ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ‘ದೇಶದ ಹಿತಾಸಕ್ತಿಗೆ ಮಾರಕ’
ಬೆಂಗಳೂರು, ಡಿ.8: ಕೇಂದ್ರ ಸರಕಾರ ಸಂಸತ್ತಿನ ಮುಂದಿಡಲು ಅನುಮೋದಿಸಿರುವ ಪೌರತ್ವ ತಿದ್ದುಪಡಿ ಮಸೂದೆ (2019) ಅನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಸದಸ್ಯರು, ಈ ಮಸೂದೆ ದೇಶದ ಹಿತಾಸಕ್ತಿಗೆ ಮಾರಕ ಎಂದು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ರವಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ಪ್ರಗತಿಪರ ಸಂಘಟನೆಗಳ ಸದಸ್ಯರು, ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಈ ಮಸೂದೆ ಭಾರತದ ಮತಾತೀತ ಸಮಾಜಕ್ಕೆ ಹಾನಿ ಮಾಡಲಿದೆ ಎಂದು ದೂರಿದರು.
ನಮ್ಮ ಸಂವಿಧಾನವು ಸಮಾನತೆಯ ಭರವಸೆ ನೀಡಿ, ಮತ, ಜನಾಂಗ, ಜಾತಿ, ಲಿಂಗ, ಅಥವಾ ಜನ್ಮ ಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡಬಾರದೆಂದು ಸ್ಪಷ್ಟವಾಗಿ ಹೇಳಿದೆ. ಈ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಣಿ ಕಾಯ್ದೆಯೂ ಮೌಲ್ಯಗಳ ವಿರುದ್ಧವಾಗಿವೆ ಎಂದು ಆರೋಪಿಸಿದರು.
ದೇಶದ ಆರ್ಥಿಕತೆ ಹಿಂದಕ್ಕೆ ಸಾಗಿರುವುದನ್ನು ಮರೆಮಾಚಲು ಕೇಂದ್ರ ಸರಕಾರವು ಭಾವನಾತ್ಮಕ ವಿಷಯಗಳನ್ನು ಹೆಚ್ಚಾಗಿ ಹರಡಿಸಲು ಮುಂದಾಗಿದೆ. ಅಲ್ಲದೆ, ಪೌರತ್ವ ತಿದ್ದುಪಡಿ ಮಸೂದೆ ಅನ್ನು ಯಾವುದೇ ಕಾರಣಕ್ಕೆ ಸಂಸತ್ತಿನಲ್ಲಿ ಮಂಡನೆ ಮಾಡಬಾರದು. ಒಂದು ವೇಳೆ, ಮಂಡಿಸಿದ್ದೇ ಅದಲ್ಲಿ ಹೋರಾಟ ಮುಂದುವರೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.