ವಂಚಿತ ಲೋಕದಿಂದ ಬಂದು ಎತ್ತರಕ್ಕೇರಿ ನಿಂತ ಚೆನ್ನಣ್ಣ

Update: 2019-11-26 05:49 GMT

‘‘ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ’’ ಎಂದು ಪದ್ಯದ ಮೂಲಕ ಪ್ರಶ್ನಿಸಿದ ಚೆನ್ನಣ್ಣ ವಾಲೀಕಾರ ಈಗ ನೆನಪು ಮಾತ್ರ. ಜಾತಿಶ್ರೇಣೀಕರಣದ ಈ ಕೆಟ್ಟ ವ್ಯವಸ್ಥೆಯಲ್ಲಿ ಅವಕಾಶ ವಂಚಿತ ಸಮುದಾಯದಲ್ಲಿ ಜನಿಸಿದ ಚೆನ್ನಣ್ಣ ಅಪಾರ ಪರಿಶ್ರಮ, ಸತತ ಅಧ್ಯಯನ ಹಾಗೂ ಛಲ ಬಿಡದ ದಿಟ್ಟತನ ಮತ್ತು ಸ್ಪಷ್ಟವಾದ ತಾತ್ವಿಕ ನಿಲುವು, ಇವೆಲ್ಲವುಗಳದರ ಜೊತೆಗೆ ಬರವಣಿಗೆಯ ಅದ್ಬುತ ಪ್ರತಿಭೆಯಿಂದ ಈ ಎತ್ತರಕ್ಕೆ ಬೆಳೆದು ನಿಂತರು.

ಚೆನ್ನಣ್ಣ ವಾಲೀಕಾರ ನನ್ನ ನಾಲ್ಕೂವರೆ ದಶಕಗಳ ಖಾಸಾ ಆತ್ಮೀಯ ಗೆಳೆಯ, ಸಮಾನ ಮನಸ್ಕ ಸಂಗಾತಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾ ನಿಲಯಕ್ಕೆ ವ್ಯಾಸಂಗ ಮಾಡಲು ಬಂದಾಗಿನಿಂದ ಅವರ ಪರಿಚಯ, ಮುಂದೆ ಅದು ಸ್ನೇಹವಾಗಿ ಬಾಂಧವ್ಯವಾಯಿತು, ಆಗಿನಿಂದ ನೋಡುತ್ತ ಬಂದಿದ್ದೇನೆ. ತುಂಬ ಭಾವುಕ ಮನುಷ್ಯ, ಎಲ್ಲರನ್ನೂ ಅಣ್ಣ, ತಮ್ಮ, ಅಕ್ಕ, ತಂಗಿ, ಕಾಕಾ ಎಂದೇ ಮಾತಾಡಿಸುತ್ತಿದ್ದ ಚೆನ್ನಣ್ಣ ಅಕ್ಷರವೇ ಅಪರಿಚಿತವಾಗಿದ್ದ ಕುಟುಂಬದಲ್ಲಿ ಜನಿಸಿ ನಾಡಿನ ಪ್ರಮುಖ ಸಾಹಿತಿಯಾಗಿ, ಕತೆಗಾರರಾಗಿ ಕವಿಯಾಗಿ, ಶಿಕ್ಷಕರಾಗಿ, ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ಉಪನ್ಯಾಸಕರಾಗಿ ಬೆಳೆದರು. ದಮನಿತ ದಲಿತ ಲೋಕದ ಸಂಕಟದ ಧ್ವನಿಯಾಗಿ ತಮ್ಮ ಛಾಪು ಮೂಡಿಸಿದರು.

ಕಲಬುರಗಿ ಜಿಲ್ಲೆಯ ಚಿತಾಪುರ ತಾಲೂಕಿನ ಶಂಕರವಾಡಿಯಲ್ಲಿ ಜನಿಸಿ, ಪ್ರಾಥಮಿಕ ಅಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ನಾಲವಾರದಲ್ಲಿ ಪೂರೈಸಿ ಕಲಬುರಗಿಯಲ್ಲಿ ಬಿಎ ಪದವಿ ಪಡೆದ ಚೆನ್ನಣ್ಣ ಎಂಎ ಓದಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಬಂದರು. ಅಲ್ಲಿ ಪದವಿ ಪಡೆದು ಪಿಎಚ್. ಡಿ. ಮಾಡಿ ಡಾ. ಚೆನ್ನಣ್ಣ ವಾಲೀಕಾರ ಆದರು.

ಯಾವುದೇ ಸಭೆ, ಸಮಾರಂಭಗಳಿಗೆ ಕೆಂಪು ಶರ್ಟು ಧರಿಸಿ ಬರುತ್ತಿದ್ದ ಚೆನ್ನಣ್ಣ ದಣಿವಿಲ್ಲದಂತೆ ಬರೆದರು. ಕತೆ, ಕಾವ್ಯ, ಜಾನಪದ ಹೀಗೆ ಎಲ್ಲ ಪ್ರಕಾರಗಳಲ್ಲಿ ಬರೆದು, ರಂಗಭೂಮಿ, ಜಾನಪದ ಕ್ಷೇತ್ರ ಕಾರ್ಯ ಚಳವಳಿ, ಹೋರಾಟ ಎಲ್ಲದರಲ್ಲೂ ಚೆನ್ನಣ್ಣ ತಮ್ಮನ್ನು ತೊಡಗಿಸಿಕೊಂಡಿದ್ದರು.

ಚೆನ್ನಣ್ಣ ಬರೆಯದೆ ಒಂದು ದಿನವನ್ನೂ ವ್ಯರ್ಥವಾಗಿ ಕಳೆಯುತ್ತಿರಲಿಲ್ಲ.ಹಲವಾರು ಪ್ರಬಂಧಗಳು, ನಾಲ್ಕು ಮಹಾಕಾವ್ಯಗಳು, ಹನ್ನೊಂದು ಕವನ ಸಂಕಲನಗಳು, ಹನ್ನೆರಡು ನಾಟಕಗಳು, ಐದು ಕಾದಂಬರಿಗಳು ಮತ್ತು ಅನೇಕ ಕತೆಗಳನ್ನು ಚೆನ್ನಣ್ಣ ಬರೆದರು. ಎಪ್ಪತ್ತರ ದಶಕದಲ್ಲಿ ಅವರು ಬರೆದ ‘ಕರಿ ತೆಲಿ ಮಾನವನ ಜೀ ಪದಗಳು’ ಆಗ ಸಾಕಷ್ಟು ಸದ್ದು ಮಾಡಿತ್ತು, ‘ಬೆಳ್ಯಾ’ ಎಂಬ ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿತು. ದೇವದಾಸಿಯರ ಬಗೆಗೆ ನಾಡಿನುದ್ದಕ್ಕೂ ಓಡಾಡಿ ದೇವದಾಸಿಯರನ್ನು ಸಂದರ್ಶಿಸಿ ಸಾವಿರ ಪುಟಗಳ ಬ್ರಹತ್ ಗ್ರಂಥವನ್ನೇ ಚೆನ್ನಣ್ಣ ಬರೆದರು.

ಕನ್ನಡದಲ್ಲಿ ಬಂಡಾಯ ಸಾಹಿತ್ಯ ಚಳವಳಿ ಹುಟ್ಟಲು ಒಂದು ವಿಧದಲ್ಲಿ ಚೆನ್ನಣ್ಣನವರೇ ಕಾರಣ. 1979ನೇ ಇಸವಿ, ದೇವರಾಜ ಅರಸು ಆಗ ರಾಜ್ಯದ ಮುಖ್ಯ ಮಂತ್ರಿ. ಹಂಪ ನಾಗರಾಜಯ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಆಗ ಧರ್ಮಸ್ಥಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ನಡೆದಿತ್ತು. ಆಗ ಚೆನ್ನಣ್ಣ ವಾಲೀಕಾರ ಕಸಾಪ ಅಧ್ಯಕ್ಷ ಹಂಪನಾರಿಗೆ ಪತ್ರ ಬರೆದು ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಗೋಷ್ಠಿಯೊಂದನ್ನು ನಡೆಸಲು ಮನವಿ ಮಾಡಿದರು, ಆಗ ಹಂಪನಾ ಅವರು ಈ ಮನವಿಯನ್ನು ತಿರಸ್ಕರಿಸಿದರು. ‘‘ಸಾಹಿತ್ಯದಲ್ಲಿ ದಲಿತ, ಬಲಿತ, ಕಲಿತ ಎಂದೆಲ್ಲ ಇರುವುದಿಲ್ಲ ಸಾಹಿತ್ಯ ಅಂದರೆ ಸಾಹಿತ್ಯವಷ್ಟೆ, ಶುದ್ಧ ಸಾಹಿತ್ಯ’’ ಎಂದು ಹೇಳಿದರು. ಆಗ ಚೆನ್ನಣ್ಣ ಇದನ್ನು ಉಗ್ರವಾಗಿ ಪ್ರತಿಭಟಿಸಿದರು. ಕಸಾಪ ಅಧ್ಯಕ್ಷರ ಧೋರಣೆಯನ್ನು ವಿರೋಧಿಸಿ ಸಾಹಿತ್ಯ ಸಮ್ಮೇಳನ ನಡೆಯುವ ಸಂದರ್ಭದಲ್ಲೇ ಬೆಂಗಳೂರಿನ ದೇವಾಂಗ ಛತ್ರದಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಯಿತು. ಅದರಲ್ಲಿ ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ, ಡಿ.ಆರ್. ನಾಗರಾಜ್, ಕಿ.ರಂ. ನಾಗರಾಜ್, ಶೂದ್ರ ಶ್ರೀನಿವಾಸ, ರಂಜಾನ್ ದರ್ಗಾ, ಚೆನ್ನಣ್ಣ ವಾಲೀಕಾರ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲಿ ಮುಖ್ಯ ಅತಿಥಿಯಾಗಿ ಆಂಧ್ರಪ್ರದೇಶದ ಕ್ರಾಂತಿ ಕಾರಿ ಕವಿ ಶ್ರೀ ಶ್ರೀ ಬಂದಿದ್ದರು. ಅದೇ ಸಮ್ಮೇಳನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜನ್ಮ ತಾಳಿತು.

‘‘ನೀ ಹೋದ ಮರುದಿನ ಮೊದಲಾಂಗ ನಮ್ಮ ಬದುಕು ಆಗ್ಯಾದೋ ಬಾಬಾ ಸಾಹೇಬಾ’’ ಎಂದು ಅಂಬೇಡ್ಕರರ ಬಗ್ಗೆ ಚೆನ್ನಣ್ಣ ಬರೆದ ಹಾಡು ನಾಡಿನ ದಲಿತ, ಪ್ರಗತಿಪರ ಸಂಘಟನೆಗಳ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸುತ್ತಲೇ ಇದೆ. ಇಂತಹ ಚೆನ್ನಣ್ಣ ಕೊನೆಯ ದಿನಗಳನ್ನು ತುಂಬಾ ಯಾತನೆಯಲ್ಲೇ ಕಳೆದರು. ಲಿವರ್ ಕ್ಯಾನ್ಸರ್ ಅವರನ್ನು ತುಂಬ ಹಣ್ಣು ಮಾಡಿತ್ತು. ಎರಡು ವರ್ಷಗಳ ಕಾಲ ಅದರ ನೋವನ್ನು ಅನುಭವಿಸುತ್ತಿದ್ದರೂ ಎಲ್ಲೂ ಅದನ್ನು ತೋರಿಸಿಕೊಳ್ಳದೆ ನಗು ನಗುತ್ತಲೇ ಚೆನ್ನಣ್ಣ ಹುರುಪಿನಿಂದಲೇ ಮಾತಾಡುತ್ತಿದ್ದರು. ಈ ಬಾರಿ ಕಲಬುರಗಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಚೆನ್ನಣ್ಣ ವಹಿಸಿಕೊಳ್ಳಬೇಕೆಂಬ ಬಗ್ಗೆ ಚಿಂತನೆ ನಡೆದಿತ್ತು.

ಏಳೆಂಟು ವರ್ಷಗಳ ಹಿಂದೆ ಒಂದು ದಿನ ತಾವು ಬರೆದ ಪುಸ್ತಕಗಳ ದೊಡ್ಡ ಗಂಟನ್ನು ತಾವೇ ಹೊತ್ತುಕೊಂಡು ಬೆಂಗಳೂರಿನ ನಮ್ಮಮನೆಗೆ ಬಂದ ಚೆನ್ನಣ್ಣ ಓದಲು ಕೊಟ್ಟರು. ಮನೆಯಲ್ಲಿದ್ದ ನನ್ನ ಸಂಗಾತಿ ಶಶಿಕಲಾಗೆ ‘‘ತಂಗಿ ರೊಟ್ಟಿ ಮಾಡವಾ ಊಟ ಮಾಡಿ ಹೋಗ್ತೀನಿ’’ ಎಂದು ಕೇಳಿ ಜೋಳದ ರೊಟ್ಟಿ ಮಾಡಿಸಿಕೊಂಡು ತಿಂದರು. ತಿನ್ನಲು ಉಣ್ಣಲು ಚೆನ್ನಣ್ಣ ಎಂದೂ ಸಂಕೋಚ ಮಾಡುತ್ತಿರಲಿಲ್ಲ. ಹೊಟ್ಟೆ ತುಂಬ ಊಟ ಮಾಡುತ್ತಿದ್ದರು. ಅಂತಲೆ ಚಂಪಾ ಅವರು ‘‘ಚೆನ್ನಣ್ಣ ಊಟಕ್ಕೆ ಕುಳಿತರೆ ಶತಮಾನದ ಸೇಡು ತೀರಿಸಿಕೊಳ್ಳುತ್ತಾನೆ’’ ಎಂದು ಹೇಳುತ್ತಿದ್ದರು.

ಚೆನ್ನಣ್ಣ ಅಗಲಿಕೆ ಸೃಷ್ಟಿಸುವ ಶೂನ್ಯವನ್ನು ತುಂಬುವದು ಕಷ್ಟ ಎಲ್ಲರನ್ನೂ ಅಕ್ಕ, ತಂಗಿ, ತಮ್ಮ ಎಂದು ಕರೆಯುತ್ತಿದ್ದ ಚೆನ್ನಣ್ಣ ಅಗಲಿಕೆಯಿಂದ ಆ ಶಬ್ದಗಳೇ ತಬ್ಬಲಿಯಾದವು.

ಕೆಲ ತಿಂಗಳ ಹಿಂದೆ ಚೆನ್ನಣ್ಣ ಭೇಟಿಯಾದಾಗ ‘‘ನಾನು ಕಾರ್ಲ್ ಮಾರ್ಕ್ಸ್‌ನನ್ನು ಮಾತ್ರ ಓದಿಕೊಂಡೆ ಬುದ್ಧನನ್ನೂ ಇನ್ನಷ್ಟು ಓದಬೇಕಾಗಿತ್ತು’’ ಎಂದು ಹೇಳಿದರು. ಸಾವು ಕಣ್ಣೆದುರು ಬಂದು ನಿಂತಾಗಲೂ ಚೆನ್ನಣ್ಣನ ಓದಿನ, ಬರೆಯುವ ಹಸಿವು ಇಂಗಿರಲಿಲ್ಲ. ಆದರೆ ಕನ್ನಡ ಸಾರಸ್ವತ ಲೋಕ ಅದರಲ್ಲೂ ವಿಮರ್ಶಾ ವಲಯ ಚೆನ್ನಣ್ಣನವರ ಬರಹಕ್ಕೆ ನ್ಯಾಯ ಒದಗಿಸಲಿಲ್ಲ. ಅವರ ಬರಹವನ್ನು ವಿಮರ್ಶಕರು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈ ನೋವು ಚೆನ್ನಣ್ಣನವರಲ್ಲಿ ಕೊನೆಯವರೆಗೂ ಇತ್ತು. ಜಾತಿ ಮತ್ತು ವರ್ಗ ಆಧರಿತ ಸಮಾಜದಲ್ಲಿ ಸಾಹಿತ್ಯ ವಿಮರ್ಶೆಯಲ್ಲಿ ಒಮ್ಮಾಮ್ಮೆ ಸಾಹಿತ್ಯೇತರ ಮಾನದಂಡಗಳು ಪರಿಗಣಿಸಲ್ಪಡುವುದರಿಂದ ಹೀಗಾಗುತ್ತದೆ.

ಚೆನ್ನಣ್ಣ ವಾಲೀಕಾರರ ಅಗಲಿಕೆ ಈ ದುರಿತ ಕಾಲದಲ್ಲಿ ನಿಜಕ್ಕೂ ತುಂಬಲಾಗದ ಕೊರತೆ. ಭಾರತೀಯ ಸಮಾಜ ಸಮಾನತೆಯ ಬೆಳಕಿನಿಂದ ಮುಖ ತಿರುಗಿಸಿ ಕೋಮು ಮತ್ತು ಜಾತಿಯ ಕಂದಾಚಾರದ ಕಾರ್ಗತ್ತಲಿನತ್ತ ಹೊರಟಿರುವಾಗ ಚೆನ್ನಣ್ಣ ಇನ್ನಷ್ಟು ಕಾಲ ಇರಬೇಕಾಗಿತ್ತು ಎಂದು ನಮ್ಮ ಸಮಾಧಾನಕ್ಕೆ ನಾವು ಹೇಳುತ್ತೇವೆ. ಆದರೆ ಸಾವು ಕ್ರೂರ ಅದಕ್ಕೆ ಕರುಣೆ ಎಂಬುದಿಲ್ಲ. ಇದು ಜೀವ ಜಗತ್ತಿನ ಸಹಜ ಪ್ರಕ್ರಿಯೆ.

Writer - ಸನತಕುಮಾರ ಬೆಳಗಲಿ

contributor

Editor - ಸನತಕುಮಾರ ಬೆಳಗಲಿ

contributor

Similar News