ಭಾರತೀಯರು ಬ್ಯಾಂಕ್ ಕೆವೈಸಿಯಲ್ಲಿ ಧರ್ಮ ನಮೂದಿಸಬೇಕಿಲ್ಲ: ಹಣಕಾಸು ಸಚಿವಾಲಯದ ಸ್ಪಷ್ಟನೆ
Update: 2019-12-22 12:49 GMT
ಹೊಸದಿಲ್ಲಿ: ಬ್ಯಾಂಕ್ ಖಾತೆ ತೆರೆಯುವ ಸಂದರ್ಭ ಗ್ರಾಹಕರು ಸಲ್ಲಿಸುವ ಕೆವೈಸಿ ಅರ್ಜಿ ನಮೂನೆಯಲ್ಲಿ ಭಾರತೀಯ ನಾಗರಿಕರು ತಮ್ಮ ಧರ್ಮವನ್ನು ನಮೂದಿಸುವ ಅಗತ್ಯ ಇಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ವಿಭಾಗದ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿ ಈ ಸ್ಪಷ್ಟನೆ ನೀಡಿದ್ದಾರೆ. ಬ್ಯಾಂಕ್ ಗಳ ಕೆವೈಸಿ ನಮೂನೆಯಲ್ಲಿ ಧರ್ಮವನ್ನು ನಮೂದಿಸುವುದನ್ನು ಕಡ್ಡಾಯಪಡಿಸಲಾಗುತ್ತಿದೆ ಎನ್ನುವುದು ಬರೀ ವದಂತಿ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪ್ಘಾನಿಸ್ತಾನದಿಂದ ಆಗಮಿಸಿ, ಧೀರ್ಘಾವಧಿ ವೀಸಾ ಹೊಂದಿರುವ ಹಿಂದೂ, ಸಿಕ್ಖ್, ಬೌದ್ಧ, ಜೈನ,ಪಾರ್ಸಿ ಮತ್ತು ಕ್ರಿಶ್ಚಿಯನ್ ನಿರಾಶ್ರಿತರು ಬ್ಯಾಂಕ್ ಖಾತೆ ತೆರೆಯಲು ಸಲ್ಲಿಸುವ ಕೆವೈಸಿಯಲ್ಲಿ ತಮ್ಮ ಧರ್ಮದ ಹೆಸರು ನಮೂದಿಸುವುದನ್ನು ಕಡ್ಡಾಯಪಡಿಸಲಾಗುತ್ತಿದೆ ಎಂಬ ಮಾಧ್ಯಮ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.