ಅಬುಧಾಬಿ: ಅನಿವಾಸಿ ಕನ್ನಡಿಗರ ಒಕ್ಕೂಟದಿಂದ ಯುಎಇ ನ್ಯಾಷನಲ್ ಡೇ ಕಪ್ ಕ್ರಿಕೆಟ್ ಪಂದ್ಯಾಟ

Update: 2019-12-02 04:08 GMT

ಅಬುಧಾಬಿ, ಡಿ.2: ಅನಿವಾಸಿ ಕನ್ನಡಿಗರ ಒಕ್ಕೂಟ, ಅಬುಧಾಬಿ ವತಿಯಿಂದ ಯುಎಇ ನ್ಯಾಷನಲ್ ಡೇ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.

ಈ ಪಂದ್ಯಾಟದಲ್ಲಿ ಕರ್ನಾಟಕದ ವಿವಿದ ಜಿಲ್ಲೆಗಳ ತಂಡಗಳಾದ ಕರ್ನಾಟಕ ವಾರಿಯರ್ಸ್, ಅಬುಧಾಬಿ ಟೈಗರ್ಸ್, ಟೀಮ್ ಮುಸಾಫ್ಫಾ, ಎಲೆಕ್ಟ್ರಾ ಚಾಲೆಂಜರ್ಸ್, ಅರೇಬಿಯನ್ ಲಯನ್ಸ್ ಹಾಗೂ ಎಲೆಕ್ಟ್ರಾ ರಾಯಲ್ಸ್ ತಂಡಗಳು ಭಾಗವಹಿಸಿದ್ದವು.

ಅಶ್ರಫ್ ಅಹ್ಮದ್ ಬೈಲೂರ್ ಅವರು ಅನಿವಾಸಿ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಶಾಫಿ ತಿಂಗಳಾಡಿಯವರ ಎಸೆತವನ್ನೆದುರಿಸಿ ನ್ಯಾಷನಲ್ ಡೇ ಕಪ್ ಕ್ರಿಕೆಟ್ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಉದ್ಘಾಟನಾ ಪಂದ್ಯದಲ್ಲಿ ಎಲೆಕ್ಟ್ರಾ ಚಾಲೆಂಜರ್ಸ್ ತಂಡವು ಸುಲಭವಾಗಿ ಅಬುಧಾಬಿ ಟೈಗರ್ಸ್ ತಂಡವನ್ನು ಮಣಿಸಿ ನೇರ ಸೆಮಿಫೈನಲ್ ಗೆ ಏರಿತು.

ಸಾದಿಕ್ ಶೃಂಗೇರಿಯವರ ಅಮೋಘ ಅರ್ಧ ಶತಕದ ನೆರವಿನಿಂದ ಟೀಮ್ ಮುಸಾಫ್ಫಾ ತಂಡವು ಕರ್ನಾಟಕ ವಾರಿಯರ್ಸ್ ತಂಡದ ಮೇಲೆ ಸವಾರಿ ಮಾಡಿ ಸೆಮಿಫೈನಲ್ ಗೆ  ಪ್ರವೇಶ ಪಡೆಯಿತು.

ಮತ್ತೊಂದು ಪಂದ್ಯದಲ್ಲಿ ಅರೇಬಿಯನ್ ಲಯನ್ಸ್ ನೀಡಿದ ಕಠಿಣ ಸವಾಲನ್ನು ಗೆಲುವನ್ನಾಗಿಸಿದ ಎಲೆಕ್ಟ್ರಾ ರಾಯಲ್ಸ್ ತಂಡವು ಸೆಮಿಫೈನಲ್ ಗೆ ಪ್ರವೇಶಿಸಿತು.

ಕುತೂಹಲ ಘಟ್ಟ ಮೂಡಿಸಿದ ಕೊನೆಯ ಲೀಗ್ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ನಾಲ್ಕು ರನ್ ಆವಶ್ಯಕತೆ ಇದ್ದಾಗ ತಂಡದ ನಾಯಕ ಹಾರೂನ್ ಕೊಡ್ಲಿಪೇಟ್ ಬೌಂಡರಿ ಬಾರಿಸಿ ಕರ್ನಾಟಕ ವಾರಿಯರ್ಸ್ ತಂಡಕ್ಕೆ ಸೆಮಿಫೈನಲ್ ನಲ್ಲಿ ಸ್ಥಾನ ಖಚಿತಪಡಿಸಿದರು.

ರೋಮಾಂಚಕಾರಿಯಾದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸಾದಿಕ್ ರ ಅರ್ಧ ಶತಕದ ನೆರವಿನಿಂದ ಟೀಮ್ ಮುಸಾಫ್ಫಾ ತಂಡ ಫೈನಲ್ ತಲುಪಿದರೆ, ಎರಡನೇ ಸೆಮಿಫೈನಲ್ ನಲ್ಲಿ ಸಾಂಘಿಕ ಪ್ರಯತ್ನ ನಡೆಸಿದ ಕರ್ನಾಟಕ ವಾರಿಯರ್ಸ್ ಗೆಲುವಿನ ನಗೆ ಬೀರಿತು.

ಪ್ರತಿ ಎಸೆತದಲ್ಲೂ ಕುತೂಹಲ ಮೂಡಿಸಿದ ಫೈನಲ್ ಪಂದ್ಯದಲ್ಲಿ ಗೆಲುವು ಎರಡು ತಂಡಗಳ ಮದ್ಯೆ ಅತ್ತಿಂದಿತ್ತ ಓಡಿ ಕೊನೆಗೆ ಟೀಮ್ ಮುಸಾಫ್ಫಾದ ಕೊರಳಿಗೆ ಬಿತ್ತು. ಅಜೇಯ ಆಟ ಆಡಿದ ಟೀಮ್ ಮುಸಾಫ್ಫಾ ಚಾಂಪಿಯನ್ ಆದರೆ ರನ್ನರ್ ಅಪ್ ಗೆ ಕರ್ನಾಟಕ ವಾರಿಯರ್ಸ್ ತೃಪ್ತಿ ಪಟ್ಟುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಝಾಕ್ ಅಡ್ಯನಡ್ಕ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದ ನಿಮ್ಮನ್ನು ನೋಡಲು ಖುಷಿಯಾಗುತ್ತಿದೆ, ಇದೇ  ರೀತಿ ಇನ್ನು ಹಲವು ಕ್ರೀಡಾಕೂಟವನ್ನು ಆಯೋಜಿಸಿ ಮತ್ತು ಎಂದಿಗೂ ನಮ್ಮ ಸಹಕಾರ ನಿಮಗಿದೆ ಎಂದರು.

 ಅಸ್ಲಂ ಕಾಪು, ಅಶ್ರಫ್ ಅಹ್ಮದ್ ಬೈಲೂರು ಹಾಗೂ ಬಶೀರ್ ಸಂಪ್ಯ ಮಾತನಾಡಿ ಶುಭ ಹಾರೈಸಿದರು.

ಅನಿವಾಸಿ ಕನ್ನಡಿಗರ ಒಕ್ಕೂಟ್ಟದ ಅಧ್ಯಕ್ಷ ಶಾಫಿ ತಿಂಗಳಾಡಿ ಅಧ್ಯಕ್ಷತೆ ವಹಿಸಿದ್ದರು.

ನ್ಯಾಷನಲ್ ಡೇ ಕಪ್ ಜಯಿಸಿದ ಟೀಮ್ ಮುಸಾಫ್ಫಾ ಕ್ಯಾಪ್ಟನ್ ಮುಬಾರಕ್ ಫರಂಗಿಪೇಟೆ ಮುಖ್ಯ ಅತಿಥಿಗಳಿಂದ ಟ್ರೋಫಿ ಸ್ವೀಕರಿಸಿದರು.

ಅನಿವಾಸಿ ಕನ್ನಡಿಗರ ಒಕ್ಕೂಟದ  ಪ್ರದಾನ  ಕಾರ್ಯದರ್ಶಿ ಶರೀಫ್ ಸರ್ವೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಅಂಪೈರ್ ಗಳಾಗಿ ಇಕ್ಬಾಲ್ ಆತೂರ್, ಬಶೀರ್ ಕೊಡ್ಲಿಪೇಟೆ, ಮುಸ್ತಫಾ ಸವಣೂರು, ಸಮದ್ ಸಂಟ್ಯಾರ್ ಸಹಕರಿಸಿದರು.

ಕ್ರಿಕೆಟ್ ಟೂರ್ನಮೆಂಟ್ ನಿರ್ದೇಶಕ ಯಹ್ಯಾ ಕೊಡ್ಲಿಪೇಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News