ಮಂಗಳೂರು ಗೋಲಿಬಾರ್ ಹೊಣೆ ಸಿಎಂ ಹೊರಬೇಕು: ಕುಮಾರಸ್ವಾಮಿ
ಬೆಂಗಳೂರು, ಡಿ.20: ‘ಫೈರ್ ಮಾಡಿದೆವು, ಒಂದು ಗುಂಡೂ ಬೀಳಲಿಲ್ಲವಲ್ಲ, ಒಬ್ಬರೂ ಸಾಯಲಿಲ್ವಲ್ಲ’ ಇದು ಮಂಗಳೂರು ಪ್ರತಿಭಟನೆ ವೇಳೆ ಹೋರಾಟಗಾರರನ್ನು ಕೊಂದ ಪೊಲೀಸ್ ಅಧಿಕಾರಿಯೊಬ್ಬರ ಮಾತು. ಸರಕಾರವೆ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿ ನಿಂತಿದೆ. ಇದರ ಹೊಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹೊರಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವಿಟ್ ಮಾಡಿ ಆಗ್ರಹಿಸಿದ್ದಾರೆ.
ಹೋರಾಟಗಾರರನ್ನು ಕಂಡೊಡನೇ ಗುಂಡಿಕ್ಕಲು ಆದೇಶಿಸುವ ಬಿ.ಎಸ್. ಯಡಿಯೂರಪ್ಪತಾವೂ ಹೋರಾಟಗಳಿಂದಲೇ ರಾಜಕೀಯದಲ್ಲಿ ಮೇಲೇರಿದವರು ಎಂಬುದನ್ನು ‘ಅನರ್ಹ ಅಧಿಕಾರ’ದ ಮದ ಮರೆಸಿದಂತಿದೆ. ಅವರ ಹೋರಾಟಗಳನ್ನು ಹಿಂದಿನ ಸರಕಾರಗಳು ಬಂದೂಕು, ಗುಂಡುಗಳಿಂದ ಹತ್ತಿಕ್ಕಿದ್ದವೇ? ಹೀಗಿದ್ದೂ, ಹೋರಾಟಗಳ ಮೇಲೆ ಬಿಎಸ್ವೈಗೆ ಏಕೆ ಇಷ್ಟು ದ್ವೇಷ? ಎಂದು ಅವರು ಪ್ರಶ್ನಿಸಿದ್ದಾರೆ.
ಹಿಂದಿನ ಸರಕಾರದಲ್ಲಿ ರೈತರನ್ನು ಕೊಂದ, ಈ ಬಾರಿ ಅಮಾಯಕ ಹೋರಾಟಗಾರರನ್ನು ಕೊಂದ ಬಿಎಸ್ವೈ ನೈತಿಕ ಹೊಣೆಗಾರಿಕೆ ಅರಿತು ಈ ಕೂಡಲೇ ಮೃತ ಹೋರಾಟಗಾರ ಕುಟುಂಬಗಳ ಕ್ಷಮೆ ಕೋರಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಅಧಿಕಾರದ ಅಮಲಿನಲ್ಲಿರುವವರ ದಾಹ, ಕ್ರೌರ್ಯಕ್ಕೆ ಪ್ರಜೆಗಳ ಹೆಣಗಳು ತೋರಣದಂತೆ ಕಟ್ಟಲ್ಪಡುತ್ತಿರುತ್ತವೆ. ಅಧಿಕಾರ ಹಪಾಹಪಿಗಳು ಸಾವಿನ ದಲ್ಲಾಳಿಗಳಾಗುತ್ತಾರೆ. ಇಂಥವರೇ ತುಂಬಿರುವ ಜನ ವಿರೋಧಿ ಪ್ರಭುತ್ವ ಅಂತ್ಯ ಕಾಲ ಸಮೀಪಿಸಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.