ಹಲಸೂರು ಕೆರೆ ಸ್ವಚ್ಛತಾ ಅಭಿಯಾನ: 65 ಲೋಡ್ ತ್ಯಾಜ್ಯ ಹೊರಕ್ಕೆ !
ಬೆಂಗಳೂರು, ಡಿ.27: ಬಿಬಿಎಂಪಿ ಸಿಬ್ಬಂದಿ, ಮಾರ್ಷಲ್ಗಳು, ಎಂ.ಇ.ಜಿ(ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್) ಸೈನಿಕರ ಸಹಯೋಗದಲ್ಲಿ ಕಳೆದ 5 ದಿನಗಳಿಂದ ಹಲಸೂರು ಕೆರೆ ಸ್ವಚ್ಛತಾ ಕಾರ್ಯನಡೆಯುತ್ತಿದ್ದು, ಸ್ವಚ್ಛತಾ ಅಭಿಯಾನವನ್ನು ಪಾಲಿಕೆ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಶುಕ್ರವಾರ ಪರಿಶೀಲನೆ ನಡೆಸಿದರು.
113 ಎಕರೆ ವ್ಯಾಪ್ತಿಯುಳ್ಳ ಹಲಸೂರು ಕೆರೆಯನ್ನು 100 ಸೈನಿಕರು, 50 ಮಾರ್ಷಲ್ಗಳು ಹಾಗೂ ಬಿಬಿಎಂಪಿ ಸಿಬ್ಬಂದಿಗಳು ಕಳೆದ 4 ದಿನಗಳಿಂದ 10 ಬೋಟ್ಗಳ ಸಹಯೋಗದಲ್ಲಿ ಕೆರೆಯ ಅಂಗಳದಲ್ಲಿ ಬೆಳೆದಿರುವ ಕಳೆ, ಪ್ಲಾಸ್ಟಿಕ್ ಮತ್ತು ಥರ್ಮಕೋಲ್ ಶೀಟ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸ್ವಚ್ಛತಾ ಕಾರ್ಯ ಕೈಗೊಂಡಿರುವ ಬಗ್ಗೆ ಕೆರೆ ಭಾಗದ ಮುಖ್ಯ ಅಭಿಯಂತರ ಮೋಹನ್ ಕೃಷ್ಣ ಮಾತನಾಡಿ, ನಗರ ಕೇಂದ್ರ ಭಾಗದಲ್ಲಿ ಹಲಸೂರು ಕೆರೆ, ಕೆಂಪಾಂಬುದಿ ಕೆರೆ ಹಾಗೂ ಸ್ಯಾಂಕಿ ಟ್ಯಾಂಕಿ ಬಹಳ ಪ್ರಖ್ಯಾತಿ ಪಡೆದಿರುವ ಕೆರೆಗಳಾಗಿವೆ. ಹಲಸೂರು ಕೆರೆಯಲ್ಲಿ ಕಳೆದ ಆರು ತಿಂಗಳಿಂದ ಶೇ.40ರಷ್ಟು ಅಯಾಸಿಂತ್ ಎಂಬ ಕಳೆ(ನೀರಲ್ಲಿ ತೇಲುವ ಕಳೆ) ಕೆರೆಯ ಅಂಗಳದಲ್ಲಿ ಬೆಳೆದಿತ್ತು. ಈ ಸಂಬಂಧ ಕೆರೆಯನ್ನು ಎಂ.ಇ.ಜಿಯವರು ಬಳಕೆ ಮಾಡಿಕೊಳ್ಳುತ್ತಿದ್ದ ಪರಿಣಾಮ ಮೇಯರ್ ಹಾಗೂ ಪಾಲಿಕೆ ಆಯುಕ್ತರ ಜತೆ ಚರ್ಚಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಮುಂದಾಗಲಾಯಿತು ಎಂದು ತಿಳಿಸಿದರು.
ಪಾಲಿಕೆ ಸಿಬ್ಬಂದಿ, 50 ಮಾರ್ಷಲ್ ಹಾಗೂ 100 ಮಂದಿ ಎಂ.ಇ.ಜಿ ಸೈನಿಕರು ಸೇರಿ ಕಳೆದ ಸೋಮವಾರದಿಂದ 10 ಬೋಟ್ಗಳ ಸಹಯೋಗದಲ್ಲಿ ಕೆರೆಯ ಅಂಗಳದಲ್ಲಿ ಬೆಳೆದಿದ್ದ ಅಯಾಸಿಂತ್, ಪ್ಲಾಸ್ಟಿಕ್, ಥರ್ಮಕೋಲ್, ಸಾರ್ವಜನಿಕರು ಕೆರೆಗೆ ಹಾಕಿದ್ದ ತ್ಯಾಜ್ಯ ಸೇರಿದಂತೆ 65 ಟ್ರಕ್ ಲೋಡ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದರು.
ಇನ್ನೂ ಒಂದು ವಾರದ ಕಾಲ ಸ್ವಚ್ಛತಾ ಕಾರ್ಯ ನಡೆಸಿ ಸಂಪೂರ್ಣ ಕೆರೆಯನ್ನು ಸ್ವಚ್ಛಗೊಳಿಸಲಾಗವುದು. ವೆಟ್ ಲ್ಯಾಂಡ್ನಲ್ಲಿರುವ ಕಳೆಯನ್ನು ಸೈನಿಕರು ತೆರವುಗೊಳಿಸಲು ಸಾಧ್ಯವಾಗುವುದಿಲ್ಲ. ಪಾಲಿಕೆ ಸಿಬ್ಬಂದಿಯ ಸಹಯೋಗದಲ್ಲಿ ತೆರವುಗೊಳಿಸಲು ಕ್ರಮವಹಿಸಲಾಗುವುದು. ಕೆರೆ ಸ್ವಚ್ಛಗೊಳಿಸಲು ಪಾಲಿಕೆಯಿಂದ ಯಾವುದೇ ಹಣ ವ್ಯಯಿಸಿಲ್ಲ ಎಂದರು.
ಕೆರೆ ಸುತ್ತಲಿನ ಪ್ರದೇಶದ ನಿರ್ವಹಣೆಗಾಗಿ ಮಾತ್ರ ಪ್ರೆಸ್ಟೀಜ್ ಗ್ರೂಪ್ ಜೊತೆ ಪಾಲಿಕೆ ಒಡಂಬಡಿಕೆ ಮಾಡಿಕೊಂಡಿತ್ತು. ಆ ಒಡಂಬಡಿಕೆ ಕಳೆದ ನವೆಂಬರ್ನಲ್ಲಿಯೇ ಪೂರ್ಣಗೊಂಡಿದೆ. ಇದೀಗ ಹೊಸದಾಗಿ ಪ್ರೆಸ್ಟೀಜ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದ್ದು, ಸಂಪೂರ್ಣ ಕೆರೆಯನ್ನು ನಿರ್ವಹಣೆ ಮಾಡುವ ಒಪ್ಪಂದದ ಮೇರೆಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ನಾಗರಿಕರು ರಾಜಕಾಲುವೆ ಮತ್ತು ಗುರುದ್ವಾರದ ಬಳಿಯ ಕೆರೆ ಜಾಗದಲ್ಲಿ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಆ ತ್ಯಾಜ್ಯವನ್ನು ಈಗಾಗಲೇ ಜೆಸಿಬಿಯ ಮೂಲಕ ತೆರವುಗೊಳಿಸಲಾಗಿದೆ. ಮುಂದೆ ಅಲ್ಲಿ ತ್ಯಾಜ್ಯ ಸುರಿಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆರೆ ಸುತ್ತಲಿನ ಪ್ರದೇಶವನ್ನು ಸ್ವಚ್ಛ ಮಾಡಿ ಸಾರ್ವಜನಿಕರ ವಾಯುವಿಹಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಸೂಕ್ತ ಕ್ರಮವಹಿಸಲಾಗುವುದು ಎಂದು ಹೇಳಿದರು.