ಫೀಲ್ಡಿಂಗ್ ವೇಳೆ ಪೃಥ್ವಿ ಶಾಗೆ ಕಾಣಿಸಿಕೊಂಡ ಭುಜನೋವು

Update: 2020-01-04 04:24 GMT

ಮುಂಬೈ, ಜ.3: ಭಾರತ ‘ಎ’ ತಂಡದೊಂದಿಗೆ ನ್ಯೂಝಿಲ್ಯಾಂಡ್‌ಗೆ ತೆರಳಲು ಕೆಲವೇ ವಾರ ಬಾಕಿ ಇರುವಾಗ ಪೃಥ್ವಿ ಶಾಗೆ ಭುಜನೋವು ಕಾಣಿಸಿಕೊಂಡಿದೆ. ಕರ್ನಾಟಕ ವಿರುದ್ಧ ಶುಕ್ರವಾರ ಆರಂಭವಾದ ರಣಜಿ ಟ್ರೋಫಿ ಪಂದ್ಯದಲ್ಲಿ ಫೀಲ್ಡಿಂಗ್ ನಿರತರಾಗಿದ್ದಾಗ ಪೃಥ್ವಿ ಅವರ ಎಡ ಭುಜಕ್ಕೆ ಗಾಯವಾಗಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ಓವರ್ ಥ್ರೋ ತಡೆಯಲು ಮೇಲಕ್ಕೆ ಹಾರಿದ ಸಂದರ್ಭದಲ್ಲಿ ಪೃಥ್ವಿ ಶಾಗೆ ಗಾಯವಾಗಿದೆ. ಆಗ ಅವರು ತಕ್ಷಣವೇ ಮೈದಾನದಿಂದ ಹೊರ ನಡೆದರು. ಮುಂಬರುವ ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಭಾರತ ‘ಎ’ ತಂಡಕ್ಕೆ ಪೃಥ್ವಿ ಶಾ ಆಯ್ಕೆಯಾಗಿದ್ದಾರೆ. ಭಾರತ ‘ಎ’ ತಂಡ ಜ.10 ರಂದು ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದೆ. ದಿನದಾಟ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಂಬೈ ನಾಯಕ ಸೂರ್ಯಕುಮಾರ್ ಯಾದವ್,‘‘ಮೈದಾನದಲ್ಲಿ ನೋಡುವಾಗ ಅವರು(ಶಾ) ಅಷ್ಟೊಂದು ಚೆನ್ನಾಗಿರಲಿಲ್ಲ. ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಪರಿಸ್ಥಿತಿ ಹೇಗೆಂಬ ಕುರಿತು ಫಿಸಿಯೋ ಅವರೊಂದಿಗೆ ಮಾತನಾಡಿದ ಬಳಿಕ ಸ್ಪಷ್ಟವಾಗಲಿದೆ’’ ಎಂದು ತಿಳಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಪೃಥ್ವಿ ಶಾ ಎಂಆರ್‌ಐ ಸ್ಕಾನಿಂಗ್‌ಗೆ ಒಳಗಾಗುವ ಸಾಧ್ಯತೆಯಿದೆ ಎಂದು ಮುಂಬೈ ತಂಡದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News