ಶಿವಸೇನೆಗೆ ಮತ್ತೆ ಸಂಕಷ್ಟ: ಕೊನೆ ಘಳಿಗೆಯಲ್ಲಿ ಬೆಂಬಲದ ನಿರ್ಧಾರ ಬದಲಿಸಿದ ಕಾಂಗ್ರೆಸ್
Update: 2019-11-11 15:10 GMT
ಹೊಸದಿಲ್ಲಿ, ನ.11: ಶಿವಸೇನೆಗೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ಕೊನೆ ಘಳಿಗೆಯಲ್ಲಿ ಹಿಂಪಡೆದಿದ್ದು, ಈ ಬಗ್ಗೆ ಶರದ್ ಪವಾರ್ ರ ಎನ್ ಸಿಪಿ ಜೊತೆ ಹೆಚ್ಚಿನ ಮಾತುಕತೆ ನಡೆಸಬೇಕಾಗಿದೆ ಎಂದಿದೆ.
ಶಿವಸೇನೆ ಬೆಂಬಲ ಯಾಚಿಸಿದ ನಂತರ ಈ ಬಗ್ಗೆ ಪ್ರಕಟನೆ ನೀಡಿದ್ದ ಕಾಂಗ್ರೆಸ್, "ಸೋನಿಯಾ ಗಾಂಧಿಯವರು ಶರದ್ ಪವಾರ್ ಜೊತೆ ಮಾತುಕತೆ ನಡೆಸಿದ್ದಾರೆ. ಪಕ್ಷವು ಎನ್ ಸಿಪಿ ಜೊತೆ ಹೆಚ್ಚಿನ ಮಾತುಕತೆ ನಡೆಸಬೇಕಾಗಿದೆ" ಎಂದಿದೆ.
ಇಂದು ಆದಿತ್ಯ ಠಾಕ್ರೆ ನೇತೃತ್ವದಲ್ಲಿ ಶಿವಸೇನೆಯ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿದ್ದು, ಸರಕಾರ ರಚನೆಯ ಅವಕಾಶ ಕೇಳಿದ್ದು, ಹೆಚ್ಚಿನ ಕಾಲಾವಕಾಶ ಬೇಕೆಂದಿದ್ದಾರೆ. ಶಿವಸೇನೆಯು 48 ಗಂಟೆಗಳ ಕಾಲಾವಕಾಶ ಕೇಳಿದ್ದು, ರಾಜ್ಯಪಾಲರು ಈ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಆದಿತ್ಯ ಠಾಕ್ರೆ ಪತ್ರಕರ್ತರಿಗೆ ತಿಳಿಸಿದ್ದಾರೆ.