'ಸಂವಿಧಾನ ವಿರೋಧಿಗಳು ಸಂವಿಧಾನದ ಬಗ್ಗೆ ಮಾತನಾಡಬೇಡಿ': ಮೋಹನ್ ದಾಸ್ ಪೈ ಭಾಷಣಕ್ಕೆ ದಲಿತರಿಂದ ಅಡ್ಡಿ
Update: 2019-11-24 21:43 IST
ಬೆಂಗಳೂರು, ನ.24: ನವ ಬೆಂಗಳೂರು ಫೌಂಡೇಷನ್ ವತಿಯಿಂದ ಆಯೋಜಿಸಿದ್ದ 'ಸಂವಿಧಾನ ದಿನಾಚರಣೆ' ಕಾರ್ಯಕ್ರಮದಲ್ಲಿ ಪ್ರದ್ಮಶ್ರೀ ಪುರಸ್ಕೃತ ಟಿ.ವಿ.ಮೋಹನ್ ದಾಸ್ ಪೈ ಅವರ ಭಾಷಣಕ್ಕೆ ದಲಿತ ಸಂಘಟನೆ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ನಡೆಯಿತು.
ರವಿವಾರ ನಗರದ ಆರ್.ವಿ. ಕಾಲೇಜಿನಲ್ಲಿ ನವ ಬೆಂಗಳೂರು ಫೌಂಡೇಷನ್ನಿಂದ ಆಯೋಜಿಸಿದ್ದ ಭಾರತೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮೋಹನ್ ದಾಸ್ ಪೈ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಕೆಲವೊಂದು ದಲಿತ ಸಂಘಟನೆಯ ಯುವಕರು ‘ಸಂವಿಧಾನ ವಿರೋಧಿಗಳು ಸಂವಿಧಾನದ ಬಗ್ಗೆ ಮಾತನಾಡಲು ಅರ್ಹರಲ್ಲ’, 'ಅಂಬೇಡ್ಕರ್ ವಿರೋಧಿಗಳಿಗೆ ಧಿಕ್ಕಾರ' ಎಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಪ್ರಸಂಗ ನಡೆಯಿತು. ಕೂಡಲೇ ಪೊಲೀಸರು ಘೋಷಣೆ ಕೂಗಿದವರನ್ನು ಹೊರಗೆ ಕಳುಹಿಸಿದರು.
ಕಾರ್ಯಕ್ರಮದಲ್ಲಿ ನವ ಬೆಂಗಳೂರು ಫೌಂಡೇಷನ್ ಸಂಸ್ಥಾಪಕ ಅನಿಲ್ ಶೆಟ್ಟಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉಪಸ್ಥಿತರಿದ್ದರು.