ. 51 ಹಾಗೂ ಹಿಂದೂ ಮೇಲ್ಜಾತಿ ಶೇ. 59 ಇದ್ದರು.

ಪ್ರತಿ ಮೂವರು ಮುಸ್ಲಿಮ್ ಯುವಜನರ ಪೆಕಿ ಒಬ್ಬರಿಗೆ ಶಿಕ್ಷಣ, ತರಬೇತಿ ಅಥವಾ ಉದ್ಯೋಗ ಇಲ್ಲ!

ಇ ಲ್ಲಿ ಕೂಡ ಮುಸ್ಲಿಮ್ ಸಮುದಾಯ ತೀರಾ ಹಿಂದುಳಿದಿದೆ. ಶೇ.31 ಮುಸ್ಲಿಂ ಯುವಜನತೆಗೆ ಶಿಕ್ಷಣವಾಗಲಿ, ತರಬೇತು ಅಥವಾ ಉದ್ಯೋಗವಾಗಲಿ ಇಲ್ಲ. ಆದರೆ, ಇದರಲ್ಲಿ ಎಸ್ಸಿ ಯುವಕರ ಸಂಖ್ಯೆ ಕಡಿಮೆ (ಶೇ.26). ಇವರನ್ನು ಅನುಸರಿಸಿ ಒಬಿಸಿ (ಶೇ.23), ಹಿಂದೂ ಮೇಲ್ಜಾತಿ (ಶೇ.17) ಇವೆ. ರಾಜ್ಯಗಳನ್ನು ಪರಿಗಣಿಸಿದರೆ ಈ ವಿಷಯದಲ್ಲಿ ರಾಜಸ್ಥಾನದಲ್ಲಿ ಮುಸ್ಲಿಮರ ಸ್ಥಿತಿ ತೀವ್ರ ಹಿಂದುಳಿದಿದೆ (ಈ ವರ್ಗದಲ್ಲಿ ಶೇ. 38 ಮುಸ್ಲಿಂ ಯುವಜನತೆ ಇದೆ) ಹಾಗೂ ತೆಲಂಗಾಣದಲ್ಲಿ ಉತ್ತಮವಾಗಿದೆ (ಶೇ.17) ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News