ಅನರ್ಹ ಶಾಸಕರ ಹಣ, ಹೆಂಡಕ್ಕೆ ಆಸೆ ಪಡಬೇಡಿ: ಶಾಸಕಿ ಸೌಮ್ಯರೆಡ್ಡಿ

Update: 2019-11-27 13:43 GMT

ಬೆಂಗಳೂರು, ನ.27: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದು, ಅವರನ್ನು ಜನರು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಶಾಸಕಿ ಸೌಮ್ಯರೆಡ್ಡಿ ಮನವಿ ಮಾಡಿದ್ದಾರೆ.

ಬುಧವಾರ ನಗರದ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರ ಗಣಪತಿ ನಗರದಲ್ಲಿ ಬಹಿರಂಗ ಪ್ರಚಾರ ನಡೆಸಿದ ಅವರು, ಶಿವರಾಜು ಮೂರು ಬಾರಿ ಬಿಬಿಎಂಪಿ ಸದಸ್ಯರಾಗಿ ಅಪಾರವಾಗಿ ಜನಮನ್ನಣೆ ಗಳಿಸಿದ್ದಾರೆ ಎಂದು ಹೇಳಿದರು.

ಮತದಾರರು ಅನರ್ಹ ಶಾಸಕರು ನೀಡುವ ಹಣ, ಹೆಂಡಕ್ಕೆ ಆಸೆ ಪಡಬೇಡಿ. ಜನರೊಂದಿಗೆ ಇದ್ದು, ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ, ಮತ ಚಲಾಯಿಸಿ. ಶಿವರಾಜುರನ್ನು ಮುಂದಿನ ಶಾಸಕರನ್ನಾಗಿ ಆಯ್ಕೆ ಮಾಡಿ ಎಂದು ಕೋರಿದರು.

ಅಭ್ಯರ್ಥಿ ಶಿವರಾಜು ಮಾತನಾಡಿ, ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಾಮಮಾರ್ಗದ ಮೂಲಕ ಅಧಿಕಾರ ಪಡೆದಿರುವ ಬಿಜೆಪಿ, ಅನರ್ಹ ಶಾಸಕರನ್ನೇ ಈಗ ನಿಲ್ಲಿಸಿದೆ. ಅಧಿಕಾರದಲ್ಲಿರುವ ಪಕ್ಷವು ಚುನಾವಣಾ ಆಯೋಗವನ್ನು ತಮ್ಮ ಕೈಗೊಂಬೆಯಾಗಿಸಿಕೊಂಡಿದೆ ಎಂದು ದೂರಿದರು.

ಮಹಾಲಕ್ಷ್ಮಿಲೇಔಟ್ ಕ್ಷೇತ್ರದಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲು ಅಧಿಕಾರಿಗಳೇ ಇಲ್ಲ. ಅವರ ವಾಹನಗಳ ಮೂಲಕ ಕೋಟ್ಯಂತರ ರೂಪಾಯಿ ಹಣ ಸಾಗಾಟ ಮಾಡಲಾಗುತ್ತಿದೆ. ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿ, ಅಧಿಕಾರ ಉಳಿಸಿಕೊಳ್ಳಲು ಹಣ, ಹೆಂಡ ಹಂಚುತ್ತಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News